ವೈಭವ್ ಸೂರ್ಯವಂಶಿ ಅವಕಾಶ ಸಿಕ್ಕಾಗಲೆಲ್ಲಾ ಅಬ್ಬರಿಸಿ ಸುದ್ದಿಯಲ್ಲಿರುವ ಆಟಗಾರ. ಈ ಯುವ ಆಟಗಾರನ ಆಟ ಕಂಡು ಅದೆಷ್ಟೋ ಮಾಜಿ ಆಟಗಾರರು ಬೆನ್ನು ತಟ್ಟಿದ್ದಾರೆ. ಐಪಿಎಲ್ನಲ್ಲಿ ಇವರು ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ ವೇಗದ ಶತಕ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಅಂಡರ್ 19 ತಂಡದ ಭಾಗವಾಗಿದ್ದ ವೈಭವ್ ಸೂರ್ಯವಂಶಿ, ಸದ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸೆಲೆನ್ಸ್ (CoE) ನಲ್ಲಿ ವೈಯಕ್ತಿಕ ತರಬೇತಿ ಕಾರ್ಯಕ್ರಮದಲ್ಲಿದ್ದಾರೆ. ಇಂಗ್ಲೆಂಡ್ನಲ್ಲಿ ಯಶಸ್ವಿ ಪ್ರದರ್ಶನದ ನಂತರ ಮತ್ತು ರಾಯಲ್ಸ್ ಜೊತೆಗಿನ ವಿಶೇಷ ಅಭ್ಯಾಸದ ನಂತರ ಈ ವಿಶೇಷ ತರಬೇತಿಯನ್ನು ನೀಡಲಾಗಿದೆ.
ವೈಭವ್ ಸೂರ್ಯವಂಶಿ ಅವರು ಅಗಸ್ಟ್ 10 ರಂದು ಎನ್ಸಿಎ ತಲುಪಿದ್ದಾರೆ. ಈ ವೇಳೆ ಇವರು ತಮ್ಮ ಬ್ಯಾಟಿಂಗ್ ತಂತ್ರಗಾರಿಕೆ ಹಾಗೂ ಇತರ ವಿಷಯಗಳ ಬಗ್ಗೆ ಬೆವರು ಹರಿಸುತ್ತಿದ್ದಾರೆ. ಟೀಮ್ ಇಂಡಿಯಾದಲ್ಲಿ ಸದ್ಯ ಹಿರಿಯ ಆಟಗಾರರ ಸ್ಥಾನವನ್ನು ತುಂಬಲು ಯುವ ಪಡೆಯನ್ನು ಸಿದ್ಧ ಪಡಿಸಲಾಗುತ್ತಿದೆ. ಇದೇ ಯೋಜನೆಯ ಭಾಗವಾಗಿದ್ದಾರೆ ವೈಭವ್. ಈ ಬಗ್ಗೆ ಮೈಖೇಲ್ ಜೊತೆ ವೈಭವ್ ಸೂರ್ಯವಂಶಿ ಅವರ ಬಾಲ್ಯದ ಕೋಚ್ ಮನೀಶ್ ಓಝಾ ಮಾತನಾಡಿದ್ದಾರೆ.

"ಹಿರಿಯ ಆಟಗಾರರು ನಿವೃತ್ತರಾದ ಬಳಿಕ ಆ ಸ್ಥಾನವನ್ನು ತುಂಬಲು ಬಿಸಿಸಿಐ ಯುವ ಪಡೆಯನ್ನು ಸಿದ್ಧ ಪಡಿಸುತ್ತಿದೆ. ಈ ಅಭ್ಯಾಸದಲ್ಲಿ ವೈಭವ್ ಭಾಗವಹಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬೇಕಾದ ಸಿದ್ಧತೆಗಳು ಆಟಗಾರರು ಮಾಡಿಕೊಳ್ಳಲು ಈ ಕ್ಯಾಂಪ್ ಸಹಾಯಕವಾಗಲಿದೆ" ಎಂದು ಓಝಾ ತಿಳಿಸಿದ್ದಾರೆ.
ವೈಭವ್ ಸೂರ್ಯವಂಶಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವನ್ನು ಆಡುವ ಆಟಗರ. ಇದು ಟಿ20 ಕ್ರಿಕೆಟ್ನಲ್ಲಿ ಉತ್ತಮ. ಇವರ ಇದೇ ಧಾಟಿಯ ಬ್ಯಾಟಿಂಗ್ನ್ನು ನಾವೆಲ್ಲಾ ಐಪಿಎಲ್, ಅಂಡರ್ 19 ಕ್ರಿಕೆಟ್, ವಿಜಯ್ ಹಜಾರೆ ಟೂರ್ನಿಯಲ್ಲಿ ನೋಡಿದ್ದೇವೆ. ಲಾಂಗರ್ ಫಾರ್ಮೆಟ್ಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಈ ಕ್ಯಾಂಪ್ನ ಗುರಿಗಳಲ್ಲೊಂದು. ಸದ್ಯ ವೈಭವ್ ತಮ್ಮ ವೃತ್ತಿ ಬದುಕಿನ ನಿರ್ಣಾಯಕ ಘಟ್ಟದಲ್ಲಿದ್ದು, ಪ್ರದರ್ಶನದತ್ತ ಗಮನ ಹರಿಸಬೇಕಿದೆ ಎಂದು ಕೋಚ್ ಹೇಳಿದ್ದಾರೆ.

ವೈಭವ್ ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ಬಿಸಿಸಿಐನ ಈ ಕಾರ್ಯಕ್ರಮ ಅವರ ಕೌಶಲ್ಯಗಳನ್ನು ಹೆಚ್ಚಿಸಲಿದೆ. ಈ ವೇಳೆ ಅವರ ಬ್ಯಾಟಿಂಗ್ ಅಷ್ಟೇ ಅಲ್ಲ, ಫಿಟ್ನೆಸ್, ಫೀಲ್ಡಿಂಗ್ ಮತ್ತು ಇತರ ಅಂಶಗಳ ಮೇಲೆ ನಿರ್ದಿಷ್ಟ ಗಮನ ಹರಿಸಲಾಗುವುದು. ಇದು ವೈಭವ್ ಅವರ ಜೀವನದ ನಿರ್ಣಾಯಕ ಘಟ್ಟವಾಗಿದ್ದು, ಇದನ್ನು ಅವರು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ಮನೀಶ್ ಓಝಾ ತಿಳಿಸಿದ್ದಾರೆ.