ಬೆಂಗಳೂರು: ಭರವಸೆಯ ಆಟಗಾರ ವೆಂಕಟೇಶ್ ಅಯ್ಯರ್ ಬಾರಿಸಿದ ಅರ್ಧಶತಕದ ಬಲದಿಂದ ಮಧ್ಯ ಪ್ರದೇಶ ತಂಡ ರಣಜಿ ಟ್ರೋಫಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ದಿನದ ಗೌರವ ತನ್ನದಾಗಿಸಿಕೊಂಡಿದೆ.
ನಗರದ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಟಾಸ್ ಗೆದ್ದ ಮಧ್ಯ ಪ್ರದೇಶ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಮಧ್ಯ ಪ್ರದೇಶ ತಂಡದ ಪರ ಆರಂಭಿಕರಾದ ಯಶ್ ದುಬೆ ಹಾಗೂ ಹಿಮಾಂಶು ಮಂತ್ರೆ ಜೋಡಿ ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಯಶ್ ದುಬೆ 29 ರನ್ ಬಾರಿಸಿದ್ದಾಗ ಶಿಖರ್ ಶೆಟ್ಟಿ ತೋಡಿದ ಖೆಡ್ಡಾಗೆ ಬಲಿಯಾದರು. ಇನ್ನು ಹಿಮಾಂಶು ಸಹ 39 ರನ್ ಬಾರಿಸಿದ್ದಾಗ ವಿಜಯ್ ಕುಮಾರ್ ವೈಶಾಖ್ ತೋಡಿದ ಖೆಡ್ಡಾಗೆ ಬಲಿಯಾದರು.

ಮೂರನೇ ವಿಕೆಟ್ಗೆ ಶುಭಂ ಶರ್ಮಾ ಹಾಗೂ ಭರವಸೆಯ ಆಟಗಾರ ವೆಂಕಟೇಶ್ ಅಯ್ಯರ್ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿ, ಕರ್ನಾಟಕದ ಬೌಲರ್ಗಳನ್ನು ಕಾಡಿತು. ಈ ಜೋಡಿ ಸುಮಾರು 28 ಓವರ್ಗಳ ವರೆಗೆ ವಿಕೆಟ್ ಬೀಳದಂತೆ ನೋಡಿಕೊಂಡಿತು. ಅಲ್ಲದೆ ಈ ಜೋಡಿ 75 ರನ್ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ಹಂತದಲ್ಲಿ ಶುಭಂ 33 ರನ್ ಸಿಡಿಸಿದ್ದಾಗ ಇಲ್ಲದ ರನ್ ಬಾರಿಸಲು ಹೋಗಿ ಔಟ್ ಆದರು.
ವೆಂಕಟೇಶ್ ಅಯ್ಯರ್ ಅರ್ಧಶತಕ
ನಾಲ್ಕನೇ ವಿಕೆಟ್ಗೆ ವೆಂಕಟೇಶ್ ಅಯ್ಯರ್ ಹಾಗೂ ನಾಯಕ ರಜತ್ ಪಟಿದಾರ್ ಜೋಡಿ ಸಹ ಅರ್ಧಶತಕದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಭರವಸೆಯ ಆಟಗಾರ ವೆಂಕಟೇಶ್ ಅಯ್ಯರ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 135 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ 87 ರನ್ ಬಾರಿಸಿ ವಿಜಯ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ರಜತ್ 45 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಔಟ್ ಆದರು.
ಮಧ್ಯ ಪ್ರದೇಶ ತಂಡದ ಪರ ಸರಾಂಶ್ ಜೈನ್ ಹಾಗೂ ಆರ್ಯನ್ ಪಾಂಡೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಧ್ಯಪ್ರದೇಶ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 244 ರನ್ ಸೇರಿಸಿದೆ. ಕರ್ನಾಟಕದ ಬೌಲರ್ಗಳು ಶುಕ್ರವಾರ ಆರಂಭದಲ್ಲಿ ಬಿಗುವಿನ ದಾಳಿ ನಡೆಸಿ ಮಧ್ಯ ಪ್ರದೇಶ ತಂಡವನ್ನು ಕಟ್ಟಿಹಾಕುವ ಇರಾದೆ ಹೊಂದಿದ್ದಾರೆ. ಮೊದಲದಿನದಾಟದಲ್ಲಿ ಕರ್ನಾಟಕದ ಪರ ವಿಜಯ್ ಕುಮಾರ್ ವೈಶಾಖ್ ಹಾಗೂ ಶ್ರೇಯಸ್ ಅಯ್ಯರ್ ತಲಾ 2 ವಿಕೆಟ್ ಕಬಳಿಸಿದರು.