ಬಹುನಿರೀಕ್ಷಿತ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ನವೆಂಬರ್ 23ರಿಂದ ಆರಂಭವಾಗದೆ. ಈ ದೇಶೀಯ ಟಿ20 ಟೂರ್ನಿ ಮಯಾಂಕ್ ಅಗರ್ವಾಲ್ ನೇತೃತ್ವದಲ್ಲಿ 15 ಆಟಗಾರರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ. ಅನುಭವಿ ಸ್ಟಾರ್ ಬ್ಯಾಟರ್ ಮಯಾಂಕ್ ಅಗರ್ವಾಲ್ ನಾಯಕನಾಗಿ ತಂಡವನ್ನು ಮುನ್ನಡೆಸಿದರೆ, ಉಪನಾಯಕರಾಗಿ ಮನೀಶ್ ಪಾಂಡೆ ಅವರು ಕಾಣಿಸಿಕೊಳ್ಳಲಿದ್ದಾರೆ. ಕರ್ನಾಟಕ ತನ್ನ ಮೊದಲ ಪಂದ್ಯವನ್ನು ನವೆಂಬರ್ 23 ರಂದು ಉತ್ತರಾಖಂಡ ವಿರುದ್ಧ ಆಡಲಿದೆ.
ನವೆಂಬರ್ 25 ರಂದು ತ್ರಿಪುರಾ ತಂಡವನ್ನು ಕರ್ನಾಟಕ ಎದುರಿಸಲಿದೆ. ಇದಾದ ಬಳಿಕ ನವೆಂಬರ್ 27 ರಂದು ಸೌರಾಷ್ಟ್ರ ತಂಡದ ವಿರುದ್ಧ ಮಯಾಂಕ್ ಪಡೆ ಕಣಕ್ಕೀಳಿಯಲಿದೆ. ನವೆಂಬರ್ 29 ರಂದು ಸಿಕ್ಕಿಂ ತಂಡದ ವಿರುದ್ಧ ಸೆಣಸಾಡಲಿದೆ. ಡಿಸೆಂಬರ್ 1ರಂದು ತಮಿಳುನಾಡು ವಿರುದ್ಧ ಕರ್ನಾಟಕ ಹೋರಾಡಲಿದೆ. ಡಿಸೆಂಬರ್ 3ರಂದು ಬರೋಡಾ ಹಾಗೂ ಡಿಸೆಂಬರ್ 5ರಂದು ಗುಜರಾತ್ ವಿರುದ್ಧ ಕರ್ನಾಟಕ ಗೆಲುವಿಗಾಗಿ ಕಾದಾಡಲಿದೆ.

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಡಿಸೆಂಬರ್ 9 ಹಾಗೂ 11 ರಂದು ನಡೆಯಲಿವೆ. ಡಿಸೆಂಬರ್ 13 ರಂದು ಸೆಮಿಫೈನಲ್ ಹಾಗೂ ಡಿಸೆಂಬರ್ 15 ರಂದು ಫೈನಲ್ ಪಂದ್ಯ ಜರುಗಲಿದೆ.
ಕರ್ನಾಟಕ ತಂಡ : ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ (ಉಪನಾಯಕ), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಸ್ಮರಣ್ ಆರ್, ಶ್ರೀಜಿತ್ ಕೆಎಲ್ (ವಿಕೆಟ್ ಕೀಪರ್), ವೈಶಾಕ್ ವಿ, ಮ್ಯಾಕ್ನೈಲ್ ಹೆಚ್ ನೊರೊನ್ಹಾ, ಕೌಶಿಕ್ ವಿ, ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ್, ಚೇತನ್ ಎಲ್ಆರ್ (ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ, ಮನ್ವಂತ್ ಕುಮಾರ್ ಎಲ್.