
ಭಾರತದಲ್ಲಿ ಕ್ರಿಕೆಟ್ ಎಂಬುದು ಎಷ್ಟು ಜನಪ್ರಿಯ ಆಟ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಆಟಗಾರ ಆದಾಯ ಅದೆಷ್ಟು ಉನ್ನತ ಮಟ್ಟದಲ್ಲಿರುತ್ತದೆ ಎಂಬುದು ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿದೆ. ಐಪಿಎಲ್, ಜಾಹೀರಾತು ಹೀಗೆ ಅನೇಕ ಮೂಲಗಳಿಂದ ಕ್ರಿಕೆಟ್ ಆಟಗಾರರು ಕೋಟಿ ಕೋಟಿ ಮೊತ್ತವನ್ನು ಸಂಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ ಭಾರತೀಯ ಪುರುಷ ಕ್ರಿಕೆಟ್ ತಂಡದ ಆಟಗಾರರಿಗೂ ಮಹಿಳಾ ಆಟಗಾರರಿಗೂ ಹೋಲಿಕೆ ಮಾಡಿದರೆ ಅಜಗಜಾಂತರ ವ್ಯತ್ಯಾಸವಿದೆ. ಇದಕ್ಕೆ ಪೂರಕವಾದ ಘಟನೆಯೊಂದು ಬೆಳಕಿಗೆ ಬಂದಿದ್ದು ಕ್ರಿಕೆಟ್ ಪ್ರಿಯರು ಅಚ್ಚರಿ ಪಡುವಂತಾಗಿದೆ.
ಬಿಸಿಸಿಐನ ಮಾಜಿ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ ಆಗಿದ್ದ ವಿನೋದ್ ರಾಯ್ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರ ಸಂಕಷ್ಟದ ಸಂದರ್ಭದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಅಧಿಕಾರದ ಸಂದರ್ಭದಲ್ಲಿ ಮಹಿಳಾ ಕ್ರಿಕೆಟ್ ಬಗ್ಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗದ ಬಗ್ಗೆ ತನಗೆ ಬೇಸರವಿದೆ ಎಂದಿದ್ದಾರೆ. ಆದರೆ 2017ರ ವಿಶ್ವಕಪ್ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ್ತಿಯರು ಟೂರ್ನಿಯ ಫೈನಲ್ ಹಂತಕ್ಕೆ ಪ್ರವೇಶಿಸಿದ್ದರೂ ತಂಡ ಸಾಕಷ್ಟು ಸಂಕಷ್ಟವನ್ನು ಅನುಭವಿಸಿತ್ತು ಎಂದಿದ್ದಾರೆ. ಅಲ್ಲದೆ ಹರ್ಮನ್ಪ್ರೀತ್ ಕೌರ್ 171 ರನ್ಗಳನ್ನು ಬಾರಿಸುವವರೆಗೆ ತಂಡದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಗಮನ ನೀಡಿರಲಿಲ್ಲ ಎಂಬುದನ್ನು ರಾಯ್ ಹೇಳಿಕೊಂಡಿದ್ದಾರೆ.
"ಸರ್ ನನ್ನ ಕಾಲುಗಳು ಸೆಳೆಯುತ್ತಿತ್ತು. ಹೀಗಾಗಿ ನಾನು ಹೆಚ್ಚು ಓಡಲು ಸಾಧ್ಯವಿರಲಿಲ್ಲ. ಸಾನು ಸಿಕ್ಸರ್ಗಳನ್ನು ಬಾರಿಸಬೇಕಿತ್ತು" ಎಂದು ಹರ್ಮನ್ಪ್ರೀತ್ ಕೌರ್ ತಮ್ಮ ಇನ್ನಿಂಗ್ಸ್ನ ಬಗ್ಗೆ ಹೇಳಿಕೊಂಡಿರುವುದನ್ನು ರಾಯ್ ನೆನಪಿಸಿಕೊಂಡಿದ್ದಾರೆ. ಇನ್ನು "ಆಟಗಾರ್ತಿಯರು ಬಯಸಿದ್ದ ಆಹಾರವನ್ನು ಅವರು ಉಳಿದುಕೊಂಡಿದ್ದ ಹೋಟೆಲ್ನಲ್ಲಿ ಸೇವಿಸಲು ಅವಕಾಶವಿರಲಿಲ್ಲ. ಹೀಗಾಗಿ ಬೆಳಗ್ಗಿನ ಉಪಹಾರವಾಗಿ ಸಮೋಸವನ್ನು ಸೇವಿಸಿದ್ದರು" ಎಂಬುದಾಗಿಯೂ ವಿನೋದ್ ರಾಯ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇನ್ನು ಭಾರತೀಯ ಮಹಿಳಾ ತಂಡ ಮತ್ತಷ್ಟು ಉತ್ಕೃಷ್ಟ ದರ್ಜೆಯ ತರಬೇತಿಯನ್ನು ಪಡೆಯಬಹುದಾಗಿತ್ತು ಎಂದಿದ್ದಾರೆ ವಿನೋದ್ ರಾಯ್. ತರಬೇತಿ, ಕೋಚಿಂಗ್ ವ್ಯವಸ್ಥೆ, ಕ್ರಿಕೆಟ್ ಉಪಕರಣಗಳು, ಪ್ರಯಾಣದ ವ್ಯವಸ್ಥೆ, ಮತ್ತು ಪಂದ್ಯದ ಸಂಭಾವನೆ ವಿಚಾರವಾಗಿ ಹೆಚ್ಚಿನ ಗುಣಮಟ್ಟವನ್ನು ಪಡೆಯಬಹುದಾಗಿತ್ತು ಎಂದು ವಿನೋದ್ ರಾಯ್ ಹೇಳಿಕೊಂಡಿದ್ದಾರೆ.