ನಾಯಕ ಆಕಾಶ್ ಮಧ್ವಲ್ ಅವರು ಮನಮೋಹಕ ದಾಳಿಯ ನೆರವಿನಿಂದ ಉತ್ತರಾಖಂಡ ತಂಡ 6 ರನ್ಗಳಿಂದ ಕರ್ನಾಟಕ ತಂಡವನ್ನು ಮಣಿಸಿ, ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಜಯ ಕಂಡಿದೆ. ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಹಿಮಾಂಶು ಬಿಸ್ತಾ ತಂಡದ ಗೆಲುವಿನಲ್ಲಿ ಮಿಂಚಿದರು. ಈ ಮೂಲಕ ಕರ್ನಾಟಕ ಸರಣಿಯಲ್ಲಿ ಮೊದಲ ಸೋಲಿನ ಕಹಿಯನ್ನು ಅನುಭಿಸಿತು. ಉತ್ತರಾಖಂಡ ಮೊದಲ ಗೆಲುವು ಸಾಧಿಸಿದ್ದು, ಅಗ್ರ ಸ್ಥಾನ ಪಡೆದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈ ಗೊಂಡ ಉತ್ತರಾಖಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕರ್ನಾಟಕ 19.5 ಓವರ್ಗಳಲ್ಲಿ 209 ರನ್ ಸೇರಿಸಿ ಸೋಲು ಕಂಡಿತು.

ಒಂದು ಹಂತದಲ್ಲಿ 208 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ ಕೊನೆಯ ಓವರ್ ಬೌಲ್ ಮಾಡಿದ ಆಕಾಶ್ ಮಧ್ವಲ್ ಅವರ ಬಿಗುವಿನ ದಾಳಿಗೆ ಕರ್ನಾಟಕದ ಬ್ಯಾಟರ್ಗಳು ಕಂಗಾಲಾದರು. ಕೊನೆಯ ಓವರ್ನ ಎರಡನೇ ಎಸೆತದಲ್ಲಿ ಶುಭಾಂಗ್ ಹೆಗಡೆ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ನಂತರದ ಸತತ ಮೂರು ಎಸೆತಗಳಲ್ಲಿ ಶ್ರೇಯಸ್ ಗೋಪಾಲ್, ವಿಜಯ್ಕುಮಾರ್ ವೈಶಾಖ್, ವಾಸುಕಿ ಕೌಶಿಕ್ ಸೊನ್ನೆ ಸುತ್ತಿ ಔಟ್ ಆದರು.
ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಎಲ್ಆರ್ ಚೇತನ್, ಮಯಾಂಕ್ ಅಗರ್ವಾಲ್ ಜೋಡಿ 4.5 ಓವರ್ಗಳಲ್ಲಿ 56 ರನ್ ಸಿಡಿಸಿತು. 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಎಲ್ ಆರ್ ಚೇತನ್, 31 ರನ್ ಬಾರಿಸಿ ಔಟ್ ಆದರು.
ಎರಡನೇ ವಿಕೆಟ್ಗೆ ಮಯಾಂಕ್ ಅಗರ್ವಾಲ್ ಹಾಗೂ ಕೃಷ್ಣ ಶ್ರೀಜೇತ್ ಜೊತೆಗೂಡಿ 46 ರನ್ಗಳ ಸೇರಿಸಿತು. ಈ ವೇಳೆ 5 ಬೌಂಡರಿ, 3 ಸಿಕ್ಸರ್ ಸಿಡಿಸಿದ್ದ ಮಯಾಂಕ್ 48 ರನ್ಗಳಿಗೆ ಆಟ ಮುಗಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಕೃಷ್ಣ ಶ್ರೀಜೇತ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ 72 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಕೆಳ ಮಧ್ಯಮ ಕ್ರಮಾಂಕದ ಶುಭಾಂಗ್ ಹೆಗಡೆ 36 ರನ್ ಸಿಡಿಸಿ ಔಟ್ ಆದರು. ಉತ್ತರಾಖಂಡ ಪರ ಆಕಾಶ್ ಮಧ್ವಾಲ್ ಹಾಗೂ ಹಿಮಾಂಶು ಬಿಸ್ತಾ ತಲಾ ಮೂರು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಉತ್ತರಾಖಂಡ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್ಗೆ ಯುವರಾಜ್ ಚೌಧರಿ, ರವಿಕುಮಾರ್ ಸಮರ್ಥ್ (21) ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಎರಡನೇ ವಿಕೆಟ್ಗೆ 80 ರನ್ ಸೇರಿಸಿತು. ಭರವಸೆಯ ಆಟಗಾರ ಆದಿತ್ಯ ತಾರೆ 42, ವಿಜಯ್ ಶರ್ಮಾ 14 ರನ್ ಬಾರಿಸಿ ಮಿಂಚಿದರು.
ಆರಂಭಿಕ ಯುವರಾಜ್ ಚೌಧರಿ ಮನಮೋಹಕ ಬ್ಯಾಟಿಂಗ್ ನಡೆಸಿ, ಕರ್ನಾಟಕದ ಬೌಲರ್ಗಳನ್ನು ಕಾಡಿದರು. ಇವರು 60 ಎಸೆತಗಳಲ್ಲಿ 9 ಬೌಂಡರಿ, 11 ಸಿಕ್ಸರ್ ಸಹಾಯದಿಂದ 123 ರನ್ ಬಾರಿಸಿ ಅಬ್ಬರಿಸಿದರು.