ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ಆರ್ಸಿಬಿ ಅಬ್ಬರಿಸಿದೆ. 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪೆಟ್ಟು ನೀಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಗೆಲುವಿನ ಆರಂಭವನ್ನು ಮಾಡಿದೆ. ಈ ಪಂದ್ಯದಲ್ಲಿ ಆರ್ಸಿಬಿ ಸಂಘಟಿತ ಆಟವನ್ನು ಪ್ರದರ್ಶಿಸಿ, ಪೂರ್ಣ ಎರಡು ಅಂಕವನ್ನು ಕಲೆ ಹಾಕಿದೆ. ಆದ್ರೆ ಈ ಪಂದ್ಯದಲ್ಲಿ ಕೆಕೆಆರ್ ಬ್ಯಾಟರ್ಗಳಿಗೆ ಬಹುವಾಗಿ ಕಾಡಿದ ಕೃನಾಲ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತರೂ ಕೋಲ್ಕತ್ತಾ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಕೆಕೆಆರ್ 20 ಓವರ್ಗಳಲ್ಲಿ 8 ವಿಕೆಟ್ಗೆ 174 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್ಸಿಬಿ 16.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 177 ರನ್ ಸೇರಿಸಿ ಜಯವನ್ನು ದಾಖಲಿಸಿದೆ. ಈ ಮೂಲಕ ಆರ್ಸಿಬಿ ಟೂರ್ನಿಯಲ್ಲಿ ಗೆಲುವಿನ ಆರಂಭವನ್ನು ಮಾಡಿದೆ.

ಐಪಿಎಲ್ ಹರಾಜಿನಲ್ಲಿ ಅನುನವಿ ಕೃನಾಲ್ ಪಾಂಡ್ಯ ಅವರಿಗೆ ಬೆಂಗಳೂರು ತಂಡ ಮಣೆ ಹಾಕಿತ್ತು. ಮೊದಲ ಪಂದ್ಯದಲ್ಲಿ ಕೃನಾಲ್ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದರು. ಕೃನಾಲ್ ತಮ್ಮ ನೈಜ ಸ್ಪಿನ್ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಿದ್ರು. ಕೃನಾಲ್ ಅವರಿಗೆ ನಾಯಕ ಪವರ್ ಪ್ಲೇನಲ್ಲಿ ಒಂದು ಓವರ್ ಬೌಲ್ ಮಾಡಲು ನೀಡಿದ್ರು. ಆ ಒಂದು ಓವರ್ನಲ್ಲಿ ಕೆಕೆಆರ್ 15 ರನ್ ಬಾರಿಸಿತು.
ತಮ್ಮ ಎರಡನೇ ಸ್ಪೆಲ್ ಮಾಡಲು ಕೃನಾಲ್ 11ನೇ ಓವರ್ನಲ್ಲಿ ಬಂದ್ರು. ಈ ಓವರ್ನ ಮೂರನೇ ಎಸೆತದಲ್ಲಿ ಕೃನಾಲ್ ನಾಯಕ ಅಜಿಂಕ್ಯ ರಹಾನೆ ಅವರಿಗೆ ಖೆಡ್ಡಾ ತೋಡಿದ್ರು. 13ನೇ ಓವರ್ನ ಮೊದಲ ಎಸೆತದಲ್ಲಿ ಕೆಕೆಆರ್ ತಂಡದ ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ್ರು. ತಮ್ಮ ಕೊನೆಯ ಓವರ್ನಲ್ಲಿ ಕೃನಾಲ್ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಅವರಿಗೆ ಖೆಡ್ಡಾ ತೋಡಿ, ಕೆಕೆಆರ್ ಬೃಹತ್ ಮೊತ್ತದ ಕನಸಿಗೆ ಕೊಳ್ಳಿ ಇಟ್ಟರು. ಇವರ ಸ್ಥಿರ ಬೌಲಿಂಗ್ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು.
ಆರ್ಸಿಬಿ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದರ ಹಿಂದೆ ನಾಯಕನ ಚಾಣಕ್ಯತನ ಕಾಣುತ್ತದೆ. ಮೊದಲ 10 ಓವರ್ಗಳಲ್ಲಿ ನೀರಿನಂತೆ ಬಿಟ್ಟುಕೊಟ್ಟ ರನ್ಗಳನ್ನು ಕೊನೆಯ 10 ಓವರ್ಗಳಲ್ಲಿ ತಡೆಯುವಲ್ಲಿ ಸಫಲವಾಯಿತು. ಸಾಮಾನ್ಯವಾಗಿ ಟಿ20 ಕ್ರಿಕೆಟ್ನಲ್ಲಿ ಡೆತ್ ಓವರ್ಗಳಲ್ಲಿ ರನ್ಗಳು ಸರಾಗವಾಗಿ ಬರುತ್ತವೆ. ಆದ್ರೆ ಈ ವೇಳೆ ಆರ್ಸಿಬಿ ಕೆಕೆಆರ್ ತಂಡವನ್ನು ಕಟ್ಟಿ ಹಾಕಿತು.
ಮೊದಲ 10 ಓವರ್ಗಳಲ್ಲಿ ಆರ್ಸಿಬಿ 10.70 ಸರಾಸರಿಯಲ್ಲಿ ರನ್ ನೀಡಿದ್ರೆ, 11 ರಿಂದ 20 ಓವರ್ಗಳಲ್ಲಿ ಬೆಂಗಳೂರು ತಂಡ 6.7 ದರದಲ್ಲಿ ರನ್ಗಳನ್ನು ನೀಡಿ, 6 ವಿಕೆಟ್ಗಳನ್ನು ಕಬಳಿಸಿತು. ಕೊನೆಯ ನಾಲ್ಕು ಓವರ್ಗಳಲ್ಲಿ ಆರ್ಸಿಬಿ 23 ರನ್ ನೀಡಿ 2 ವಿಕೆಟ್ ಕಬಳಿಸಿತು. ಇದು ನಿಶ್ಚಿತವಾಗಿ ಕೆಕೆಆರ್ ತಂಡದ ಮೊತ್ತವನ್ನು ಕುಗಿಸಿತು.
ಇನ್ನು ಈ ಬಾರಿಯ ಐಪಿಎಲ್ನಲ್ಲೂ ಮುಂದುವರೆದಿರುವ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ನ್ನು ಆರ್ಸಿಬಿ ಬಳಸಿಕೊಂಡಿತು. ಸುಯೇಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಕಾಣಿಸಿಕೊಂಡರು. ಆರಂಭದಲ್ಲಿ ಇವರು ರನ್ಗಳಿಗೆ ಕಡಿವಾಣ ಹಾಕುವಲ್ಲಿ ಹಿಂದೆ ಬಿದ್ದರೂ ಸಹ ನಂತರ ಭರ್ಜರಿ ಕಂ ಬ್ಯಾಕ್ ಮಾಡಿದ್ರು. ಇನಿಂಗ್ಸ್ನ 16ನೇ ಓವರ್ನಲ್ಲಿ ಸುಯೇಶ್ ಶರ್ಮಾ ಮ್ಯಾಜಿಕ್ ಮಾಡಿದ್ರು.
ಕೆಕೆಆರ್ ತಂಡದ ಸ್ಫೋಟಕ ಬ್ಯಾಟರ್ ಆಂಡ್ರಿ ರಸೆಲ್ ಅವರಿಗೆ ಸುಯೇಶ್ ಖೆಡ್ಡಾ ತೋಡಿದ್ರು. ಸುಯೇಶ್ ಅವರ ಗೂಗ್ಲಿ ಅರಿಯುವಲ್ಲಿ ವಿಫಲರಾದರ ಅಂಡ್ರಿ ಬೋಲ್ಡ್ ಆದರು. ಇದು ನಿಶ್ಚಿತವಾಗಿ ಕೆಕೆಆರ್ ತಂಡವನ್ನು ಪಂದ್ಯದಿಂದ ಕೊಂಚ ಹಿಂದೆ ಕರೆದುಕೊಂಡು ಹೋಯಿತು. ರಸೆಲ್ ಕ್ರಿಸ್ನಲ್ಲಿ ಇದ್ದಿದ್ದರೆ ಸ್ಕೋರ್ ಇನ್ನು ಹೆಚ್ಚಾಗಿರುತ್ತಿತ್ತು.
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ತಂಡದ ಬೌಲರ್ಗಳ ಶ್ರಮವನ್ನು ಬ್ಯಾಟರ್ಗಳು ಹಾಳು ಮಾಡಲು ಬಿಡಲೇ ಇಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅಮೋಘ ಫಾರ್ಮ್ನಲ್ಲಿದ್ದ ವಿರಾಟ್ ಕೊಹ್ಲಿ ಐಪಿಎಲ್ನಲ್ಲೂ ಇದೇ ಫಾರ್ಮ್ ಮುಂದುವರೆಸಿದರು. ಆರಂಭಿಕರಾಗಿ ವಿರಾಟ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಕೆಕೆಆರ್ ತಂಡದ ಮಾಜಿ ಆಟಗಾರ ಫಿಲ್ ಸಾಲ್ಟ್ ಆರ್ಸಿಬಿಗೆ ಭರ್ಜರಿ ಓಪನಿಂಗ್ ನೀಡಿದರು. ಈ ಜೋಡಿಯ ಆರ್ಭಟ ಕಂಡು ಆರ್ಸಿಬಿ ಫ್ಯಾನ್ಸ್ ಫುಲ್ ಖುಷ್ ಆದರು.

ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಜೊತೆಗೂಡಿ ಪವರ್ ಪ್ಲೇನಲ್ಲಿ ಅಮೋಘ ಆರಂಭ ನೀಡಿದರು. ಮೊದಲ 6 ಓವರ್ಗಳಲ್ಲಿ ಈ ಜೋಡಿ 13.33ರ ಸರಾಸರಿಯಲ್ಲಿ 80 ರನ್ ಕಲೆ ಹಾಕಿತು. ಈ ಜೊತೆಯಾಟ ಕೆಕೆಆರ್ ಪಾಳಯದಿಂದ ಗೆಲುವನ್ನು ತುಂಬ ದೂರ ಕರೆದುಕೊಂಡು ಹೋಯಿತು. ಮೊದಲ ಪಂದ್ಯದಲ್ಲಿ ಇಬ್ಬರೂ ಆಟಗಾರರು ಭರ್ಜರಿ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರಸಕ್ತ ಆವೃತ್ತಿಯಲ್ಲಿ ಮುನ್ನಡೆಸುತ್ತಿರುವ ರಜತ್ ಪಟೀದಾರ, ತಮ್ಮಲ್ಲಿ ನಾಯಕತ್ವದ ಗುಣಗಳು ಇವೆ ಎಂಬುದನ್ನು ಸಾಬೀತು ಪಡಿಸಿದರು. ಇವರು ಸರಿಯಾದ ಸಮಯದಲ್ಲಿ ಬೌಲಿಂಗ್ ಬದಲಾವಣೆಗಳನ್ನು ಮಾಡಿ ತಂಡಕ್ಕೆ ಆಧಾರವಾದರು. ಬೌಲರ್ಗಳು ರನ್ಗಳನ್ನು ಬಿಟ್ಟುಕೊಟ್ಟರೂ ಸಹ ಅವರ ಮೇಲೆ ಒತ್ತಡ ಹೇರದೇ, ಅವರ ಬೆಂಬಲಕ್ಕೆ ನಿಂತು. ಪ್ರತಿ ಹಂತದಲ್ಲೂ ಅವರೊಂದಿಗೆ ಚರ್ಚೆಗಳನ್ನು ನಡೆಸುತ್ತಾ, ವಿರಾಟ್ ಕೊಹ್ಲಿ ಅವರ ಸಲಹೆಗಳನ್ನು ಸಹ ಪಡೆದು ಪಂದ್ಯದಲ್ಲಿ ಮಿಂಚಿದರು. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡವನ್ನು ಮುನ್ನಡೆಸಿದ್ದ ರಜತ್, ತಮ್ಮಲ್ಲೂ ನಾಯಕತ್ವದ ಗುಣಗಳು ಇರುವುದಾಗಿ ಸಾರಿ ಹೇಳಿದ್ರು. ಅಲ್ಲದೆ ತಮ್ಮ ಮೇಲೆ ಆರ್ಸಿಬಿ ಇಟ್ಟ ಭರವಸೆಯನ್ನು ಹುಸಿಯಾಗಿಸಲು ಬಿಡಲಿಲ್ಲ.