ರಾಂಚಿ, ಮಾರ್ಚ್ 29: ನಾಗರಿಕರಿಗೆ ಆಧಾರ್ ಸಂಖ್ಯೆ ಒದಗಿಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(UIDAI)ಕ್ಕೆ ನೆರವಾಗುವ ಏಜೆನ್ಸಿಯೊಂದು ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರ ಆಧಾರ್ ಕಾರ್ಡ್ ವಿವರ ಬಹಿರಂಗ ಮಾಡಿದ್ದು ತಿಳಿದಿರಬಹುದು. ಇಂಥದ್ದೊಂದು ಪ್ರಮಾದ ಎಸಗಿದ ಸಂಸ್ಥೆಯನ್ನು 10ವರ್ಷಗಳ ಕಾಲ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಮಹೇಂದ್ರ ಸಿಂಗ್ ಧೋನಿ ಅವರ ವೈಯಕ್ತಿಕ ವಿವರಗಳನ್ನು ಟ್ವೀಟ್ ಮಾಡಲಾಗಿತ್ತು.ಇದನ್ನು ಕಂಡು ಗರಂ ಆಗಿದ್ದ ಧೋನಿ ಅವರ ಪತ್ನಿ ಸಾಕ್ಷಿ ಅವರು ಕೇಂದ್ರ ಸರ್ಕಾರದ ಗಮನಕ್ಕೆ ಈ ವಿಷಯ ತಂದಿದ್ದರು.

'ಅಪ್ಲಿಕೇಶನ್ ಸೇರಿದಂತೆ ಆಧಾರ್ ಕಾರ್ಡ್ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗಿದೆ. ಖಾಸಗಿತನಕ್ಕೆ ಅವಕಾಶವೇ ಇಲ್ಲವೇ?' ಎಂದು ಸಾಕ್ಷಿ ಅವರು ಖಾರವಾಗಿ ರವಿಶಂಕರ್ ಪ್ರಸಾದ್ ಅವರನ್ನು ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಸಾದ್, 'ವೈಯಕ್ತಿಕ ಮಾಹಿತಿ ಬಹಿರಂಗ ಮಾಡುವುದು ಅಕ್ರಮ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು' ಎಂದು ಪ್ರತಿಕ್ರಿಯಿಸಿದ್ದರು.