
ಸೌಥಾಂಪ್ಟನ್, ಜೂನ್ 23: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯ ನಿರ್ಣಾಯಕ ಘಟ್ಟವನ್ನು ತಲುಪಿದೆ. ತಿರುಗಿ ಬೀಳುವ ವಿಶ್ವಾಸವನ್ನು ಹೊಂದಿದ್ದ ಟೀಮ್ ಇಂಡಿಯಾ ಆರಂಭದಲ್ಲಿಯೇ ಆಘಾತವನ್ನು ಅನುಭವಿಸಿದೆ. ಇಂದಿನ ಮೊದಲ ಸೆಶನ್ನಲ್ಲಿ ಭಾರತ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ಅಂತಿಮ ದಿನದ ಆಟವನ್ನು ಮುಂದುವರಿಸಲು ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಮೇಲೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಈ ನಿರೀಕ್ಷೆ ಹೆಚ್ಚು ಹೊತ್ತು ಇರಲಿಲ್ಲ. ನಾಯಕ ವಿರಾಟ್ ಕೊಹ್ಲಿ ಕೇವಲ 13 ರನ್ಗಳಿಸಿ ಜ್ಯಾಮಿಸನ್ಗೆ ವಿಕೆಟ್ ಒಪ್ಪಸಿದರು. ಬಳಿಕ ಚೇತೇಶ್ವರ್ ಪೂಜಾರ ಕೂಡ ಜೇಮಿಸನ್ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ಗೆ ಸೇರಿಕೊಂಡಿದ್ದಾರೆ. ಈ ಮೂಲಕ ಮಹತ್ವದ ಪಾತ್ರವಹಿಸಬೇಕಿದ್ದ ಇಬ್ಬರು ಅನುಭವಿಗಳು ಕೂಡ ಶೀಘ್ರದಲ್ಲಿಯೇ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದ್ದಾರೆ. ಅಜಿಂಕ್ಯ ರಹಾನೆ ಕೂಡ 15 ರನ್ಗಳಿಗೆ ತಮ್ಮ ಆಟವನ್ನು ಮುಗಿಸಿದ್ದಾರೆ.
ಇನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಸದಸ್ಯನಾಗಿರುವ ಜ್ಯಾಮಿಸನ್ಗೆ ಎರಡನೇ ಇನ್ನಿಂಗ್ಸ್ನಲ್ಲಿ ಔಟಾಗಿದ್ದಾರೆ. ಇದು ಟ್ವಟ್ಟರ್ನಲ್ಲಿ ಸಾಕಷ್ಟು ತಮಾಷೆಯ ಟ್ವೀಟ್ಗಳಿಗೆ ಕಾರಣವಾಗಿದೆ. ಪೂಜಾರ ಔಟಾಗಿರುವ ವಿಚಾರವಾಗಿಯೂ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.
ಅಂತಿಮ ದಿನದಾಟದ ಮೊದಲ ಸೆಶನ್ ಅಂತ್ಯಕ್ಕೆ ಟೀಮ್ ಇಂಡಿಯಾ 130 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಕ್ರೀಸ್ನಲ್ಲಿದ್ದು ರನ್ ಏರಿಸುವ ಪ್ರಯತ್ನದಲ್ಲಿದ್ದಾರೆ. ಮೊದಲ ಸೆಶನ್ ಮುಕ್ತಾಯವಾಗುವ ವೇಳೆಗೆ ಭಾರತ 98 ರನ್ಗಳ ಮುನ್ನಡೆಯನ್ನು ಪಡೆದುಕೊಂಡಿದೆ.