ಕೊಲಂಬೊ, ಮಾರ್ಚ್ 06: ಶ್ರೀಲಂಕಾದಲ್ಲಿ ಬೌದ್ಧ ಮತ್ತು ಮುಸ್ಲಿಂ ಮೂಲಭೂತವಾದಿಗಳ ನಡುವೆ ಪ್ರಾರಂಭವಾಗಿರುವ ಹಿಂಸಾಚಾರ ತಾರಕಕ್ಕೇರಿದ್ದು ದೇಶದಲ್ಲಿ 10 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ, ಹಾಗಾಗಿ ನಿದಹಾಸ್ ಟೂರ್ನಿ ಆಡಲು ಶ್ರೀಲಂಕದಲ್ಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.
ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ದ ರೋಹಿತ್ ಶರ್ಮ ನಾಯಕತ್ವದ ಭಾರತ ತಂಡ ಟಿ20 ಪಂದ್ಯಗಳನ್ನು ಆಡಲು ಶ್ರೀಲಂಕಾಕ್ಕೆ ತೆರಳಿದೆ. ಶ್ರೀಲಂಕಾದಲ್ಲಿ ಉಂಟಾಗಿರುವ ಬಿಕ್ಕಟ್ಟು ಟಿ20 ಸರಣಿಯ ಮೇಲೆ ಪರಿಣಾಮ ಬೀರುವುದಿಲ್ಲ ಪಂದ್ಯಗಳು ಈ ಮುಂಚಿನ ವೇಳಾಪಟ್ಟಿಯಂತೆಯೇ ನಡೆಯುತ್ತವೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ.
ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ನಿದಹಾಸ್ ಸರಣಿಗಾಗಿ ಪೈಪೋಟಿ ನಡೆಸಲಿವೆ. ಸರಣಿಯ ಮೊದಲ ಪಂದ್ಯ ಇಂದು ಕೊಲಂಬೊದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ.
ಹೆಚ್ಚಿನ ಗಲಭೆಗಳು ಕ್ಯಾಂಡಿಯಲ್ಲಿ ನಡೆಯುತ್ತಿದ್ದು, ಪಂದ್ಯ ನಡೆಯುತ್ತಿರುವ ಕೊಲಂಬೊ ನಗರ ಬಹುತೇಕ ಶಾಂತಿಯುತವಾಗಿಯೇ ಇರುವ ಕಾರಣ ಭೀತಿಗೊಳಗಾಗಬೇಕಾದ ಅವಶ್ಯಕತೆ ಇಲ್ಲ ಎಂದು ಬಿಸಿಸಿಐ ಹೇಳಿದೆ. ಪಂದ್ಯಕ್ಕೆ ಆಟಗಗಾರರಿಗೆ ಭಿಗಿ ಭದ್ರತೆ ಒದಗಿಸುವುದಾಗಿ ಶ್ರೀಲಂಕಾ ಹೇಳಿದ್ದು, ಯಾವುದೇ ಅಹಿತಕರ ಘಟನೆ ನಡೆಯುವ ಸಂಭವ ಇಲ್ಲ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದೆ.
ಸರಣಿಯ ಎಲ್ಲಾ ಪಂದ್ಯಗಳು ಕೊಲಂಬೊನಲ್ಲಿಯೇ ನಡೆಯಲಿದ್ದು, ಕೊಲಂಬೊ ದಲ್ಲಿ ಶಾಂತ ವಾತಾವರಣ ಇರುವ ಕಾರಣ ಯಾವುದೇ ಸಮಸ್ಯೆ ಇಲ್ಲ ಎನ್ನಲಾಗಿದೆ. ಶ್ರೀಲಂಕಾದ 70ನೇ ವರ್ಷದ ಸ್ವಾತಂತ್ರೋತ್ಸವದ ಸಂದರ್ಭಕ್ಕಾಗಿ ನಿದಹಾಸ್ ಸರಣಿ ಆಯೋಜಿಸಿದ್ದು, ಶ್ರೀಲಂಕಾ ಕ್ರಿಕೆಟ್ಗೆ ಕೂಡ 70 ವರ್ಷ ತುಂಬಿದೆ.