ಜುಲೈ 30 ಮಂಗಳವಾರ, ಮುಂಬರುವ 2025ರ ಐಪಿಎಲ್ ಟೂರ್ನಿ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಹಲವು ದಿಗ್ಗಜ ಆಟಗಾರರು ಐಪಿಎಲ್ನಿಂದ ದೂರ ಸರಿಯುವ ಸಾಧ್ಯತೆ ಇದೆ.
ಐಪಿಎಲ್ 2024 ಟೂರ್ನಿ ಮುಗಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿನ ಋತುವಿನಲ್ಲಿ ಆಡುತ್ತಾರೋ? ಇಲ್ಲವೋ ಎಂಬುದು ಕ್ಯಾಪ್ಟನ್ ಕೂಲ್ ಅಭಿಮಾನಿಗಳ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಯಾಗಿದೆ.

ಧೋನಿ ನಂತರ ಋತುರಾಜ್ ಗಾಯಕ್ವಾಡ್ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಿತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಸಿಎಸ್ಕೆ ಸೋತು ಪ್ಲೇ-ಆಫ್ ರೇಸ್ನಿಂದ ಹೊರಗುಳಿದಿತ್ತು.
ಇದಾದ ಬಳಿಕ ಧೋನಿ ಮತ್ತೊಮ್ಮೆ ಹಳದಿ ಜೆರ್ಸಿ ಧರಿಸುತ್ತಾರಾ ಅಥವಾ ತಂಡದಲ್ಲಿ ಹೊಸ ಪಾತ್ರವನ್ನು ವಹಿಸುತ್ತಾರಾ ಎಂಬ ಊಹಾಪೋಹ ಕ್ರಿಕೆಟ್ ಜಗತ್ತಿನಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ ಸಿಎಸ್ಕೆ ಅತ್ಯಂತ ಯಶಸ್ವಿ ತಂಡಗಳ ಪೈಕಿ ಒಂದಾಗಿದೆ. 2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಸಿಎಸ್ಕೆ ತಂಡದ ಜೊತೆಗೆ ಧೋನಿ ಇದ್ದಾರೆ.
ಅವರು ತಮ್ಮ ನಾಯಕತ್ವದಲ್ಲಿ ತಂಡಕ್ಕೆ 5 ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದಾರೆ. ಧೋನಿ ನಾಯಕತ್ವ ಮತ್ತು ತಂತ್ರಗಳಿಂದ ಸಿಎಸ್ಕೆ ಅನ್ನು ಐಪಿಎಲ್ನ ಬಲಿಷ್ಠ ತಂಡಗಳಲ್ಲಿ ಒಂದನ್ನಾಗಿ ಮಾಡಿದ್ದಾರೆ.
ಇತ್ತೀಚಿನ ಕ್ರಿಕ್ಬಜ್ ವರದಿಯ ಪ್ರಕಾರ, ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನೊಂದಿಗೆ ಧೋನಿ ಅವರ ಭವಿಷ್ಯವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪ್ರಮುಖ ನಿರ್ಧಾರವನ್ನು ಆಧರಿಸಿದೆ. ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಿರುವುದು ಪ್ರಮುಖ ಅಂಶವಾಗಿದೆ.
ಹೀಗಿರುವ ಬಿಸಿಸಿಐ ನಿಯಮಗಳ ಪ್ರಕಾರ ಐಪಿಎಲ್ ಫ್ರಾಂಚೈಸಿಗಳು ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಬಹುದು. ಇದೇ ನಿಯಮ ಮುಂದುವರಿದರೆ ಧೋನಿ ಚೆನ್ನೈ ಜೊತೆಗಿನ ಸಂಬಂಧ ಮುರಿದು ಬೀಳಲಿದೆ.
ವರದಿಯ ಪ್ರಕಾರ, ಮುಂದಿನ ವರ್ಷದ 2025ರ ಐಪಿಎಲ್ನಲ್ಲಿ ಧೋನಿ ಅವರನ್ನು ಸಿಎಸ್ಕೆ ಉಳಿಸಿಕೊಳ್ಳುವುದು ಅನುಮಾನವಾಗಿದೆ. ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶ್ರೀಲಂಕಾದ ವೇಗದ ಬೌಲರ್ ಮತಿಶಾ ಪತಿರಾನಾ ಮತ್ತು ಶಿವಂ ದುಬೆ ಉಳಿಸಿಕೊಳ್ಳುವ ನೆಚ್ಚಿನ ಆಟಗಾರರು ಎಂದು ನಿರೀಕ್ಷಿಸಲಾಗಿದೆ.
ಒಂದು ವೇಳೆ ಬಿಸಿಸಿಐ 5 ಅಥವಾ 6 ಆಟಗಾರರನ್ನು ಉಳಿಸಿಕೊಳ್ಳುವ ನಿರ್ಧಾರ ಕೈಗೊಂಡರೆ, ಧೋನಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುವ ಅವಕಾಶವಿದೆ. ಆದಾಗ್ಯೂ, ಆಟಗಾರರನ್ನು ಉಳಿಸಿಕೊಳ್ಳುವ ಸಂಖ್ಯೆಯು ನಾಲ್ಕಕ್ಕೆ ಸೀಮಿತವಾಗಿದ್ದರೆ, ಸಿಎಸ್ಕೆ ಯುವ ಪ್ರತಿಭೆಗಳು ಮತ್ತು ಫಾರ್ಮ್ನಲ್ಲಿರುವ ಪ್ರಮುಖ ಆಟಗಾರರಿಗೆ ಮಣೆ ಹಾಕಲಿದೆ.
ಜುಲೈ 31 ರಂದು ಐಪಿಎಲ್ ಫ್ರಾಂಚೈಸಿ ಮಾಲೀಕರೊಂದಿಗೆ ಬಿಸಿಸಿಐ ಸಭೆಯಲ್ಲಿ ಉಳಿಸಿಕೊಳ್ಳುವ ಸಂಖ್ಯೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಸಿಎಸ್ಕೆ ಸೇರಿದಂತೆ ಎಲ್ಲ ತಂಡಗಳಿಗೂ ಈ ನಿರ್ಧಾರ ಮಹತ್ವದ್ದಾಗಿದೆ.
ಮೆಗಾ ಹರಾಜಿಗಾಗಿ ತಂಡದ ಸಿದ್ಧತೆಗಳ ಮೇಲೂ ಪರಿಣಾಮ ಬೀರಲಿದೆ. ನಿಯಮಗಳು ಆಟಗಾರರನ್ನು ಹೆಚ್ಚು ಉಳಿಸಿಕೊಳ್ಳಲು ಅವಕಾಶ ನೀಡಿದರೆ, ಧೋನಿ ಸಿಎಸ್ಕೆ ತಂಡದ ಆಡುವ ಹನ್ನೊಂದರಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬಹುದು. ಇದು ಆಗದಿದ್ದರೆ ಮುಂದಿನ ಋತುವಿನಲ್ಲಿ ಧೋನಿ ಅವರನ್ನು ಮೆಂಟರ್ ಆಗಿ ನೋಡಬಹುದು.