ಜೆಂಟಲ್ಮ್ಯಾನ್ ಗೇಮ್ ಎಂದರೆ ಮೊದಲು ನೆನಪಿಗೆ ಬರುವುದು ಕ್ರಿಕೆಟ್. ವಿಶ್ವ ಕ್ರಿಕೆಟ್ನ ಎಲ್ಲಾ ತಂಡಗಳು ನ್ಯಾಯಯುತ ಆಟವನ್ನು ಆಡುವ ಗುರಿಯನ್ನು ಹೊಂದಿವೆ. ಇದಕ್ಕೆ ಹಲವು ಸಂದರ್ಭಗಳಲ್ಲಿ ಮೈದಾನದಲ್ಲಿ ನಡೆದ ಘಟನೆಗಳೇ ಸಾಕ್ಷಿ. ಆದರೆ ಕೆಲವು ತಂಡಗಳ ಆಟಗಾರರು ಇಂದಿಗೂ ಮೋಸಗಾರರಾಗಿಯೇ ಉಳಿದಿರುವುದು ವಿಪರ್ಯಾಸ.
ವಿಶ್ವ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾಗೆ ಸರಿ ಸಮಾನವಾಗಿ ನಿಲ್ಲುವ ತಂಡದ ಎಂದರೆ ಆಸ್ಟ್ರೇಲಿಯಾ. ಸ್ಲೆಡ್ಜಿಂಗ್ ಮೂಲಕವೇ ಎದುರಾಳಿ ತಂಡಗಳನ್ನು ಸೋಲಿನ ಸುಳಿಗೆ ಸಿಲುಕಿಸುವ ತಾಕತ್ತನ್ನು ಆಸ್ಟ್ರೇಲಿಯಾ ತಂಡ ಹೊಂದಿದೆ. ಅಗತ್ಯವಿದ್ದರೆ ಮೋಸ ಮಾಡಲು ಆಸೀಸ್ ಆಟಗಾರರು ಹಿಂಜರಿಯುವುದಿಲ್ಲ. ಈ ಆಟಗಾರರ ಪಟ್ಟಿಯಲ್ಲಿ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಹೆಸರೂ ಇದೆ.

ಕಾಸ್ಲಿಕ್ ಬ್ಯಾಟಿಂಗ್ ಮೂಲಕವೇ ವಿಶ್ವ ಕ್ರಿಕೆಟ್ನಲ್ಲಿ ಸ್ಟೀವ್ ಸ್ಮಿತ್ ಪ್ರಾಬಲ್ಯ ಸಾಧಿಸಿದ್ದಾರೆ. ಮಾರ್ಚ್ 4 ರಂದು ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎದುರು ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೋಲು ಕಂಡಿದೆ. ಈ ಸೋಲಿನ ನಂತರ ಸ್ಮಿತ್ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸ್ಮಿತ್ ಅವರ ಈ ನಿರ್ಧಾರ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.
ಸ್ಟೀವ್ ಸ್ಮಿತ್ ಕಳೆದ ಕೆಲವು ವರ್ಷಗಳಲ್ಲಿ ಮೂರು ಮಾದರಿ ಕ್ರಿಕೆಟ್ನಲ್ಲಿಯೂ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆದರೆ ಅವರ ವೃತ್ತಿಜೀವನದಲ್ಲಿ ವಿವಾದಗಳು ಸಹಾ ಸಮಾನವಾಗಿವೆ. ಸ್ಮಿತ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಮಾಡಿದ ಮೂರು ತಪ್ಪುಗಳಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ 2018 ರ ಆಸ್ಟ್ರೇಲಿಯನ್ ಬಾಲ್ ಟ್ಯಾಂಪರಿಂಗ್ ಪಕ್ರರಣ ಪ್ರಮುಖವಾಗಿದ್ದು, ವಿಶ್ವ ಕ್ರಿಕೆಟ್ನಲ್ಲಿ ಸಂಚಲನ ಸೃಷ್ಟಿಸಿತ್ತು.
ಮಾರ್ಚ್ 2018 ರಲ್ಲಿ ಕೇಪ್ ಟೌನ್ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಸದ್ದು ಮಾಡಿತ್ತು. ಪಂದ್ಯದ ವೇಳೆ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಚೆಂಡನ್ನು ಸ್ಯಾಂಡ್ ಪೇಪರ್ನಿಂದ ಉಜ್ಜಿದಾಗ ಸಿಕ್ಕಿಬಿದ್ದರು. ಇದಾದ ನಂತರ ಅವರು, ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರ ಪ್ರೋತ್ಸಾಹದಿಂದ ಈ ಕೃತ್ಯ ಎಸೆಗಿರುವ ಬಗ್ಗೆ ಹೇಳಿದ್ದರು. ಹೀಗಾಗಿ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರನ್ನು 9 ತಿಂಗಳು ಹಾಗು ಸ್ಮಿತ್ ಮತ್ತು ವಾರ್ನರ್ ಇಬ್ಬರಿಗೂ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್ನಿಂದ 12 ತಿಂಗಳ ನಿಷೇಧ ಹೇರಲಾಗಿತ್ತು.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 2020-21ರ ವೇಳೆ ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದರು. ಟೀಮ್ ಇಂಡಿಯಾ ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರ ಗಾರ್ಡ್ ಮಾರ್ಕ್ ತೆಗೆದ ಆರೋಪ ಸ್ಮಿತ್ ಮೇಲೆ ಕೇಳಿ ಬಂದಿತ್ತು. ವಿರಾಮದ ಸಮಯದಲ್ಲಿ ಪಂತ್ ಗುರುತಿಸಿದ ಗಾರ್ಡ್ ಅನ್ನು ಸ್ಮಿತ್ ತೆಗೆದುಹಾಕುವ ಸಮಯದಲ್ಲಿ ಸಿಕ್ಕಿಬಿದ್ದಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡಿತ್ತು.
ಇದಕ್ಕೂ ಮುನ್ನ 2017 ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಉಮೇಶ್ ಯಾದವ್ ಎಸೆತದಲ್ಲಿ ಸ್ಟೀವ್ ಸ್ಮಿತ್ ಔಟಾಗಿದ್ದರು. ಇದಾದ ಬಳಿಕ ಅವರು ತಮ್ಮ ಬ್ಯಾಟಿಂಗ್ ಜೊತೆಗಾರ ಪೀಟರ್ ಹ್ಯಾಂಡ್ಸ್ಕಾಂಬ್ ಅವರೊಂದಿಗೆ ಚರ್ಚಿಸಿ ಡಿಆರ್ಎಸ್ (ಡಿಸಿಷನ್ ರಿವ್ಯೂ ಸಿಸ್ಟಮ್) ನೇರವಾಗಿ ಕೇಳಲಿಲ್ಲ. ಡಿಆರ್ಎಸ್ ತೆಗೆದುಕೊಳ್ಳಬೇಕೋ? ಬೇಡವೋ? ಎಂಬ ಸಲಹೆಗಾಗಿ ಡ್ರೆಸ್ಸಿಂಗ್ ರೂಮ್ ಕಡೆ ಸ್ಮಿತ್ ನೋಡಿದ್ದರು. ಇದಕ್ಕೆ ಟೀಮ್ ಇಂಡಿಯಾದ ಅಂದಿನ ನಾಯಕ ವಿರಾಟ್ ಕೊಹ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಆನ್-ಫೀಲ್ಡ್ ಅಂಪೈರ್ಗಳು ಸ್ಮಿತ್ಗೆ ಡಿಆರ್ಎಸ್ ತೆಗೆದುಕೊಳ್ಳುವ ಅವಕಾಶವನ್ನು ನಿರಾಕರಿಸಿದ್ದರು. ಬಳಿಕ ಸ್ಮಿತ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ದಂಡ ವಿಧಿಸಿರಲಿಲ್ಲ.