
ಲಂಡನ್: ಕೋವಿಡ್-19 ಈ ದಿನಗಳಲ್ಲಿ ಬಯೋ ಬಬಲ್ ಒಳಗಿದ್ದು ಕ್ರಿಕೆಟಿಗರು ಮಾನಸಿಕ ತೊಳಲಾಟದಲ್ಲಿ ಬಳಲುವುದನ್ನು ತಪ್ಪಿಸಲು ಏಕಕಾಲದಲ್ಲಿ ಎರಡೆರಡು ತಂಡಗಳು ವಿದೇಶಕ್ಕೆ ಪ್ರಯಾಣಿಸಿ ಅಲ್ಲಿ ಆಡೋ ಟ್ರೆಂಡ್ ಸಾಮಾನ್ಯವಾಗಲಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರವಿ ಶಾಸ್ತ್ರಿ ಸುಳಿವು ನೀಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರವಿ ಶಾಸ್ತ್ರಿ ಮುಂದಾಳತ್ವದ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ಗೆ ಪ್ರಯಾಣಿಸಿದೆ. ಅಲ್ಲಿ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮತ್ತು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಡಲಿದೆ. ಜೂನ್ 18ರಿಂದ ವಿಶ್ವ ಟೆಸ್ಟ್ ಸರಣಿ ಶುರುವಾಗಲಿದೆ.
ಭಾರತದ ಮತ್ತೊಂದು ತಂಡ ಶ್ರೀಲಂಕಾಕ್ಕೆ ಪ್ರಯಾಣಿಸಿದೆ. ರಾಹುಲ್ ದ್ರಾವಿಡ್ ಈ ತಂಡಕ್ಕೆ ಕೋಚ್ ಆಗಿದ್ದಾರೆ. ಸೀಮಿತ ಓವರ್ಗಳ ಈ ತಂಡಕ್ಕೆ ನಾಯಕರನ್ನು ಹೆಸರಿಸಲ್ಪಟ್ಟಿಲ್ಲ. ಶ್ರೀಲಂಕಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿ ಆಡಲಿದೆ.
'ಈಗಿನ ಪರಿಸ್ಥಿತಿಯಲ್ಲಿ ಅದರಲ್ಲೂ ದೀರ್ಘ ಕಾಲ ಬಯೋಬಬಲ್ ಒಳಗಿದ್ದು ಸರಣಿ ಆಡಬೇಕಾಗಿ ಬಂದಾಗ ಸ್ಫೂರ್ತಿದಾಯಕವಾಗಿರೋದು, ಒತ್ತಡವನ್ನು ಹೊರಗಿಡೋದು ಆಟಗಾರರಿಗೆ ಕಷ್ಟವಾಗುತ್ತದೆ,' ಎಂದು ಇಂಗ್ಲೆಂಡ್ಗೆ ಹೊರಡುವ ಮುನ್ನ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಒಂದೇ ತಂಡ ಎಲ್ಲಾ ಕಡೆಗೂ ಹೋಗಿ ಆಡಿ ಬಯೋ ಬಬಲ್ ಒಳಗೆ ಒತ್ತಡ ಅನುಭವಿಸುವುದಕ್ಕಿಂತ ಎರಡೆರಡು ತಂಡಗಳನ್ನು ಆಡಿಸಿದರೆ ಈ ಬಯೋಬಬಲ್ ಬೇಸರ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂಬರ್ಥದಲ್ಲಿ ಕೊಹ್ಲಿ ಮತ್ತು ರವಿ ಶಾಸ್ತ್ರಿ ಮಾತನಾಡಿದ್ದಾರೆ.