
ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ಅಜಯ್ ಜಡೇಜಾ ಭಾರತದ ಕೋಚ್ ರವಿ ಶಾಸ್ತ್ತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಪ್ರತಿ ಮಾದರಿಯಲ್ಲೂ ತಂಡದ ಆಟಗಾರರ ಮನಸ್ಥಿತಿ ಹಾಗೂ ಆಟದ ಮೇಲಿನ ತೀವ್ರತೆಯನ್ನು ಹೆಚ್ಚಿಸುವಲ್ಲಿ ಕೋಚ್ ರವಿ ಶಾಸ್ತ್ರಿ ಯಶಸ್ವಿಯಾಗಿದ್ದಾರೆ ಎಂದು ಅಜಯ್ ಜಡೇಜಾ ಹೇಳಿದ್ದಾರೆ.
ಹಾಲಿ ಕೋಚ್ ರವಿ ಶಾಸ್ತ್ರಿಯೊಂದಿಗೆ 1992ರಲ್ಲಿ ಭಾರತೀಯ ತಂಡದಲ್ಲಿ ಸಹ ಆಟಗಾರನಾಗಿದ್ದರು ಅಜಯ್ ಜಡೇಜಾ. "ವಿರಾಟ್ ಕೊಹ್ಲಿ ಭಾರತ ತಂಡದ ನಾಯಕ ಆದರೆ ಇಡೀ ತಂಡವನ್ನು ಒಗ್ಗಟ್ಟಾಗಿ ಮುನ್ನಡೆಸುತ್ತಿರುವವರು ಕೋಚ್ ರವಿ ಶಾಸ್ತ್ರಿ. ಈ ಉದ್ದೇಶ ಈಗ ಮಾತ್ರವಲ್ಲ ಕಳೆದ ಮೂರ್ನಾಲ್ಕು ವರ್ಷಗಳಿಂದ ಗೋಚರಿಸುತ್ತಿದೆ" ಎಂದು ಅಜಯ್ ಜಡೇಜಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಫಲಿತಾಂಶಗಳು ಯಾವುದೇ ಇರಲಿ, ತಂಡದ ಆಡುವ ವಿಧಾನದಲ್ಲಿ ಯಾವುದೇ ಬದಲಾವಣೆಗಳೂ ಇಲ್ಲ. ಅದು ಈಗಲೂ ಹಾಗೆಯೇ ಉಳಿದುಕೊಂಡಿದೆ. ವ್ಯತ್ಯಾಸವಾಗಿರುವುದು ಯೋಚನಾ ರೀತಿಯಲ್ಲಿ" ಎಂದು ಅಜಯ್ ಜಡೇಜಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ರವಿ ಶಾಸ್ತ್ರಿ ಕೋಚ್ ಆದ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ. ಆದರೆ ಟೆಸ್ಟ್ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಶಾಸ್ತ್ರಿ ಕೋಚ್ ಆದ ಬಳಿಕ ಭಾರತ 46 ಟೆಸ್ಟ್ ಆಡಿದ್ದು 28ರಲ್ಲಿ ಗೆಲುವು ಸಾಧಿಸಿದೆ. ಇದು ಸುದೀರ್ಘ ಮಾದರಿಯಲ್ಲಿ ಭಾರತದ ಅತ್ಯಂತ ಯಶಸ್ವೀ ಕೋಚ್ ಎನಿಸುವಂತೆ ಮಾಡಿದೆ. ಶಾಸ್ತ್ರಿ ಕೋಚ್ ಆದ ಬಳಿಕ ಭಾರತ 91 ಏಕದಿನ ಪಂದ್ಯಗಳನ್ನು ಆಡಿದ್ದು 57ರಲ್ಲಿ ಗೆಲುವು ಸಾಧಿಸಿದೆ. 62.64 ಪ್ರತಿಶತ ಗೆಲುವಿನ ಸರಾಸರಿಯನ್ನು ಹೊಂದಿದೆ.
"ರವಿ ಶಾಸ್ತ್ರಿ ಆಟದ ವಿಧಾನ ವಿಭಿನ್ನವಾಗಿತ್ತು. ಆದರೆ ಆಕ್ರಮಣಕಾರಿತನದಲ್ಲಿ ರವಿಶಾಸ್ತ್ರಿ ಯಾವಾಗಲೂ ಸರಿಯಾಗಿಯೇ ಇರುತ್ತಾರೆ. ಆತನ ಬ್ಯಾಟಿಂಗ್ ಶೈಲಿ, ಆತನ ನಾಯಕತ್ವ ಎಲ್ಲವೂ ಮೆಚ್ಚುವಂತದ್ದು. ಅವರು ಆಕ್ರಮಣಕಾರಿತನವನ್ನು ವ್ಯಕ್ತಪಡಿಸುವ ರೀತಿ, ಆ ಕೌಶಲ್ಯ ವಿಭಿನ್ನವಾಗಿದೆ. ಆತ ಎಂದಿಗೂ ಹಿಂದಕ್ಕೆ ಸರಿಯದಂತಾ ವ್ಯಕ್ತವವನ್ನು ಹೊಂದಿರುವವರು" ಎಂದು ರವಿ ಶಾಸ್ತ್ತಿ ಬಗ್ಗೆ ಅಜಯ್ ಜಡೇಜಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.