
ಅಂಡರ್ 19 ವಿಶ್ವಕಪ್ನಲ್ಲಿ ಭಾರತ ಮತ್ತೊಂದು ಬಾರಿ ಫೈನಲ್ಗೆ ಪ್ರವೇಶ ಪಡೆದಿದೆ. ಯಶ್ ಧುಲ್ ನೇತೃತ್ವದ ಭಾರತ ತಂಡ ಟೂರ್ನಿಯುದ್ದಕ್ಕೂ ಸಾಕಷ್ಟು ಸವಾಲುಗಳ ಮಧ್ಯೆ ಭರ್ಜರಿ ಪ್ರದರ್ಶನವನ್ನು ನೀಡಿದ್ದು ಟ್ರೋಫಿ ಗೆಲ್ಲುವ ಸನಿಹಕ್ಕೆ ಬಂದು ನಿಂತಿದೆ. ಶನಿವಾರ ಅಂಡರ್ 19 ವಿಶ್ವಕಪ್ನ ಫೈನಲ್ ಪಂದ್ಯ ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಭಾರತೀಯ ಕಿರಿಯರ ತಂಡದ ಜೊತೆಗೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸಂವಾದ ನಡೆಸಿದ್ದಾರೆ.
ವಿರಾಟ್ ಕೊಹ್ಲಿ ಜೊತೆಗೆ ಸಂವಾದ ನಡೆಸಿದ ಸಂತಸವನ್ನು ಭಾರತೀಯ ಅಂಡರ್ 19 ತಂಡದ ಕೆಲ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತ ಅಂಡರ್ 19 ತಂಡದ ಆಫ್ ಸ್ಪಿನ್ನರ್ ಕೌಶಲ್ ತಾಂಬೆ ವಿರಾಟ್ ಕೊಹ್ಲಿಯೊಂದಿಗಿನ ತಮ್ಮ ವರ್ಚುವಲ್ ಸಂವಾದದ ಸ್ಕ್ರೀನ್ಗ್ರ್ಯಾಬ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಫೈನಲ್ ಪಂದ್ಯಕ್ಕೆ ಮುಂಚಿತವಾಗಿ ಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ನಮಗೆ ಕೆಲ ಅಮೂಲ್ಯವಾದ ಸಲಹೆಗಳನ್ನು ನೀಡಿದರು" ಎಂದು ಹಂಚಿಕೊಂಡಿದ್ದಾರೆ.
ಅಂಡರ್ 19 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಛಾಪು ಮೂಡಿಸಿರುವ ಆಲ್ ರೌಂಡರ್ ರಾಜವರ್ಧನ್ ಹಂಗರ್ಗೇಕರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. "ಇದು ನಿಜಕ್ಕೂ ಕೂಡ ಅದ್ಭುತವಾದ ಸಂವಾದವಾಗಿತ್ತು. ಕ್ರಿಕೆಟ್ ಹಾಗೂ ಜೀವನದ ವಿಚಾರವಾಗಿ ಕೆಲ ಮಹತ್ವದ ಅಂಶಗಳನ್ನು ನಿಮ್ಮಿಂದ ಕಲಿತೆವು. ಇದು ನಮಗೆ ಮುಂದಿನ ದಿನಗಳಲ್ಲಿ ಖಂಡಿತಾ ಸಹಾಯವಾಗಲಿದೆ" ಎಂದು ಹಂಗರ್ಗೇಕರ್ ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ 2008ರಲ್ಲಿ ಭಾರತೀಯ ಅಂಡರ್ 19 ತಂಡದ ನಾಯಕನಾಗಿ ವಿಶ್ವಕಪ್ನಲ್ಲಿ ತಂಡವನ್ನು ಮುನ್ನಡೆಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಅಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಕೊಹ್ಲಿ ಪಡೆ ಭರ್ಜರಿ ಗೆಲುವು ಸಾಧಿಸಿ ಟ್ರೋಫಿ ಎತ್ತಿ ಹಿಡಿದಿತ್ತು. ಸದ್ಯ ವಿರಾಟ್ ಕೊಹ್ಲಿ ಅಹಮದಾಬಾದ್ನಲ್ಲಿದ್ದು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಅಂಡರ್ 19 ವಿಶ್ವಕಪ್ ತಂಡದೊಂದಿಗೆ ವಿಶ್ವಕಪ್ಗೆ ಪ್ರಯಾಣಿಸುವುದಕ್ಕೂ ಮುನ್ನ ಭಾರತದ ವೈಟ್ಬಾಲ್ ತಂಡದ ನಾಯಕ ರೋಹಿತ್ ಶರ್ಮಾ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಸಂವಾದವನ್ನು ನಡೆಸಿದ್ದರು.
ಇನ್ನು ಉಶ್ ಧುಲ್ ನೇತೃತ್ವದ ಭಾರತ ಅಂಡರ್ 19 ತಂಡ ಟೂರ್ನಿಯಲ್ಲಿ ಈವರೆಗೆ ಅಮೋಘ ಆಟವನ್ನು ಪ್ರದರ್ಶಿಸುತ್ತಾ ಬಂದಿದೆ. ಭಾರತ ತಂಡಕ್ಕೆ ಈ ವಿಶ್ವಕಪ್ ಅವಧಿಯಲ್ಲಿ ಕೊರೊನಾವೈರಸ್ ಸಾಕಷ್ಟು ಹಿನ್ನಡೆಯುಂಟು ಮಾಡಿದ್ದರೂ ತಂಡದ ಪ್ರದರ್ಶನದ ಮೇಲೆ ಇದು ಯಾವುದೇ ಪರಿಣಾಮ ಬೀರಲಿಲ್ಲ ಎಂಬುದು ಗಮನಾರ್ಹ ಅಂಶ. ಸದ್ಯ ಎಲ್ಲಾ ಆಟಗಾರರು ಕೂಡ ಚೇತರಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅಂಡರ್ 19 ತಂಡ ಎಲ್ಲಾ ವಿಭಾಗಗಳಲ್ಲಿಯೂ ಅಮೋಘ ಆಟವನ್ನು ಪ್ರದರ್ಶಿಸಿತ್ತು. ನಾಯಕ ಯಶ್ ಧುಲ್ ಹಾಗೂ ಉಪ ನಾಯಕ ಶೇಕ್ ರಶೀದ್ ದ್ವಿಶತಕದ ಜೊತೆಯಾಟ ನೀಡುವ ಮೂಲಕ ಬೃಹತ್ ಮೊತ್ತಕ್ಕೆ ಕಾರಣವಾದರು. ನಾಯಕ ಯಶ್ ಧುಲ್ ಭರ್ಜರಿ ಶತಕ ಬಾರಿಸಿದರೆ ಶೇಕ್ ರಶೀದ್ 94 ರನ್ಗಳಿಸಿ ವಿಕೆಟ್ ಕಳೆದುಕೊಂಡಿದ್ದರು. ಅದಾದ ಬಳಿಕ ಬೌಲಿಂಗ್ ವಿಭಾಗದಲ್ಲಿಯೂ ಭಾರತ ಅದ್ಭುತ ಪ್ರದರ್ಶನ ನೀಡಿದ್ದು ಆಸ್ಟ್ರೇಲಿಯಾ ತಂಡವನ್ನು 192 ರನ್ಗಳಿಗೆ 42 ಓವರ್ಗೂ ಮುನ್ನವೇ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಫೈನಲ್ ಪಂದ್ಯಕ್ಕೆ ಅರ್ಹತೆ ಸಂಪಾದಿಸಿದೆ.