
ಕೊರೊನಾ ವೈರಸ್ನ ಕಾರಣದಿಂದಾಗಿ ಐಸಿಸಿ ಕ್ರಿಕೆಟ್ನಲ್ಲಿ ಚೆಂಡಿಗೆ ಎಂಜಲು ಬಳಸುವುದನ್ನು ನಿಷೇಧಿಸಿದೆ. ಆದರೆ ಈ ನಿಷೇಧಕ್ಕೆ ಅನೇಕ ಬೌಲರ್ಗಳು ಬೇರೆ ಬೇರೆ ರೀತಿಯಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ವೇಗದ ಬೌಲರ್ಗಳಿಗೆ ಸ್ವಿಂಗ್ ಮಾಡಲು ಸಾಧ್ಯವಾಗುವುದಿಲ್ಲ, ಹೀಗಾಗಿ ಬ್ಯಾಟ್ಸ್ಮನ್ಗಳಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಜೋರಾಗಿ ವ್ಯಕ್ತವಾಗುತ್ತಿದೆ.
ಆದರೆ ಈ ರೀತಿಯ ಅಭಿಪ್ರಾಯಗಳಿಗೆ ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಲಕ್ಷ್ಮಣ್ ಶಿವರಾಮಕೃಷ್ಣನ್ ನೇರವಾಗಿ ತಿರುಗೇಟು ನೀಡಿದ್ದಾರೆ. ಕೌಶಲ್ಯವಿಲ್ಲದ ಬೌಲರ್ಗಳು ಮಾತ್ರವೇ ಈ ರೀತಿಯ ಕಾರಣಗಳನ್ನು ನೀಡುತ್ತಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವೇಗದ ಬೌಲರ್ಗಳು ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಎಂಜಲಿನ ಬದಲು ಬೆವರನ್ನು ಬಳಸಬಹುದು. ಆಟದಲ್ಲಿ ಬದಲಾವಣೆಗಳು ನಡೆಯುತ್ತಾ ಇರುತ್ತದೆ. ಸಾಂಕ್ರಾಮಿಕ ರೋಗವಾದ ಕೊರೊನಾ ವೈರಸ್ನ ಕಾರಣದಿಂದಾಗಿ ಈ ಕ್ರಮವನ್ನು ಐಸಿಸಿ ತೆಗೆದುಕೊಂಡಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ ಶಿವರಾಮಕೃಷ್ಣನ್.
ಕೌಶಲ್ಯವನ್ನು ಹೊಂದಿರುವ ಬೌಲರ್ಗಳು ವಿಕೆಟ್ ಗಳನ್ನು ಪಡೆಯಲು ದಾರಿಗಳನ್ನು ಕಂಡುಕೊಳ್ಳುತ್ತಾರೆ. ಆದರೆ ಕೌಶಲ್ಯವನ್ನು ಹೊಂದಿಲ್ಲದ ಬೌಲರ್ಗಳು ಮಾತ್ರ ಈ ರೀತಿ ಕಾರಣಗಳನ್ನು ಹುಡುಕುತ್ತಾರೆ ಎಂದು ಎಂಜಲು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬೌಲರ್ಗಳ ವಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಲಕ್ಷ್ಮಣ್ ಶಿವರಾಮಕೃಷ್ಣನ್ ಕ್ರಿಕೆಟ್ ಬ್ಯಾಟ್ಸ್ಮನ್ಗಳ ಪರವಾಗುತ್ತಿದೆ ಎಂಬುದನ್ನು ನಿರಾಕರಿಸಿದರು. ಬ್ಯಾಟ್ಸ್ಮನ್ಗಳ ಪರವಾಗಿದ್ದರೆ ಟೆಸ್ಟ್ ಕ್ರಿಕೆಟ್ನ ಬಹುತೇಕ ಪಂದ್ಯಗಳು ನಾಲ್ಕೇ ದಿನಕ್ಕೆ ಮುಗಿಯುತ್ತಿರಲಿಲ್ಲ. ಐದನೇ ದಿನಕ್ಕೆ ಮುಂದುವರಿಯುವ ಪಮದ್ಯಗಳು ಕೂಡ ಬೇಗನೆ ಫಲಿತಾಂಶವನ್ನು ಪಡೆಯುತ್ತವೆ ಎಂದು ಹೇಳಿದ್ದಾರೆ