
ಮಾಜಿ ಕ್ರಿಕೆಟಿಗ ಪಶ್ಚಿಮ ಬಂಗಾಳದ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ತೃಣಮೂಲ ಕಾಂಗ್ರೇಸ್ನ ಮುಖಂಡ ಲಕ್ಷ್ಮಿ ರತನ್ ಶುಕ್ಲ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಆಘಾತ ನೀಡಿದ್ದಾರೆ. ಸದ್ಯ ಈ ರಾಜೀನಾಮೆಗೆ ಅಧಿಕೃತವಾಗಿ ಯಾವುದೇ ಕಾರಣಗಳು ಲಭ್ಯವಾಗಿಲ್ಲ.
ಇದೇ ಸಂದರ್ಭದಲ್ಲಿ ಅವರು ಪಶ್ಚಿಮ ಬಂಗಾಳದ ಹೌರಾ ಜಿಲ್ಲಾ ತೃಣಮೂಲ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಟಿಎಂಸಿಯ ಶಾಸಕನಾಗಿ ಲಕ್ಷ್ಮೀ ರತನ್ ಶುಕ್ಲ ಮುಂದುವರಿಯಲು ಬಯಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಲ್ಲಟಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅಧಿಕಾರದಲ್ಲಿರುವ ತೃಣಮೂಲಕ ಕಾಂಗ್ರೆಸ್ನ ಹಲವು ಪ್ರಮುಖ ನಾಯಕರು ರಾಜೀನಾಮೆಯನ್ನು ಸಲ್ಲಿಸಿದ್ದು ಬಿಜೆಪಿ ಪಾಳಯಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ಲಕ್ಷ್ಮೀ ರತನ್ ಶುಕ್ಲ ಅವರ ಈ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
39ರ ಹರೆಯದ ಲಕ್ಷ್ಮಿ ರತನ್ ಶುಕ್ಲ 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಆದರೆ ಇವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಕೇವಲ ಮೂರು ಪಂದ್ಯಗಳಿಗಷ್ಟೇ ಸೀಮಿತವಾಯಿತು. ಆದರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಶುಕ್ಲ 2015ರ ವರೆಗೂ ಸಕ್ರಿಯವಾಗಿದ್ದರು. ಐಪಿಎಲ್ನಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 47 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.