ಕರ್ನಾಟಕ ಹಾಗೂ ತ್ರಿಪುರ ನಡುವೆ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯು ರೋಚಕ ಅಂತ್ಯವನ್ನು ಕಂಡಿದೆ. ಈ ಪಂದ್ಯ ನಿಗದತಿ ಓವರ್ಗಳಲ್ಲಿ ಟೈ ಆಗಿದ್ದಾಗ, ಫಲಿತಾಂಶವನ್ನು ಅರಿಯಲು ಸೂಪರ್ ಓವರ್ ಮೊರೆ ಹೋಗಲಾಯಿತು. ಈ ವೇಳೆ ತ್ರಿಪುರಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ತ್ರಿಪುರಾ 6 ಎಸೆತಗಳಲ್ಲಿ 22 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕರ್ನಾಟಕ 18 ರನ್ ಬಾರಿಸಲು ಅಷ್ಟೇ ಶಕ್ತವಾಯಿತು. ಪರಿಣಾಮ ಟೂರ್ನಿಯಲ್ಲಿ 5ನೇ ಸೋಲಿಗೆ ಶರಣಾಯಿತು. ತ್ರಿಪುರಾ ಟಿ20 ಕ್ರಿಕೆಟ್ ಟೂರ್ನಿಯಲ್ಲಿ 2ನೇ ಗೆಲುವಿನ ನಗೆ ಬೀರಿತು.

ಟಾಸ್ ಗೆದ್ದ ಕರ್ನಾಟಕ ಮಹತ್ವದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಕರ್ನಾಟಕದ ಆರಂಭಿಕರಾದ ಬಿಆರ್ ಶರತ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ಅವರು ಮೊದಲ ವಿಕೆಟ್ಗೆ 57 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಅರ್ಧಶತಕದತ್ತ ದಪುಗಾಲು ಹಾಕಿದ್ದ ಬಿಆರ್ ಶರತ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿ ಔಟ್ ಆದರು. ಮಯಾಂಕ್ ಅಗರ್ವಾಲ್ 29 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡೀಕ್ಕಲ್ 32, ಮ್ಯಾಕ್ನೀಲ್ 34, ಆರ್.ಸ್ಮರಣ್ 24 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಅಂತಿಮವಾಗಿ ಕರ್ನಾಟಕ 20 ಓವರ್ಗಳಲ್ಲಿ6 ವಿಕೆಟ್ ನಷ್ಟಕ್ಕೆ 197 ರನ್ ಸೇರಿಸಿತು.
ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ತ್ರಿಪುರಾ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಹನುಮ ವಿಹಾರಿ (36) ಹಾಗೂ ಶ್ರೀದಮ್ ಪೌಲ್ (28) ಮೊದಲ ವಿಕೆಟ್ಗೆ 65 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಮಧ್ಯಮ ಕ್ರಮಾಂದಲ್ಲಿ ಬ್ಯಾಟರ್ಗಳು ರನ್ ವೈಫಲ್ಯವನ್ನು ಅನುಭವಿಸಿದರು. ಮಣಿಶಂಕರ್ ಮುರಾಸಿಂಗ್ 35 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ ಸಹಾಯದಿಂದ 69 ರನ್ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಅಂತಿಮವಾಗಿ ತ್ರಿಪುರಾ 20 ಓವರ್ಗಳಲ್ಲಿ 8 ವಿಕೆಟ್ಗೆ 197 ರನ್ ಸೇರಿಸಿ ಟೈ ಮಾಡಿಕೊಂಡಿತು.
ಸರ್ವಿಸಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಬರೋಡಾ ತಂಡ ಸವಾಲಿನ ಮೊತ್ತವನ್ನು ಕಲೆ ಹಾಕಿತು. ಬರೋಡಾ ತಂಡದ ಪರ ಅಮಿತ್ ಪಾಸಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಮಿತ್ ಪಾಸಿ 55 ಎಸೆತಗಳಲ್ಲಿ 114 ರನ್ ಬಾರಿಸಿದರು. ಇವರ ಅಮೋಘ ಇನಿಂಗ್ಸ್ನಲ್ಲಿ 10 ಬೌಂಡರಿ, 9 ಸಿಕ್ಸರ್ಗಳು ಸೇರಿವೆ. ಅಂತಿಮವಾಗಿ ಬರೋಡಾ ತಂಡ 20 ಓವರ್ಗಳಲ್ಲಿ 5 ವಿಕೆಟ್ಗೆ 220 ರನ್ ಸೇರಿಸಿತು. ಸರ್ವಿಸಸ್ ತಂಡದ ಪರ ಕುನ್ವರ್ ಪಾಠಕ್ ಹಾಗೂ ರವಿ ಚೌಹಾಣ್ ತಲಾ 51 ರನ್ ಬಾರಿಸಿದರು. ನಾಯಕ ಮೋಹಿತ್ ಅಹ್ಲಾವತ್ 41 ರನ್, ನಕುಲ್ ಶರ್ಮಾ 24 ರನ್ ಸಿಡಿಸಿದರು. ಉಳಿದ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಸರ್ವಿಸಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 207 ರನ್ ಸೇರಿಸಿ ಸೋಲು ಕಂಡಿತು.