ಆಸ್ಟ್ರೇಲಿಯಾದಲ್ಲಿ ಸದ್ಯ ಬಿಗ್ ಬ್ಯಾಷ್ ಲೀಗ್ ನಡೆಯುತ್ತಿದೆ. ಈ ಲೀಗ್ ವೇಳೆ ಹಲವು ಸ್ಟಾರ್ ಆಟಗಾರರು ಕಣಕ್ಕೆ ಇಳಿದಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಟಿಮ್ ಡೇವಿಡ್ ಸಹ ಬಿಬಿಎಲ್ನಲ್ಲಿ ಅಖಾಡ ಪ್ರವೇಶಿಸಿದ್ದಾರೆ. ಆದರೆ ಇವರಿಗೆ ಈ ಲೀಗ್ ವೇಳೆ ಗಾಯ ಕಾಣಿಸಿಕೊಂಡಿದ್ದು, ಪೂರ್ತಿ ಬಿಗ್ ಬ್ಯಾಷ್ ಲೀಗ್ನಿಂದ ಅವರು ಹೊರ ನಡೆದಿದ್ದಾರೆ. ಆಸ್ಟ್ರೇಲಿಯಾದ ಬಿಬಿಎಲ್ನಲ್ಲಿ ಗಾಯದಿಂದ ಹೊರ ನಡೆದ ಆಟಗಾರನ ನೋವು ಭಾರತದಲ್ಲಿ ಬೆಂಗಳೂರು ತಂಡಕ್ಕೂ ತಟ್ಟಿದೆ. ಕಾರಣ ಟಿಮ್ ಡೇವಿಡ್ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಭಾಗವಾಗಿದ್ದಾರೆ.
ಡಿಸೆಂಬರ್ 26 ರಂದು ಬಿಬಿಎಲ್ನ 12ನೇ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್ ಹಾಗೂ ಹೋಬಾರ್ಟ್ ಹರಿಕೇನ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹೋಬಾರ್ಟ್ ಹರಿಕೇನ್ಸ್ 19.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಸಿಡಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಹೋಬಾರ್ಟ್ ತಂಡದ ಪರ ಟಿಮ್ ಡೇವಿಡ್ ಬ್ಯಾಟಿಂಗ್ ನಡೆಸಿದರು. ಇವರು 28 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 42 ರನ್ ಬಾರಿಸಿದ್ದಾಗ, ಗಾಯಕ್ಕೆ ತುತ್ತಾಗಿ ಮೈದಾನದಿಂದ ಹೊರ ನಡೆದರು.

2025ರಲ್ಲಿ ಟಿಮ್ ಡೇವಿಡ್ ಅವರಿಗೆ ಸ್ನಾಯು ಸೆಳೆತವಾಗಿದ್ದು ಇದು ಎರಡನೇ ಬಾರಿ ಆಗಿದೆ. ಇದಕ್ಕೂ ಮೊದಲು ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾಗಲೂ ಇದೇ ಸಮಸ್ಯೆ ಎದುರಾಗಿತ್ತು. ಪರಿಣಾಮ ಇವರು 18ನೇ ಆವೃತ್ತಿಯ ಪ್ಲೇ ಆಫ್ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಟಿಮ್ ಡೇವಿಡ್ ಅವರಿಗೆ ಈಗ ಆದ ಗಾಯವನ್ನು ಸ್ಕ್ಯಾನ್ಗೆ ಒಳಪಡಿಸಲಾಯಿತು. ಈ ವೇಳೆ ಗ್ರೇಡ್ 2 ಗಾಯ ಕಂಡು ಬಂದಿದೆ. ಇದರಿಂದ ಇವರು ಪೂರ್ತಿ ಬಿಬಿಎಲ್ನಿಂದಲೇ ಹೊರ ನಡೆದಿದ್ದರು.
ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಟಿಮ್ ಡೇವಿಡ್ ಅವರಿಗೆ ಗುಣ ಮುಖವಾಗುವುದು ಅವಶ್ಯ ಎಂದು ಹರಿಕೇನ್ಸ್ ನಾಯಕ ನಾಥನ್ ಎಲ್ಲಿಸ್ ತಿಳಿಸಿದ್ದಾರೆ. ಇವರು ಟಿ20 ವಿಶ್ವಕಪ್ ವೇಳೆಗೆ ಸಂಪೂರ್ಣ ಗುಣಮುಖರಾಗಬಹುದು ಎಂದು ಹರಿಕೇನ್ಸ್ ವಿಶ್ವಾಸ ವ್ಯಕ್ತ ಪಡಿಸಿದೆ. ಡೇವಿಡ್ ಅವರಿಗೆ ಆದ ಗಾಯದ ಆರ್ಸಿಬಿ ಮ್ಯಾನೇಜ್ಮೆಂಟ್ ಮುಖದಲ್ಲೂ ಚಿಂತೆಯ ಗೆರೆ ಮೂಡಿಸಿದೆ.

ಟಿಮ್ ಡೇವಿಡ್ ಅವರು ಗ್ರೇಡ್ 2 ಮಂಡಿರಜ್ಜು ಗಾಯವಾಗಿದೆ. ವೈದ್ಯಕೀಯ ತಜ್ಞರ ಪ್ರಕಾರ ಈ ಗಾಯ ಗುಣಮುಖವಾಗಲು 4 ರಿಂದ 6 ವಾರಗಳ ಅವಶ್ಯಕತೆ ಇದೆ. ಹೀಗಾಗಿ ಟಿ20 ವಿಶ್ವಕಪ್ ತಂಡದಲ್ಲಿ ಇವರು ಸ್ಥಾನ ಪಡೆಯುತ್ತಾರೋ ಇಲ್ಲವೋ ಎಂಬ ಬಗ್ಗೆ ಆತಂಕ ಶುರುವಾಗಿದೆ. ಒಂದು ವೇಳೆ ಗಾಯ ಗುಣಮುಖವಾಗಲು ಇನ್ನು ಸಮಯ ತೆಗೆದುಕೊಂಡಲ್ಲಿ 12 ವಾರಗಳ ಸಮಯ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಈಗಿನ ವರದಿಗಳ ಪ್ರಕಾರ ಟಿಮ್ ಡೇವಿಡ್ ಅವರು ಟಿ20 ವಿಶ್ವಕಪ್ ಮಿಸ್ ಮಾಡಿಕೊಳ್ಳಬಹುದು ಎಂದು ತಿಳಿದು ಬಂದಿದ್ದು, ಐಪಿಎಲ್ನ ಆರಂಭಿಕ ಪಂದ್ಯಗಳಿಂದಲೂ ಅವರು ದೂರ ಉಳಿಯುವ ಸಾಧ್ಯತೆ ಇದೆ.
ಟಿಮ್ ಡೇವಿಡ್ ಕಳೆದ ಬಾರಿ ಆರ್ಸಿಬಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಇವರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ ಆಟಗಾರ. ಇವರು ಬೇಗ ಗುಣಮುಖರಾಗಲಿ ಎಂದು ಆರ್ಸಿಬಿ ಅಭಿಮಾನಿಗಳು ಆಶಿಸುತ್ತಿದ್ದಾರೆ.