Under-19 World Cup: ಹರಾರೆಯಲ್ಲಿ ಫೆಬ್ರವರಿ 4ರಂದು ನಡೆದ ಅಂಡರ್-19 ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ತಂಡ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಈ ಗೆಲುವಿನಲ್ಲಿ ಆರಂಭಿಕ ಬ್ಯಾಟರ್ ಆ್ಯರನ್ ಜಾರ್ಜ್ ಅವರ ಶತಕ, ಸೂರ್ಯವಂಶಿಯ ಸ್ಫೋಟಕ ಇನ್ನಿಂಗ್ಸ್ ಹಾಗೂಆಯುಷ್ ಮ್ಹಾತ್ರೆಯ ಉಪಯುಕ್ತ ಕೊಡುಗೆ ಪ್ರಮುಖ ಪಾತ್ರವಹಿಸಿದೆ. ಹಾಗಾದ್ರೆ ಇವರ ರನ್ಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತಕ್ಕೆ 7 ವಿಕೆಟ್ಗಳ ಗೆಲುವು: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 7 ವಿಕೆಟ್ಗಳ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದೆ.

ಗೆಲುವಿಗೆ ಕಾರಣರಾದ ಮೂವರು ಸ್ಟಾರ್ ಆಟಗಾರರು: 311 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಟಗಾರರಾದ ಸೂರ್ಯವಂಶಿ ಮತ್ತು ಆ್ಯರನ್ ಜಾರ್ಜ್ ಉತ್ತಮ ಆರಂಭ ನೀಡಿದರು. ಸೂರ್ಯವಂಶಿ ಕೇವಲ 33 ಎಸೆತಗಳಲ್ಲಿ 68 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ನಂತರ ಅವರು ಔಟ್ ಆದರೂ, ಆ್ಯರನ್ ಜಾರ್ಜ್ ಇನ್ನಿಂಗ್ಸ್ನ್ನು ಮುಂದುವರೆಸಿ ತಂಡವನ್ನು ಗೆಲುವಿನ ದಾರಿಗೆ ಕರೆದೊಯ್ದರು.
ಮಧ್ಯ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಆಯುಷ್ ಮ್ಹಾತ್ರೆ 62 ರನ್ಗಳ ಕೊಡುಗೆ ನೀಡಿದರು. ನಂತರ ವಿಹಾನ್ ಮಲ್ಹೋತ್ರಾ ಜೊತೆಯಾಟದಲ್ಲಿ ಆ್ಯರನ್ ಜಾರ್ಜ್ ಶತಕ ಬಾರಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಆ್ಯರನ್ ಜಾರ್ಜ್ 115 ರನ್ಗಳ ಅದ್ಭುತ ಶತಕದೊಂದಿಗೆ ಮಿಂಚಿದರು. ಅಂತಿಮವಾಗಿ ಭಾರತ 41.1 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇನ್ನೂ ಈ ಗೆಲುವಿನೊಂದಿಗೆ ಭಾರತ ಫೈನಲ್ಗೆ ಅರ್ಹತೆ ಪಡೆದಿದ್ದು, ಫೆಬ್ರವರಿ 6ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದೆ.
ಮೂವರು ಸ್ಟಾರ್ ಆಟಗಾರರ ವಿವರ: ಭಾರತ ಅಂಡರ್ 19 ಕ್ರಿಕೆಟ್ ತಂಡದಲ್ಲಿ ಭವಿಷ್ಯದ ತಾರೆಯೆಂದು ಗುರುತಿಸಿಕೊಂಡಿರುವ ಹಲವು ಪ್ರತಿಭಾವಂತ ಆಟಗಾರರು ಇದ್ದಾರೆ. ಇವರಲ್ಲಿ ಕೆಲವರು ತಮ್ಮ ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್ರೌಂಡರ್ ಪ್ರದರ್ಶನದಿಂದ ಈಗಾಗಲೇ ಗಮನ ಸೆಳೆದಿದ್ದಾರೆ. ಆ್ಯರನ್ ಜಾರ್ಜ್ ತಂಡದ ಪ್ರಮುಖ ಆರಂಭಿಕ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ತಾಳ್ಮೆಯ ಜೊತೆಗೆ ಆಕ್ರಮಣಕಾರಿ ಆಟವನ್ನೂ ಆಡಬಲ್ಲ ಸಾಮರ್ಥ್ಯ ಹೊಂದಿರುವ ಅವರು, ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಪರಿಣತಿ ಹೊಂದಿದ್ದಾರೆ. ಮಹತ್ವದ ಪಂದ್ಯಗಳಲ್ಲಿ ಶತಕ ಬಾರಿಸುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ.
ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟರ್ ಆಗಿದ್ದು, ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಪವರ್ಪ್ಲೇ ಹಂತದಲ್ಲೇ ಎದುರಾಳಿ ಬೌಲರ್ಗಳ ಚಳಿ ಬಿಡಿಸುವಲ್ಲಿ ಅವರು ಎತ್ತಿದ್ದ ಕೈ. ಇನ್ನೂ ಆಯುಷ್ ಮ್ಹಾತ್ರೆ ಮಧ್ಯಮ ಕ್ರಮಾಂಕದ ನಂಬಿಕಸ್ತ ಬ್ಯಾಟರ್ ಆಗಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಜವಾಬ್ದಾರಿಯುತ ಆಟವಾಡುವುದೇ ಅವರ ವಿಶೇಷತೆ. ಜೊತೆಗೆ ಅಗತ್ಯವಿದ್ದಾಗ ವೇಗದಲ್ಲಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯವನ್ನೂ ಕೂಡ ಅವರು ಹೊಂದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಕನಿಷ್ಕ್ ಚೌಹಾಣ್ ಮತ್ತು ದೀಪೇಶ್ ದೇವೇಂದ್ರನ್ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರು. ಇವರು ನಿರ್ಣಾಯಕ ಹಂತಗಳಲ್ಲಿ ವಿಕೆಟ್ ಪಡೆದು ತಂಡಕ್ಕೆ ಬಲ ನೀಡುತ್ತಿದ್ದಾರೆ. ಈ ಯುವ ಆಟಗಾರರ ಸಂಯೋಜನೆಯೇ ಭಾರತ ಅಂಡರ್ 19 ತಂಡವನ್ನು ಬಲಿಷ್ಠವಾಗಿಸಿದ್ದು, ಮುಂದಿನ ದಿನಗಳಲ್ಲಿ ಸೀನಿಯರ್ ತಂಡಕ್ಕೂ ಅವರು ಸವಾಲು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.