ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಅಕ್ಟೋಬರ್ 24 ರಿಂದ ಪುಣೆಯಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಸೋಮವಾರ ಪುಣೆ ನಗರವನ್ನು ತಲುಪಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿತ್ತು.
ಭಾರತ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದೆ. ಇದೀಗ ರೋಹಿತ್ ಶರ್ಮಾ ಪಡೆ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲ್ಲೇಬೇಕಾದ ಒತ್ತಡದಲ್ಲಿದೆ. ಇದಕ್ಕಾಗಿ ಪಂದ್ಯ ಆರಂಭಕ್ಕೆ ಮೂರು ದಿನಗಳು ಬಾಕಿ ಇರವಂತೆ ಪುಣೆ ತಲುಪಿರುವ ಭಾರತ ತಂಡ ಗೆಲುವಿಗಾಗಿ ಸಿದ್ಧತೆ ನಡೆಸಿದೆ.

ಪುಣೆ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಶುಭ ಸುದ್ದಿ ಬಂದಿದೆ. ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರು ಸಂಪೂರ್ಣ ಫಿಟ್ ಆಗಿರುವ ಕಾರಣ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ಪಂತ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಈ ಕಾರಣಕ್ಕಾಗಿ ಅವರು ಪಂದ್ಯದ ಬಹುಪಾಲು ವಿಕೆಟ್ ಕೀಪಿಂಗ್ ನಿಂದ ದೂರ ಉಳಿದಿದ್ದರು. ಆದರೆ, ಎರಡನೇ ಇನಿಂಗ್ಸ್ನಲ್ಲಿ 99 ರನ್ ಗಳಿಸಿದ ಪಂತ್ ದಿಟ್ಟ ಹೋರಾಟ ನಡೆಸಿದ್ದರು.
ಪಂತ್ ಬ್ಯಾಟಿಂಗ್ ಮಾಡುವಾಗ ಆರಾಮದಾಯಕವಾಗಿರಲಿಲ್ಲ. ನೋವಿನಲ್ಲೇ ಅವರು ಬಿರುಸಿನ ಬ್ಯಾಟಿಂಗ್ ಮಾಡಿದರು. ಪಂತ್ ಈಗ ಸಂಪೂರ್ಣವಾಗಿ ಗಾಯದ ನೋವಿನಿಂದ ಚೇತರಿಸಿಕೊಂಡಿದ್ದು, ಟೀಮ್ ಇಂಡಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಆಸೆ ಮತ್ತೆ ಚಿಗುರಿದೆ. ಮತ್ತೊಂದೆಡೆ ಮೊದಲ ಟೆಸ್ಟ್ ಪಂದ್ಯದಿಂದ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಕುತ್ತಿಗೆ ನೋವಿನ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇದೀಗ ಗಿಲ್ ಕೂಡ ಎರಡನೇ ಟೆಸ್ಟ್ ಪಂದ್ಯ ಆಡಲು ರೆಡಿಯಾಗಿದ್ದಾರೆ. 3 ವರ್ಷಗಳ ಬಳಿಕ ವಾಷಿಂಸ್ಟನ್ ಸುಂದರ್ ಕೂಡ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ಪ್ರಮುಖ ಎರಡು ಬದಲಾವಣೆಗಳನ್ನು ನಾಯಕ ರೋಹಿತ್ ಶರ್ಮಾ ಮಾಡುವ ಸಾಧ್ಯತೆಯಿದೆ.
ಬೆಂಗಳೂರು ಟೆಸ್ಟ್ ಪಂದ್ಯ ಸೋಲಿನ ಬಳಿಕ ಯುವ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹೀಗಿರುವಾಗ ಸುಂದರ್ಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಪುಣೆ ಪಿಚ್ ಬೌಲರ್ಗಳಿಗೆ ಹೇಳಿ ಮಾಡಿಸಿದಂತಿದೆ. ಪಿಚ್ ನಿಧಾನವಾಗಿರುವುದರಿಂದ ಚೆಂಡು ತಿರುಗಲಿದೆ. ಸ್ಪಿನ್ನರ್ಗಳು ಈ ಪಿಚ್ನಲ್ಲಿ ಪ್ರಾಬಲ್ಯ ಸಾಧಿಸುವ ಅವಕಾಶವನ್ನು ಹೊಂದಿದ್ದಾರೆ. ಅದರಿಂದ ಭಾರತ ಹೆಚ್ಚುವರಿ ಸ್ಪಿನ್ನರ್ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಈ ಮೂವರು ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರ ಬೆಂಬಲವನ್ನು ಪಡೆಯಬಹುದು. ಇಲ್ಲವಾದರೆ ನಾಯಕ ರೋಹಿತ್ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ಕುಲದೀಪ್ ಬದಲಿಗೆ ಸುಂದರ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಬಹುದು.
ಕಳಪೆ ಫಾರ್ಮ್ನಲ್ಲಿರುವ ಸ್ಟಾರ್ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈ ಬಿಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಭಾರತದ ಪರ ಕಳೆದ 5 ಇನ್ನಿಂಗ್ಸ್ಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಲು ಶಕ್ತರಾಗಿದ್ದಾರೆ. ರಾಹುಲ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಅಬ್ಬರಿಸುತ್ತಿದ್ದಾರೆ. ಇದು ರಾಹುಲ್ ಮೇಲೆ ಒತ್ತಡ ಹೆಚ್ಚಿಸಿದೆ. ಬೆಂಗಳೂರು ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಸರ್ಫರಾಜ್ 150 ರನ್ ಗಳಿಸಿದ್ದರು. ಈಗ ಸರ್ಫರಾಜ್ ಅವರನ್ನು ರೋಹಿತ್ ಶರ್ಮಾ ಹೊರಗಿಡುವುದು ಸುಳ್ಳಿಗೆ ದೂರವಾದ ಮಾತು.
ಇದೇ ವೇಳೆ ಶುಭಮನ್ ಗಿಲ್ ಅವರು ಫಿಟ್ ಆಗಿದ್ದು, ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಫರಾಜ್, ರಾಹುಲ್ ಮತ್ತು ಗಿಲ್ ಈ ಮೂವರ ಪೈಕಿ ಇಬ್ಬರು ಆಟಗಾರರಿಗೆ ಮಾತ್ರ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಆಡಲು ಅವಕಾಶ ಸಿಗಲಿದೆ.