ಜುಲೈ 12 ಶುಕ್ರವಾರ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 2024ರ ಟಿ20 ವಿಶ್ವಕಪ್ ಗೆದ್ದ ನಂತರ ದೇಶದ ಪ್ರತಿಯೊಬ್ಬ ಹೃದಯದಲ್ಲಿ ಸ್ಥಾನ ಪಡೆದಿದ್ದು, ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದಾರೆ.
ಮುಂಬೈನಲ್ಲಿ ನಡೆದ ವಿಕ್ಟರಿ ಪರೇಡ್ ರೋಹಿತ್ ಶರ್ಮಾ ಅವರಿಗೆ ಸ್ಮರಣೀಯವಾಗಿತ್ತು. ಏಕೆಂದರೆ ರಸ್ತೆ ಬದಿಯಲ್ಲಿ ನಿಂತಿದ್ದ ಸಹಸ್ರಾರು ಅಭಿಮಾನಿಗಳು ರೋಹಿತ್-ರೋಹಿತ್ ಎಂದು ಕೂಗುತ್ತಿದ್ದದ್ದು ಎಲ್ಲೆಡೆ ಕಂಡು ಬಂದಿತ್ತು.

ಆದರೆ ವಿಕ್ಟರಿ ಪರೇಡ್ ಮುಗಿದ ಬಳಿಕ ಇದೀಗ ರೋಹಿತ್ ಮೇಲೆ ಮೂರು ಕೈಗಳು ಕಾಣಿಸಿಕೊಂಡಿರುವ ಫೋಟೋವೊಂದು ಸಂಚಲನ ಮೂಡಿಸಿದೆ. ಈ ಪವಾಡವನ್ನು ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲಕ್ಕೊಳಗಾಗಿದ್ದಾರೆ. ಆದರೆ ಈಗ ಅದರ ಸತ್ಯ ಎಲ್ಲರ ಮುಂದೆ ಬಂದಿದೆ.
ರೋಹಿತ್ ಶರ್ಮಾ ಅವರೊಂದಿಗೆ ಫೋಟೋದಲ್ಲಿ ಇರುವವರು ಸ್ವಾಮಿ ವಿವೇಕಾನಂದ ಇಂಟರ್ನ್ಯಾಶನಲ್ ಸ್ಕೂಲ್ನ ನಿರ್ದೇಶಕ ಯೋಗೇಶ್ ಪಟೇಲ್. ಇವರು ರೋಹಿತ್ ಅವರ ಶಿಕ್ಷಣದಲ್ಲಿ ಪಾತ್ರ ವಹಿಸಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ನಂತರ ನಾಯಕ ರೋಹಿತ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಯೋಗೇಶ್ ಪಟೇಲ್ ರೋಹಿತ್ ಹಿಂದೆ ನಿಂತಿದ್ದು, ಒಂದು ಕೈ ಯನ್ನು ರೋಹಿತ್ ಭುಜದ ಮೇಲೆ ಕೈ ಹಾಕಿದ್ದಾರೆ.
ಆದರೆ ಹಿಟ್ಮ್ಯಾನ್ನ ಇನ್ನೊಂದು ಭುಜದ ಮೇಲೆ ಮತ್ತೊಂದು ಕೈ ಕಾಣಿಸಿಕೊಂಡಿದೆ. ಈ ಕೈ ನೋಡಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅಷ್ಟಕ್ಕೂ ಈ ಕೈ ಯೋಗೇಶ್ ಪಟೇಲ್ ಅವರದ್ದಲ್ಲ.
ರೋಹಿತ್ ಶರ್ಮಾ ಫೋಟೋದಲ್ಲಿ ಮೂರು ಕೈಗಳನ್ನು ನೋಡಿದ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟಿಗರೊಬ್ಬರು ಪ್ರತಿಕ್ರಿಸಿದ್ದಾರೆ. 'ಇದು ದೇವರ ಹಸ್ತ ಎಂದು ನಾನು ಭಾವಿಸುತ್ತೇನೆ, ಅವರು ರೋಹಿತ್ ಶರ್ಮಾಗೆ ಎಲ್ಲಾ ಟ್ರೋಫಿಗಳನ್ನು ಗೆಲ್ಲಲು ಆಶೀರ್ವದಿಸುತ್ತಿದ್ದಾರೆ' ಎಂದು ಬರೆದಿದ್ದಾರೆ.
ಇದಲ್ಲದೆ, ಕೆಲವು ನೆಟಿಗರು ಈ ಫೋಟೋವನ್ನು ಪರೀಕ್ಷಿಸಿದ್ದು, ಇದರ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಈ ಫೋಟೋದಲ್ಲಿ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನೊಬ್ಬ ವ್ಯಕ್ತಿಯನ್ನು ತೆಗೆದು ಹಾಕಲಾಗಿದೆ.
ಆದರೆ ಕೈ ತೆಗೆಯಲು ಮರೆತು ಹೋಗಿದ್ದಾರೆ ಎಂದು ನೆಟಿಗರೊಬ್ಬರು ಫೋಟೋ ಹಿಂದಿರುವ ಅಸಲಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಫೋಟೋದ ಕೆಳಗೆ ಎಐ ಲೋಗೋವನ್ನು ಸಹ ಕಾಣಬಹುದು.
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ನಂತರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಆಟಗಾರರು ವಿಶ್ರಾಂತಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಸೇರಿದ್ದಾರೆ.
ಶ್ರೀಲಂಕಾ ಪ್ರವಾಸದಿಂದ ಎಲ್ಲಾ ಮೂವರು ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಬಹುದು ಎನ್ನಲಾಗಿದೆ. ಈ ತಿಂಗಳಾಂತ್ಯದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಭಾರತ 3 ಟಿ20 ಹಾಗೂ ಏಕದಿನ ಸರಣಿಗಳನ್ನು ಆಡಲಿದೆ.