ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮಾರ್ಚ್ 9 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚಾಂಪಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಒಂದೆಡೆ, ಭಾರತ ಟೂರ್ನಿಯಲ್ಲಿ ಒಂದು ಪಂದ್ಯವನ್ನೂ ಸೋಲದೆ ಫೈನಲ್ ತಲುಪಿದೆ. ಆದರೆ ನ್ಯೂಜಿಲೆಂಡ್ ಏಕೈಕ ಸೋಲನ್ನು ಅನುಭವಿಸಿತು, ಅದು ಗುಂಪು ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡಿತ್ತು.
ಈಗ ಬಿಗ್ ಮ್ಯಾಚ್ಗೂ ಮುನ್ನ ನ್ಯೂಜಿಲೆಂಡ್ ತಂಡದಲ್ಲಿ ಭಯದ ವಾತಾವರಣವಿದೆ. ಭಾರತ ತಂಡದ ಒಬ್ಬ ಸ್ಟಾರ್ ಆಟಗಾರ ಕಿವೀಸ್ ಪಡೆಗೆ ನಡುಕ ಹುಟ್ಟಿಸಿದ್ದಾರೆ. ನ್ಯೂಜಿಲೆಂಡ್ ಹೆಡ್ ಕೋಚ್ ಗ್ಯಾರಿ ಸ್ಟೀಡ್ ಕೂಡ ಈ ಆಟಗಾರನ ಬಗ್ಗೆ ಹೇಳಿಕೆ ನೀಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಕಠಿಣ ಸವಾಲಾಗಿರುವ ಟೀಮ್ ಇಂಡಿಯಾದ ಆಟಗಾರ ಬೇರೆ ಯಾರು ಅಲ್ಲ, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ. ಈ ಮಿಸ್ಟರಿ ಸ್ಪಿನ್ನರ್ನನ್ನು ಎದುರಿಸಲು ನಾವು ತಂತ್ರಗಳನ್ನು ರೂಪಿಸಿಕೊಳ್ಳಬೇಕಾಗಿದೆ ಗ್ಯಾರಿ ಸ್ಟೀಡ್ ತಿಳಿಸಿದ್ದಾರೆ.
ವರುಣ್ ಚಕ್ರವರ್ತಿ ನಮ್ಮ ವಿರುದ್ಧದ ಕೊನೆಯ ಪಂದ್ಯದಲ್ಲಿ 42 ರನ್ಗಳಿಗೆ 5 ವಿಕೆಟ್ಗಳನ್ನು ಕಬಳಿಸಿದ್ದರು. ಆದ್ದರಿಂದ ಅವರು ಫೈನಲ್ ಆಡುತ್ತಾರೆ ಎಂಬ ಸಂಪೂರ್ಣ ಭರವಸೆ ನಮಗಿದೆ. ಅವರು ತುಂಬಾ ಒಳ್ಳೆಯ ಬೌಲರ್. ಕೊನೆಯ ಪಂದ್ಯದಲ್ಲಿ ತಮ್ಮ ಕೌಶಲ್ಯವನ್ನು ಅದ್ಭುತವಾಗಿ ಪ್ರದರ್ಶಿಸಿದರು. ಫೈನಲ್ ಪಂದ್ಯದಲ್ಲಿ ಅವರು ನಮಗೆ ಅತಿ ದೊಡ್ಡ ಸವಾಲಾಗಿದ್ದಾರೆ. ಆದ್ದರಿಂದ ನಾವು ಅವರ ಪ್ರಯತ್ನಗಳನ್ನು ಹೇಗೆ ವಿಫಲಗೊಳಿಸಬಹುದು ಮತ್ತು ಅವರ ವಿರುದ್ಧ ಹೇಗೆ ರನ್ ಗಳಿಸಬಹುದು ಎಂಬುದರ ಬಗ್ಗೆ ನಮ್ಮ ಚಿಂತನೆ ನಡೆಸುತ್ತಿದ್ದೇವೆ ಎಂದು ಗ್ಯಾರಿ ಸ್ಟೀಡ್ ಹೇಳಿದ್ದಾರೆ.
ನಮ್ಮ ತಂಡವು ಭಾರತದ ವಿರುದ್ಧದ ಗುಂಪು ಹಂತದ ಪಂದ್ಯದಿಂದ ಏನನ್ನಾದರೂ ಕಲಿಯಲಿದೆ. ಇದರೊಂದಿಗೆ, ಇಲ್ಲಿನ ಪಿಚ್ ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ತಿಳಿದಿರುವುದರಿಂದ ಭಾರತಕ್ಕೆ ಲಾಭವಾಗುತ್ತದೆ. ಟೂರ್ನಿಯನ್ನು ಆಯೋಜಿಸುವುದು ನಮ್ಮ ಕೈಯಲ್ಲಿಲ್ಲ.' ಆದ್ದರಿಂದ, ನಾವು ಇದರ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿದೆ. ಆದರೆ ನಮಗೂ ಇಲ್ಲಿ ಪಂದ್ಯ ಆಡಲು ಅವಕಾಶ ಸಿಕ್ಕಿತು. ಆ ಅನುಭವದಿಂದ ನಾವು ಕಲಿಯಲು ಬಯಸುತ್ತೇವೆ. ಇದರೊಂದಿಗೆ ಭಾರತವನ್ನು ಫೈನಲ್ ಪಂದ್ಯದಲ್ಲಿ ಎದುರಿಸಲಿದೆ ಎಂದು ಗ್ಯಾರಿ ಸ್ಟೀಡ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.