ಬೆಂಗಳೂರಿನಲ್ಲಿ ಶುಕ್ರವಾರ ಮಳೆ ಬಂದಿದ್ದು, 18ನೇ ಆವೃತ್ತಿಯ ಐಪಿಎಲ್ನ 34ನೇ ಪಂದ್ಯದ ಮಜವನ್ನು ಏನು ಕಡಿಮೆ ಮಾಡಲಿಲ್ಲ. ಆದರೆ ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆ ಮಾತ್ರ ಆಗಿದೆ. ತವರಿನ ಆಚೆ ಅಬ್ಬರಿಸುವ ಆರ್ಸಿಬಿ, ತವರಿನಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿದೆ. ಪಂಜಾಬ್ ವಿರುದ್ಧ 5 ವಿಕೆಟ್ಗಳಿಂದ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತವರಿನಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿದೆ. ಈ ಸೋಲಿಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ನೂರು ಸಿಗುತ್ತವೆ. ಆದರೆ ಈ ಕೆಲವುಗಳು ಅದ್ರಲ್ಲಿ ಎದ್ದು ಕಂಡಿವೆ.
ಶುಕ್ರವಾರದ ಪಂದ್ಯದಲ್ಲಿ ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟ್ ಮಾಡಿತು. ಈ ಪಂದ್ಯಕ್ಕೆ ಮಳೆ ಕಾಟ ನೀಡಿದ್ದರಿಂದ ಪಂದ್ಯದ ಓವರ್ಗಳಿಗೆ ಕತ್ತರಿ ಬಿದ್ದಿತು. 14 ಓವರ್ಗಳ ಪಂದ್ಯವನ್ನು ನಡೆಸಲಾಯಿತು. ನಿಗದಿತ ಓವರ್ಗಳಲ್ಲಿ ಆರ್ಸಿಬಿ ಟೀಮ್ ಡೇವಿಡ್ ಅವರ ಏಕಾಂಗಿ ಹೋರಾಟದ ಫಲವಾಗಿಯೇ 9 ವಿಕೆಟ್ ನಷ್ಟಕ್ಕೆ 98 ರನ್ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಇನ್ನು 11 ಎಸೆತ ಬಾಕಿ ಇರುವಂತೆ 5 ವಿಕೆಟ್ ಉಳಿಸಿಕೊಂಡು ಪಂದ್ಯವನ್ನು ಗೆದ್ದು ಬೀಗಿದೆ. ಈ ಗೆಲುವಿನ ಮೂಲಕ ಪಂಜಾಬ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಶಿಫ್ಟ್ ಆದರೆ, ಆರ್ಸಿಬಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.

ನಿಜಕ್ಕೂ ಆರ್ಸಿಬಿ ತಂಡದ ಶಕ್ತಿ ಎಂದರೆ ಅದು ಬ್ಯಾಟಿಂಗ್. ಅದ್ರಲ್ಲೂ ಟಾಪ್ ಆರ್ಡರ್ ಬ್ಯಾಟರ್ಗಳು ಈ ಬ್ಯಾಟರ್ಗಳು ತವರಿನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲವಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಲು ಹೋಗಿ ವಿಕೆಟ್ ಒಪ್ಪಿಸಿದ್ದಾರೆ. ಎದುರಾಳಿ ಅಂಗಳದಲ್ಲಿ ಅಬ್ಬರಿಸುವ ಈ ಬ್ಯಾಟರ್ಸ್ ತವರಿನಲ್ಲಿ ರನ್ ಕಲೆ ಹಾಕದೇ ಇರುವುದು ನಿಜಕ್ಕೂ ಟೀಮ್ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ.
ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ತವರಿನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲವಾಗುತ್ತಿರುವುದು ತಂಡಕ್ಕೆ ತಲೆ ನೋವಾಗಿದೆ. ಈ ಆಟಗಾರರು ಆಡಿದ ಮೂರು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದಾರೆ. ವಿರಾಟ್ 3 ಪಂದ್ಯಗಳಲ್ಲಿ 30 ರನ್ ಕಲೆ ಹಾಕಿದ್ರೆ, ಫಿಲ್ ಸಾಲ್ಟ್ 55 ರನ್ ಸಿಡಿಸಿದ್ದಾರೆ.
ಆರ್ಸಿಬಿ ತಂಡದ ಮಿಡ್ಲ್ ಆರ್ಡರ್ ಕಳಪೆ ಪ್ರದರ್ಶನ ತವರಿನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಮುಂದುವರೆದಿದೆ. ಆರ್ಸಿಬಿ ಭಾರೀ ಮೊತ್ತಕ್ಕೆ ಖರೀದಿಸಿದ ಲಿಯಾಮ್ ಲಿವಿಂಗ್ ಸ್ಟೋನ್ ತಮ್ಮ ನಿರಾಶಾದಾಯಕ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಇವರು ಪಂಜಾಬ್ ವಿರುದ್ಧ ಪಂದ್ಯದಲ್ಲಿ 6 ಎಸೆತಗಳಲ್ಲಿ 4 ರನ್ ಕಲೆ ಹಾಕಿದ್ದು, ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುವಂತೆ ಮಾಡಿದೆ. ವಿಕೆಟ್ ಕೀಪರ್ ಬ್ಯಾಟರ್ ಜತೇಶ್ ಶರ್ಮಾ ತಂಡ ಒತ್ತಡದ ಸನ್ನಿವೇಶದಲ್ಲಿದ್ದಾಗ ನಿಂತು ಬ್ಯಾಟ್ ಮಾಡುವಲ್ಲಿ ಎಡವಿದ್ದಾರೆ. ಆಲ್ರೌಂಡರ್ ಕೃನಾಲ್ ಪಾಂಡ್ಯ ಬಂದು ಹೋಗುವ ಸಂಪ್ರದಾಯ ಮುಗಿಸಿದ್ದಾರೆ. ರಜತ್ ಪಾಟಿದಾರ್ 23 ರನ್ ಬಾರಿಸಿದ್ರೂ ಸಹ ಬಿಗ್ ಇನಿಂಗ್ಸ್ ಕಟ್ಟದೇ ಇರುವುದು ತಂಡಕ್ಕೆ ಪೆಟ್ಟು ನೀಡಿದೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ಟೀಮ್ ಡೇವಿಡ್ 50 ರನ್ ಬಾರಿಸಿ ಮಿಂಚಿದ್ದಾರೆ.
ಆರ್ಸಿಬಿ ಈ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಜತ್ ಪಟಿದಾರ್ ಅವರನ್ನು ಆಡುವ ಹನ್ನೊಂದರ ಬಳದಿಂದ ಕೈ ಬಿಟ್ಟಿತ್ತು. ಇದಕ್ಕೆ ಕಾರಣ ಏನು ಎಂಬುದು ತಿಳಿಯುತ್ತಿಲ್ಲ. ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ದೇವದತ್ ಅವರನ್ನು ಕೈ ಬಿಟ್ಟು ಆರ್ಸಿಬಿ ಎಡವಟ್ಟು ಮಾಡಿಕೊಂಡಿತಾ ಎಂಬ ಪ್ರಶ್ನೆಗಳು ಸಹ ಮೂಡುತ್ತವೆ.
ತನ್ನ ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿ ಜೀವನದಲ್ಲಿ ಮೊದಲ ಪಂದ್ಯವನ್ನು ಆಡುತ್ತಿರುವ ಕರ್ನಾಟಕದ ಮನೋಜ್ ಭಾಂಡಗೆ ಅವರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಮನೋಜ್ ಅವರಿಗೆ ಅವಕಾಶ ನೀಡಲೇ ಬೇಕು ಎಂದು ಆರ್ಸಿಬಿ ಲೆಕ್ಕಾಚಾರ ಹಾಕಿಕೊಂಡಿದ್ದರೆ, ಅದಕ್ಕೆ ಪಂಜಾಬ್ ವಿರುದ್ಧದ ಪಂದ್ಯ ವೇದಿಕೆ ಆಗಿರಲಿಲ್ಲ. ಇವರು ಸ್ಪಿನ್ ಬೌಲಿಂಗ್ ಉತ್ತಮವಾಗಿ ಆಡಬಹುದು ಎಂಬ ಲೆಕ್ಕಾಚಾರದಲ್ಲಿ ತಂಡದಲ್ಲಿ ಸೇರಿಸಿಕೊಂಡ ಆರ್ಸಿಬಿಗೆ ಪೆಟ್ಟು ಬಿದ್ದಿದೆ. ಮನೋಜ್ ಸಹ ತಂಡಕ್ಕೆ ದೊಡ್ಡ ಕಾಣಿಕೆಯನ್ನು ಏನು ನೀಡಲಿಲ್ಲ. ಇವರ ಆಟ ಕೇವಲ 1 ರನ್ಗಳಿಗೆ ಕೊನೆಯಾಗಿದೆ.

ನಿಜಕ್ಕೂ ಈ ಪಂದ್ಯದಲ್ಲಿ ಆರ್ಸಿಬಿ ಸೋಲು ಕಂಡಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಸ್ಟಾರ್ಗಳ ವೈಫಲ್ಯ. ತವರಿನ ಅಂಗಳದಲ್ಲಿ ಇನ್ನು ನಾಲ್ಕು ಪಂದ್ಯಗಳನ್ನು ಆರ್ಸಿಬಿ ಆಡಬೇಕಿದೆ. ಈಗಲೇ ತಾವು ಮಾಡಿರುವ ಎಡವಟ್ಟುಗಳನ್ನು ಆರ್ಸಿಬಿ ಮೆಟ್ಟಿ ನಿಲ್ಲುವ ಅವಶ್ಯಕತೆ ಇದೆ ಇಲ್ಲದೆ ಇದ್ದಲ್ಲಿ ಪ್ಲೇ ಆಫ್ ಕನಸು ದೂರವಾಗುತ್ತದೆ. ಟಾಪ್ ಆರ್ಡರ್ ಬ್ಯಾಟರ್ಗಳು ಪವರ್ ಪ್ಲೇನಲ್ಲಿ ತಾಳ್ಮೆಯಿಂದ ಆಡಿದ್ದರೆ ಈ ಅಂಗಳದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಹೇಳುತ್ತಾರೆ. ಆದರೆ ಆರ್ಸಿಬಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಭರದಲ್ಲಿ ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳುತ್ತಿದೆ. ಮುಂದಿನ ಪಂದ್ಯಗಳಲ್ಲಿ ಈ ತಪ್ಪುಗಳನ್ನು ತಿದ್ದಿ ಕೊಳ್ಳದೇ ಇದ್ದರೆ ದೊಡ್ಡ ಪೆಟ್ಟು ಬೀಳಲಿದೆ.
ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್ಸಿಬಿ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಅವರಿಗೆ 8.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಲಿಯಾಮ್ ತಮ್ಮ ಘನತೆಗೆ ತಕ್ಕ ಆಟವನ್ನು ಆಡುತ್ತಿಲ್ಲ. ಈ ಚಿಂತೆ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಬಹುವಾಗಿ ಕಾಡುತ್ತಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಲಿಯಾಮ್ಗೆ ಇನ್ನು ಎಷ್ಟು ಅವಕಾಶ ಎಂದು ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಲಿವಿಂಗ್ಸ್ಟೋನ್ಗೆ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಲು ಉತ್ತಮ ಅವಕಾಶ ಇತ್ತು. ಆದರೆ ಈ ಅವಕಾಶವನ್ನು ಕೈ ಚೆಲ್ಲಿದ್ದಾರೆ. ಹೀಗಾಗಿ ಇವರ ಸ್ಥಾನಕ್ಕೆ ಅಪಾಯ ಕಾದಿದೆ. ಇವರ ಸ್ಥಾನವನ್ನು ತುಂಬಲು ಇವರದ್ದೇ ದೇಶದ ಜಾಕಬ್ ಬೆತೆಲ್ ಸಿದ್ಧರಾಗಿದ್ದು, ಇವರು ಸಹ ಆಫ್ ಸ್ಪಿನ್ ಬೌಲಿಂಗ್ ನಡೆಸಬಲ್ಲರು.

ಆರ್ಸಿಬಿ ತಂಡದ ಬ್ಯಾಟರ್ಗಳು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಇನ್ನು 20 ರಿಂದ 30 ರನ್ಗಳನ್ನು ಸೇರಿಸಿದ್ದರೆ ಗೆಲ್ಲುವ ಚಾನ್ಸ್ ಇತ್ತು. ಆದರೆ ಈ ಚಾನ್ಸ್ ಮಿಸ್ ಆಗಿದೆ. ಆದರೆ ಆರ್ಸಿಬಿ ವೇಗದ ಬೌಲರ್ ಜೋಶ್ ಹ್ಯಾಜಲ್ ವುಡ್ ಬಿಗುವಿನ ದಾಳಿ ನಡೆಸಿ ಭರವಸೆ ಮೂಡಿಸಿದ್ದಾರೆ. ಸದ್ಯ ಇವರು ಟೂರ್ನಿಯಲ್ಲಿ 12 ವಿಕೆಟ್ ಕಬಳಿಸಿದ್ದು ಪರ್ಪಲ್ ಕ್ಯಾಪ್ ರೇಸ್ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯವನ್ನು ಸೋಲು ಟಾಸ್ ಸಹ ಮುಖ್ಯ ಪಾತ್ರ ವಹಿಸಿತ್ತು. ಟಾಸ್ ಪಂಜಾಬ್ ಪರ ವಾಲುತ್ತಾ ಇದ್ದಂತೆ ಆರ್ಸಿಬಿ ಪಾಳಯದಲ್ಲಿ ನಿರಾಸೆ ಕಾದಿತ್ತು. ಆದರೆ ಈ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾಗಿದ್ದು ಪಂದ್ಯ ಕೈ ಚೆಲ್ಲಿದ್ದಾರೆ.