17 ವರ್ಷದ ಅಜ್ಞಾತವಾಸ ಕೊನೆಗೊಂಡಿದ್ದು, ಆರ್ಸಿಬಿ 18ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಸಂಭ್ರಮ ಅಭಿಮಾನಿಗಳ ಮನಸ್ಸಿನಲ್ಲಿ ಹೆಚ್ಚು ಸಮಯ ಹಸಿರಾಗಿ ಇರಬೇಕಿತ್ತು. ಆದರೆ ಆ ಒಂದು ದುರ್ಘಟನೆ ಎಲ್ಲರ ನೆಮ್ಮದಿಯನ್ನು ಹಾಳು ಮಾಡಿದೆ. ಜೂನ್ 4 ರಂದು ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಸಿಬಿ ಈಗ ಮೌನ ಮುರಿದಿದೆ. ತಮ್ಮ ತಂಡದ 12ನೇ ಆಟಗಾರ ಎಂದು ಅಭಿಮಾನಿಗಳಿಗೆ ಸ್ಥಾನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 3 ತಿಂಗಳ ಬಳಿಕ ಅಭಿಮಾನಿಗಳಿಗೆ ಘಟನೆಯ ಬಗ್ಗೆ ಪೋಸ್ಟ್ ಮಾಡಿದೆ.
ಆರ್ಸಿಬಿ ಜೂನ್ 3ರ ಚಾಂಪಿಯನ್ ಪಟ್ಟವನ್ನು, ಜೂನ್ 4 ಕಾಲ್ತುಳಿತ ಪ್ರಕರಣವನ್ನು, 18ನೇ ಆವೃತ್ತಿಯನ್ನು, 11 ಜನರ ಸಾವಿನ ನೋವನ್ನು, ಹಲವು ಜನರಿಗೆ ಆದ ಗಾಯಕ್ಕೆ ಉತ್ತರ ಎಂಬಂತೆ ಆರ್ಸಿಬಿ ಪೋಸ್ಟ್ ಮಾಡಿದೆ. ಆರ್ಸಿಬಿ ಸಂಭ್ರಮಾಚರಣೆಯಿಂದ ಆಗ ಬೇಕಿದ್ದ ಸುದ್ದಿ, ಸಾವಿನ ನೋವಿನ ಕಾರಣದಿಂದ ಸುದ್ದಿಯಾಯಿತು. ಅಲ್ಲದೆ ಆರ್ಸಿಬಿ ಕೆಎಸ್ಸಿಎ ಸೇರಿದಂತೆ ಕಾರ್ಯಕ್ರಮವನ್ನು ಆಯೋಜಿಸದವರ ಮೇಲೂ ದೂರು ದಾಖಲಾದವು. ಈ ಪ್ರಕರಣದಲ್ಲಿ ಆರೋಪ ಪ್ರತ್ಯಾರೋಪಗಳು ಅಭಿಮಾನಿಗಳ ನಿದ್ದೆ ಗೆಡಿಸಿತ್ತು.

ಈಗ ಆರ್ಸಿಬಿ ಮ್ಯಾನೇಜ್ಮೆಂಟ್ ತಮ್ಮ ಅಭಿಮಾನಿಗಳಿಗೆ ಪ್ರೀತಿಯ ಸಂದೇಶ ನೀಡಿದೆ. ಈ ಪತ್ರ ನಿಮಗಾಗಿ ಎಂದು ಆರ್ಸಿಬಿ ತಿಳಿಸಿದೆ. ನಾವು ಸುಮಾರು 3 ತಿಂಗಳಿನಿಂದ ಏನನ್ನೂ ಪೋಸ್ಟ್ ಮಾಡಿಲ್ಲ. ನಾವು ಹೀಗೆ ಸುಮ್ಮನಿದ್ದ ಮಾತ್ರ ಇದು ನಮ್ಮ ಅನುಪಸ್ಥಿತಿ ಎಂದು ಭಾವಿಸಬೇಡಿ. ನಾವು ಕಾಲ್ತುಳಿತ ಪ್ರಕರಣದಿಂದ ಇನ್ನು ಚೇತರಿಸಿಕೊಂಡಿಲ್ಲ. ಸಾಮಾಜಿಕ ತಾಣದಲ್ಲಿ ನಾವು ನಮ್ಮ ನೆನಪುಗಳು, ಅದ್ಭುತ ಕ್ಷಣಗಳನ್ನು ಮಾತ್ರ ಹಾಕುತ್ತಿದ್ದೇವು. ಆದರೆ ಜೂನ್ 4 ರಂದು ನಡೆದ ಘಟನೆ ನಮ್ಮ ಹೃದಯವನ್ನು ಛಿದ್ರಗೊಳಿಸಿತು. ಅಂದಿನಿಂದ ನಾವು ಮೌನವಾಗಿದ್ದೇವೆ. ಎಲ್ಲರೂ ಹೇಳುವುದನ್ನು ಕೇಳ್ತಾ ಇದ್ದೇವೆ. ಇದಕ್ಕಾಗಿ ಏನು ಮಾಡಬೇಕು ಎಂಬುದನ್ನು ಯೋಚಿಸುತ್ತಿದ್ದೇವೆ ಎಂದು ಆರ್ಸಿಬಿ ಮಾಡಿರುವ ಪೋಸ್ಟ್ನಲ್ಲಿ ಬರೆದುಕೊಂಡಿದೆ.
ಕಾಲ್ತುಳಿತದಲ್ಲಿ ಆದ ನೋವಿನಿಂದಲೇ ನಾವು RCB CARES ತೆರೆದಿದ್ದೇವೆ. ಇದರ ಮೂಲಕ ನಾವು ಜನರ ಪರ ನಿಲ್ಲುತ್ತೇವೆ. ನಾವು ಒಟ್ಟಾಗಿ ನಡೆಯೋಣ. ಇದು ಆರ್ಸಿಬಿ ಕಾಳಜಿ ಎಂದು ಭಾವನಾತ್ಮಕ ಪೋಸ್ಟ್ ಮಾಡಿದೆ.
ಆರ್ಸಿಬಿ ಕಾಲ್ತುಳಿತದ ಪ್ರಕರಣದ ಕುರಿತಾಗಿ ರಾಜ್ಯ ಸರ್ಕಾರ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಅಲ್ಲದೆ ಈ ಪ್ರಕರಣದ ತನಿಖೆ ನಡೆಸುವಂತೆ ಸಮಿತಿಯನ್ನು ಸಹ ಸರ್ಕಾರ ರಚಿಸಿತ್ತು. ಈ ಸಮಿತಿ ಚಿನ್ನಸ್ವಾಮಿ ಕ್ರೀಡಾಂಗಣ ದೊಡ್ಡ ಟೂರ್ನಿಗಳನ್ನು ನಡೆಸಲು ಸೂಕ್ತ ಸ್ಥಳ ಅಲ್ಲ ಎಂದು ತಿಳಿಸಿತ್ತು. ಹೀಗಾಗಿ ಬೆಂಗಳೂರು ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ಮಹಿಳೆಯ ಏಕದಿನ ವಿಶ್ವಕಪ್ ಪಂದ್ಯಗಳು ಹಾಗೂ ಪ್ರಸಕ್ತ ಸಾಲಿನ ಮಹಾರಾಜ ಟ್ರೋಫಿ ಟಿ20 ಟೂರ್ನಿ ಬೇರೆ ಕಡೆಗೆ ಸ್ಥಳಾಂತರಗೊಂಡಿತು.