ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದ ಮೊದಲ ದಿನ ಮಧ್ಯಂತರ ಮಳೆಯಿಂದಾಗಿ ಕೇವಲ 35 ಓವರ್ಗಳು ಮಾತ್ರ ಆಡಲು ಸಾಧ್ಯವಾಯಿತು. ನಿನ್ನೆ (ಶನಿವಾರ) ಬೆಳಗ್ಗೆಯಿಂದಲೇ ವರುಣನ ಆರ್ಭಟ ಶುರುವಾಯಿತು. ಪರಿಣಾಮ ಎರಡನೇ ದಿನದಾಟವನ್ನು ರದ್ದು ಮಾಡಲಾಗಿತ್ತು.
ಇದೀಗ ಕಾನ್ಪುರದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ಮೂರನೇ ದಿನವನ್ನೂ ಒಂದೇ ಒಂದು ಚೆಂಡು ಎಸೆಯದೆ ಮುಂದೂಡಲಾಗಿದೆ. ಭಾನುವಾರ ಬೆಳಿಗ್ಗೆ ಸುಮಾರು 10:00 ಗಂಟೆಗೆ ಮೈದಾನವನ್ನು ಅಂಪೈರ್ಗಳು ಔಟ್ ಫೀಲ್ಡ್ ಅನ್ನು ಪರಿಶೀಲಿಸಿದರು. ಆದರೆ, ಮೈದಾನ ಸಂಪೂರ್ಣ ಒಣಗದ ಕಾರಣ ಎರಡನೇ ಬಾರಿಗೆ 12:00 ಗಂಟೆಗೆ ಮೈದಾನವನ್ನು ಪರಿಶೀಲಿಸಲು ನಿರ್ಧರಿಸಲಾಯಿತು. ಬಳಿಕ 2 ಗಂಟೆಗೆ ಮತ್ತೊಮ್ಮೆ ಮೈದಾನ ಪರಿಶೀಲನೆ ನಡೆಸಲಾಯಿತು. ಇಂದು ಕೂಡ ಪಂದ್ಯ ಆರಂಭವಾಗುವಂಥ ಸ್ಥಿತಿಯಲ್ಲಿ ಮೈದಾನ ಇರಲಿಲ್ಲ.

ಕಾನ್ಪುರದಲ್ಲಿ ನಾಲ್ಕನೇ ದಿನ ಪಂದ್ಯ ಆರಂಭವಾದರೆ ಫಲಿತಾಂಶ ಪಡೆಯುವುದು ತುಂಬಾ ಕಷ್ಟ. ಭಾರತ ತಂಡವು ಬಾಂಗ್ಲಾದೇಶವನ್ನು ಆದಷ್ಟು ಬೇಗ ಆಲೌಟ್ ಮಾಡಬೇಕಾಗುತ್ತದೆ. ಇದಾದ ಬಳಿಕ ಭಾರತ ತಂಡವು ಬಾಂಗ್ಲಾದೇಶಕ್ಕೆ ದೊಡ್ಡ ಮುನ್ನಡೆ ನೀಡಿ ಆಲೌಟ್ ಮಾಡಬೇಕು. ಪುನಃ ಬಾಂಗ್ಲಾದೇಶ ತಂಡಕ್ಕೆ ದೊಡ್ಡ ಗುರಿಯನ್ನು ನಿಗದಿ ಪಡಿಸಿ ಆದಷ್ಟು ಬೇಗ ಎರಡನೇ ಇನಿಂಗ್ಸ್ನಲ್ಲಿ ಭಾರತ ಗೆಲುವಿನ ಕಡೆ ಸಾಗಬೇಕು. ಆದರೆ ಇದು ಎರಡು ದಿನಗಳಲ್ಲಿ ಸಾಧ್ಯವಾಗದ ಮಾತು.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕಾನ್ಪುರ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ನಿಗದಿತ ಸಮಯಕ್ಕೆ ಆಟ ಆರಂಭವಾಗುವ ನಿರೀಕ್ಷೆ ಇದೆ. ಒಂದು ವೇಳೆ ಪಂದ್ಯದಲ್ಲಿ ಆರಂಭವಾಗದಿದ್ದರೆ, ಉಭಯ ತಂಡಗಳ ನಡುವಿನ ಟೆಸ್ಟ್ ಡ್ರಾ ಆಗಲಿದೆ. ಕಾನ್ಪುರ ಟೆಸ್ಟ್ ಪಂದ್ಯ ಡ್ರಾಗೊಂಡರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕ ಪಟ್ಟಿಯಲ್ಲಿ ಭಾರತಕ್ಕೆ ಭಾರಿ ನಷ್ಟವಾಗಬಹುದು.
ಕಾನ್ಪುರ ಟೆಸ್ಟ್ ಡ್ರಾ ಗೊಂಡರೆ ಭಾರತ ತಂಡವು ಬಾಂಗ್ಲಾದೇಶದೊಂದಿಗೆ ಅಂಕಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ 4-4 ಅಂಕಗಳನ್ನು ಹಂಚಿಕೊಳ್ಳಲಿವೆ. ಕಾನ್ಪುರ ಟೆಸ್ಟ್ನಲ್ಲಿ ಭಾರತ ಗೆದ್ದರೆ 12 ಅಂಕ ಪಡೆಯಲಿದೆ. ಅಂದರೆ ಟೆಸ್ಟ್ ಪಂದ್ಯ ಡ್ರಾಗೊಂಡರೆ ಭಾರತ 8 ಅಂಕಗಳ ನಷ್ಟವಾಗಲಿದೆ.
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.