ಭಾರತದ ಆಟಗಾರರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಬಹು ಸುಧೀರ್ಘ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಬೆಳೆಸಿತ್ತು. ಈ ವೇಳೆ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ 5 ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಆಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನವನ್ನು ನೀಡಿ ಸೋಲು ಕಂಡಿದೆ. ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಸೋತ ಬಳಿಕ ಹಲವು ಪ್ರಶ್ನೆಗಳು ಎದ್ದಿವೆ. ಅದರಲ್ಲಿ ಪ್ರಮುಖ ಪ್ರಶ್ನೆ ಹೆಡ್ ಕೋಚ್ ಗೌತಮ್ ಗಂಭಿರ್ ಅವರ ಕಾರ್ಯ ವೈಖರಿ ಬಗ್ಗೆ ಆಗಿದೆ.
ಗೌತಮ್ ಗಂಭೀರ್, ರಾಹುಲ್ ದ್ರಾವಿಡ್ ಸ್ಥಾನವನ್ನು ತುಂಬಿದ ಹೆಡ್ ಕೋಚ್. ರಾಹುಲ್ ದ್ರಾವಿಡ್ ಅಧಿಕಾರಾವಧಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿತ್ತು. ಅಲ್ಲದೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾಗೂ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಂಲಂಕರಿಸಿತ್ತು. ಆದರೆ ಗೌತಮ್ ಗಂಭೀರ್ ಹೆಡ್ ಕೋಚ್ ಆದ ಬಳಿಕ ತಂಡ ಸತತ ಸೋಲುಗಳನ್ನು ಕಾಣುತ್ತಾ ಬಂದಿದೆ.

ಟೀಮ್ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಾಗಲೇ ಕೋಚ್ ಕಾರ್ಯ ವೈಖರಿ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಪುಟಿದೇಳುವ ಸೂಚನೆಯನ್ನು ಸಹ ನೀಡಿದ್ದರು. ಆದರೆ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ 1-3 ರಿಂದ ಸೋತ ಬಳಿಕ ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಈ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಸ್ಥಾನದ ಮೇಲೆ ಕಣ್ಣು ನೆಟ್ಟಿರುವ ಮೂರು ಮಾಜಿ ಆಟಗಾರರ ವಿವರ ಇಲ್ಲಿದೆ.
ವಿವಿಎಸ್ ಲಕ್ಷ್ಮಣ್ ಅವರು ಸದ್ಯ ಬ್ಯಾಕ್ ಅಪ್ ಕೋಚ್ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದ್ರಾವಿಡ್ ಕೋಚ್ ಆಗಿದ್ದಾಗ ಲಕ್ಷ್ಮಣ ಹಲವು ಸರಣಿಗಳಲ್ಲಿ ಕೋಚಿಂಗ್ ಮಾಡಿದ್ದರು. ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್ ಇಂಡಿಯಾ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಲಕ್ಷ್ಮಣ ಅವರಿಗೆ ಸಲ್ಲುತ್ತದೆ.

ಲಕ್ಷ್ಮಣ ಅವರು ಸದ್ಯ ಎನ್ಸಿಎ ಅಧ್ಯಕ್ಷರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ಸರಣಿಯ ವೇಳೆಯೂ ಇವರು ತಮ್ಮಲ್ಲಿರುವ ಕೋಚಿಂಗ್ ಸ್ಕಿಲ್ ತೋರಿಸಿದ್ದರು. ಭಾರತದ ತಂಡದ ಮಾಜಿ ಬಲಗೈ ಆಟಗಾರ ಬಿಸಿಸಿಐ ಅಧಿಕಾರಿಗಳ ಜೊತೆಗೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಒಂದು ವೇಳೆ ಗೌತಮ್ ಸ್ಥಾನದಿಂದ ಕೆಳಗೆ ಇಳಿದರೆ ಆ ಸ್ಥಾನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ಲಕ್ಷ್ಮಣ ಹೊದಿದ್ದಾರೆ.
ಕ್ರಿಕೆಟ್ ಸಲಹಾ ಸಮಿತಿ ಗೌತಮ್ ಗಂಭೀರ್ ಅವರನ್ನು ಕೋಚ್ ಆಗಿ ನೇಮಕ ಮಾಡಿದಾಗ, ಶಾರ್ಟ್ ಲಿಸ್ಟ್ನಲ್ಲಿ ಡಬ್ಲ್ಯುವಿ ರಾಮನ್ ಹೆಸರು ಸಹ ಇತ್ತು. ಇವರು ಸಹ ಭಾರತ ಹಿರಿಯರ ಮಹಿಳಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ದೇಶೀಯ ಟೂರ್ನಿಗಳಲ್ಲೂ ಸ್ಥಿರ ಕೋಚಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ಧಾರೆ. ಇವರು ತಮಿಳು ನಾಡು ಹಾಗೂ ಕೆಕೆಆರ್ ತಂಡದ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಇವರು 2018 ರಿಂದ 2021ರ ವರೆಗೆ ಭಾರತ ಮಹಿಳಾ ತಂಡದ ಹೆಡ್ ಕೋಚ್ ಆಗಿದ್ದರು. 2020ರಲ್ಲಿ ಟೀಮ್ ಇಂಡಿಯಾ ಮಹಿಳಾ ತಂಡ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ್ದಾಗ ಅದರ ಮುಂದಾಳತ್ವ ಇವರೇ ವಹಿಸಿಕೊಂಡಿದ್ದರು.
ಒಂದು ವೇಳೆ ಗೌತಮ್ ಗಂಭೀರ್ ತಮ್ಮ ಅಧಿಕಾರಕ್ಕೂ ಮುನ್ನವೇ ಕೆಳಗೆ ಇಳಿದರೆ, ಈ ಸ್ಥಾನವನ್ನು ತುಂಬಲು ರವಿ ಶಾಸ್ತ್ರಿ ಸಿದ್ಧರಿದ್ದಾರೆ. ಇವರು ಈಗಾಗಲೇ ಭಾರತ ತಂಡವನ್ನು ನಾಲ್ಕು ವರ್ಷಗಳ ಕಾಲ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ದೇಶ ಹಾಗೂ ವಿದೇಶಿ ನೆಲದಲ್ಲಿ ತಂಡ ಗೆಲುವಿನ ನಗೆ ಬೀರುವಲ್ಲಿ ರವಿ ಶಾಸ್ತ್ರಿ ಅವರ ಕೈವಾಡ ಶ್ಲಾಘನೀಯ. ಟೀಮ್ ಇಂಡಿಯಾದಲ್ಲಿ ಹೆಡ್ ಕೋಚ್, ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರವಿ ಶಾಸ್ತ್ರಿ ಭಾರತದ ಯಶಸ್ವಿ ಕೋಚ್ಗಳಲ್ಲಿ ಒಬ್ಬರು.