ಬೆಂಗಳೂರು, ಜ.9: ದುರಂತ ಅಂತ್ಯ ಕಂಡ ಪ್ರತಿಭಾವಂತ ಕ್ರಿಕೆಟರ್ ಅಶ್ವಥ್ ಅಯ್ಯಪ್ಪ ಅವರ ಆತ್ಮಕಥನ ಲೋಕಾರ್ಪಣೆಯಾಗಿದೆ. ಅದೊಂದು ಭಾವಾನಾತ್ಮಕ ಸಮಾರಂಭ. ಅಲ್ಲಿದ್ದವರಲ್ಲಿ ಹಲವಾರು ಮಂದಿ ದೇಶ, ವಿದೇಶಗಳಲ್ಲಿ ಕ್ರಿಕೆಟ್ ಆಡಿದ್ದರು. ಅದರೆ, ಎಲ್ಲರಲ್ಲೂ ಏನೋ ದುಗುಡ, ವಿಧಿಯಾಟಕ್ಕೆ ತಲೆಬಾಗಲೇಬೇಕಾದ ಅನಿವಾರ್ಯತೆಯ ಕ್ಷಣ.
ಅಗಲಿದ ಕ್ರಿಕೆಟರ್ ಅಶ್ವಥ್ ಅಯ್ಯಪ್ಪ ಅವರ ತಂದೆ ರಘು ಮಾದಪ್ಪ, ತಾಯಿ ಅನಿತಾ ಅವರು "When God Bowls A Googly - Spiritual Intelligence For Sports" ಎಂಬ ಹೆಸರಿನ ಭಾವುಕ ಹೊತ್ತಿಗೆಯನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಗುರುವಾರ ಲೋಕಾರ್ಪಣೆ ಮಾಡಿದರು. ಈ ಅಪೂರ್ವ ಸಂದರ್ಭಕ್ಕೆ ಕರ್ನಾಟಕದ ರಣಜಿ ಆಟಗಾರರು, ಮಾಜಿ ಕ್ರಿಕೆಟರ್ ಬ್ರಿಜೇಶ್ ಪಟೇಲ್ ಮುಂತಾ ಗಣ್ಯರು ಉಪಸ್ಥಿತರಿದ್ದರು.
ಊಟಿಯ ಲವ್ಡೇಲ್ ನ ಲಾರೆನ್ಸ್ ಶಾಲೆಯಲ್ಲಿ ಓದಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದಿದ್ದ ಅಶ್ವಥ್ ಅವರು ಕೆಎಸ್ ಸಿಎ ನಡೆಸುವ ವಿವಿಧ ವಯೋಮಿತಿಯೊಳಗಿನ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದರು. ಬೆಂಗಳೂರು, ಮುಂಬೈ ಮತ್ತು ತ್ರಿಪುರದಲ್ಲಿ ಕರ್ನಾಟಕದ ಪರ ಬ್ಯಾಟ್ ಬೀಸಿದ್ದರು.
ಆದರೆ, ಹೋದ ವರ್ಷದ ಏಪ್ರಿಲ್ನಲ್ಲಿ(ಏ.17, 2014) ಅವರು ದುರಂತ ಸಾವು ಕಂಡಿದ್ದರು. ಕೊಡಗಿನ ಚಿಕ್ಕಹೊಳೆ ಜಲಾಶಯದಲ್ಲಿ ಅಣ್ಣ ಡಾ. ಅಖಿಲ್ ಕುಟ್ಟಪ್ಪ ಜೊತೆ ಈಜಾಡುತ್ತಿದ್ದ ಅಶ್ವಥ್ ಅವರನ್ನು ಸಾವು ಕರೆದೊಯ್ದಿತ್ತು. ಮೇ ತಿಂಗಳಿನಲ್ಲೇ ಅನಾವರಣಗೊಳ್ಳಬೇಕಿದ್ದ ಈ ಕೃತಿ ಸಾವಿನ ಸೂತಕದಿಂದ ಈಗ ಹೊರಬಂದಿದೆ.
'ಅಶ್ವಥ್ ರಾಜ್ಯ ಸಂಭಾವ್ಯ ತಂಡದಲ್ಲಿಯೂ ಸ್ಥಾನ ಪಡೆದಿದ್ದರು. ಕ್ರಿಕೆಟ್ ರಂಗದಲ್ಲಿ ದೊಡ್ಡ ಸಾಧನೆ ಮಾಡಬೇಕೆನ್ನುವ ಕನಸು ಹೊತ್ತಿರುವ ಪ್ರತಿ ಆಟಗಾರನಿಗೂ ಈ ಪುಸ್ತಕ ಮಾದರಿಯಾಗಿದೆ. ಸೋಲು ಗೆಲುವುಗಳನ್ನು ಹೇಗೆ ಸಮಾನವಾಗಿ ಸ್ವೀಕರಿಸಬೇಕು ಎನ್ನುವುದನ್ನು ಅಶ್ವಥ್ ಅವರಿಂದ ಕಲಿಯಬೇಕು. ಪುಸ್ತಕದಲ್ಲಿನ ಪ್ರತಿ ಸಾಲು ಸ್ಫೂರ್ತಿ ತುಂಬುವ ಶಕ್ತಿ ಹೊಂದಿವೆ' ಎಂದು ಬ್ರಿಜೇಶ್ ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕದ ಬಗ್ಗೆ ರಾಹುಲ್ ದ್ರಾವಿಡ್: ಈ ಪುಸ್ತಕ ಯುವ ಕ್ರಿಕೆಟರ್ ಗಳಿಗೆ ನಿಜಕ್ಕೂ ಉಪಯುಕ್ತವಾಗಿದೆ. ಅಶ್ವಥ್ ಅವರ ಬರವಣಿಗೆಯಲ್ಲೂ ಭಾವುಕತೆ ಎದ್ದು ಕಾಣುತ್ತದೆ. ಉತ್ತಮ ಲೇಖನಗಳು ಇಲ್ಲಿವೆ ತಪ್ಪದೇ ಓದಿ ಎಂದಿದ್ದಾರೆ.
ಕರ್ನಾಟಕ ಇನ್ಸಿಟ್ಯೂಟ್ ಆಫ್ ಕ್ರಿಕೆಟ್ ಕ್ಲಬ್ನ ಕೋಚ್ ಇರ್ಫಾನ್ ಸೇಠ್, ಮಾಜಿ ಟೀಂ ಇಂಡಿಯಾ ವೇಗಿ ಅಬೇ ಕುರುವಿಲ್ಲಾ, ಡಾ. ಕಿನ್ಜಾಲ್ ಸುರತ್ವಾಲಾ, ಕರ್ನಾಟಕದ ಎಲ್ಲಾ ರಣಜಿ ಆಟಗಾರರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಜೆಂಟಾ ಪ್ರೆಸ್ ಹಾಗೂ ಪಬ್ಲಿಕೇಷನ್ ಪ್ರೈ ಲಿ ಕೊಡಗು ಹೊರ ತಂದಿರುವ ಈ ಪುಸ್ತಕದ ಬೆಲೆ 250 ರು. ಆನ್ ಲೈನ್ ನಲ್ಲೂ ಲಭ್ಯವಿದೆ.