
ಮುಂಬೈ: 2008ರ ಅಂಡರ್ 19 ವಿಶ್ವಕಪ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದ ಭಾರತದ ಬ್ಯಾಟ್ಸ್ಮನ್, ವಿರಾಟ್ ಕೊಹ್ಲಿ ನಾಯಕತ್ವದ ಅಡಿಯಲ್ಲಿ ಆಡಿದ್ದ ತನ್ಮಯ್ ಶ್ರೀವತ್ಸವ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದಾರೆ. ಶನಿವಾರ (ಅಕ್ಟೋಬರ್ 24) ನಿವೃತ್ತಿ ಘೋಷಿಸಿರುವ ತನ್ಮಯ್ಗೆ ಈಗಿನ್ನು 30ರ ಹರೆಯ.
ಮಲೇಷ್ಯಾದಲ್ಲಿ 2008ರಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ತನ್ಮಯ್ ಶ್ರೀವತ್ಸವ 52.40ರ ಸರಾಸರಿಯಂತೆ 262 ರನ್ ಬಾರಿಸಿದ್ದರು. ಕೌಲಾಲಂಪುರ್ನಲ್ಲಿ ನಡೆದಿದ್ದ ಫೈನಲ್ನಲ್ಲಿ ತನ್ಮಯ್ 46 ರನ್ ಬಾರಿಸಿದ್ದರು. ಆವತ್ತು ಭಾರತೀಯರ ಪರ ಅತೀ ಹೆಚ್ಚು ರನ್ ಬಾರಿಸಿದ್ದು ತನ್ಮಯ್ ಒಬ್ಬರೆ.
ಅಂದಿನ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಾದಾಡಿದ್ದವು. ಇದರಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 159 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ನಲ್ಲಿ ಮಳೆ ಸುರಿದ್ದರಿಂದ 25 ಓವರ್ಗೆ 116 ರನ್ ಗುರಿ ನೀಡಲಾಗಿತ್ತು. ಆದರೆ ಆಫ್ರಿಕಾ 103 ರನ್ ಬಾರಿಸಿದ್ದರಿಂದ ಭಾರತ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 12 ರನ್ನಿಂದ ಗೆದ್ದಿತ್ತು.
ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ತನ್ಮಯ್, 2008-09ರಲ್ಲಿ ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದರು. 90 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ತನ್ಮಯ್ 34.39ರ ಸರಾಸರಿಯಲ್ಲಿ 4918 ರನ್ ಗಳಿಸಿದ್ದಾರೆ.