
ಧಾಕಾ: ಅಂಪೈರ್ಗಳ ಪಾತ್ರ ಪ್ರಶ್ನಾರ್ಥವಾದರೆ ಅವರನ್ನೂ ಶಿಕ್ಷಿಸಬೇಕಾಗುತ್ತದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಹೇಳಿದೆ. ಬಾಂಗ್ಲಾ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಧಾಕಾ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ದುರ್ವರ್ತನೆ ತೋರಿದ ವಿವಾದದ ಬಳಿಕ ಬಾಂಗ್ಲಾ ಈ ಹೇಳಿಕೆ ನೀಡಿದೆ.
ಜೂನ್ 11ರಂದು ಮಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಅಬಹನಿ ಲಿಮಿಟೆಡ್ ನಡುವಿನ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ವಿವಾದಕ್ಕಾಗಿ ಗಮನ ಸೆಳೆದಿದ್ದರು. ಮಹಮ್ಮದನ್ ತಂಡದಲ್ಲಿದ್ದ ಶಕೀಬ್ ಬಾಂಗ್ಲಾ ತಂಡದ ಸಹ ಆಟಗಾರ ಮುಸ್ತಫಿಝುರ್ ರಹೀಮ್ ವಿಕೆಟ್ಗಾಗಿ ಎಲ್ಬಿಡಬ್ಲ್ಯೂ ಅಪೀಲ್ ಮಾಡಿದರು. ಅಂಪೈರ್ ಔಟ್ ನೀಡಲಿಲ್ಲ. ಆಗ ಸಿಟ್ಟಿಗೆದ್ದ ಶಕೀಬ್ ವಿಕೆಟ್ಗೆ ಒದ್ದು ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಅದೇ ಪಂದ್ಯದಲ್ಲಿ ಮತ್ತೊಮ್ಮೆ ಶಕೀಬ್ ವಿಕೆಟ್ಗಳ ಕಿತ್ತೆಸೆದು ಅಂಪೈರ್ ತೀರ್ಪಿಗೆ ಆಕ್ರೋಶ ತೋರಿಕೊಂಡಿದ್ದರು. ಆ ಬಳಿಕ ತನ್ನ ವರ್ತನೆಗೆ ಶಕೀಬ್ ಕ್ಷಮೆಯೂ ಕೇಳಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಶಕೀಬ್ ದುರ್ವರ್ತನೆಯ ವಿಡಿಯೋ ವೈರಲ್ ಆಗಿದ್ದರಿಂದ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಶಕೀಬ್ ಅವರನ್ನು ಧಾಕಾ ಪ್ರೀಮಿಯರ್ ಲೀಗ್ ಮುಂದಿನ ನಾಲ್ಕು ಪಂದ್ಯಗಳಿಂದ ಅಮಾನತುಗೊಳಿಸಿತ್ತು. ಆಟಗಾರ ತಪ್ಪೆಸಗಿದರೆ ಮಾತ್ರ ಶಿಕ್ಷೆ ನೀಡೋದಲ್ಲ, ಅಂಪೈರ್ ತಪ್ಪು ಕಂಡುಬಂದರೂ ಅವರನ್ನೂ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ಬಿಸಿಬಿ ಈಗ ಎಚ್ಚರಿಸಿದೆ.
'ಕಳೆದ ಏಳೆಂಟು ವರ್ಷಗಳಿಂದ ನಾವು ಕ್ರಿಕೆಟ್ನಲ್ಲಿ ಬಹಳಷ್ಟು ಪ್ರಗತಿ ಸಾಧಿಸುತ್ತಿದ್ದೇವೆ. ನಾವು ಕ್ರಿಕೆಟ್ನಲ್ಲಿ ಯಾವತ್ತೂ ಅತ್ಯುತ್ತಮ ಪ್ರದರ್ಶನ ನಿರೀಕ್ಷಿಸುತ್ತೇವೆ. ಅಂಪೈರ್ ಪರಿಶೀಲನೆಯಲ್ಲಿನ ಪಾತ್ರ ಪ್ರಶ್ನಾರ್ಥವಾಗಿ ಕಂಡು ಬಂದರೆ, ಅಗತ್ಯ ಬಿದ್ದರೆ ಅವರನ್ನೂ ನಾವು ಶಿಕ್ಷಿಸಬೇಕಾಗುತ್ತದೆ,' ಎಂದು ಬಿಸಿಬಿ ನಿರ್ದೇಶಕ ಶೈಖ್ ಸೊಹೈಲ್ ಹೇಳಿದ್ದಾರೆ.