ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಚುನಾವಣೆಗಳು ಮುಗಿದಿವೆ. ಈ ಬಾರಿಯ ಚುನಾವಣೆಯಲ್ಲಿ ಗೇಮ್ ಚೆಂಜರ್ ಎಂದು ಕಣಕ್ಕೆ ಇಳಿದಿದ್ದ ವೆಂಕಟೇಶ್ ಪ್ರಸಾದ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಈ ಮೂಲಕ ಕೆಎಸ್ಸಿಎ ಗದ್ದುಗೆಯನ್ನು ಏರಿದ್ದಾರೆ. ಇವರು ಕೆಎನ್ ಶಾಂತ್ ಕುಮಾರ್ ಅವರನ್ನು 191 ಮತಗಳ ಅಂತರದಿಂದ ಮಣಿಸಿ, ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
ವೆಂಕಟೇಶ್ ಪ್ರಸಾದ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ವೇಗದ ಬೌಲಿಂಗ್ನಿಂದಲೇ ಹೆಸರುವಾಸಿಯಾದ ಆಟಗಾರ. ಇವರು ಭಾರತಕ್ಕಾಗಿ 33 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2010, 2013ರಲ್ಲಿ ಕೆಎಸ್ಸಿಎ ಉಪಾಧ್ಯಕ್ಷರಾಗಿದ್ದ ವೆಂಕಟೇಶ್ ಪ್ರಸಾದ್ ಅವರು ಇನ್ನು, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು 1307 ಮತಗಳು ಚಲಾವಣೆ ಆದವು. ಇದು ಕಳೆದ ಬಾರಿಗೆ ಹೋಲಿಸಿದರೆ (ಕಳೆದ ಬಾರಿ 1351) ಕೊಂಚ ಕಡಿಮೆ. ಪ್ರಸಾದ್ ಅವರ ಸಮಿತಿಯನ್ನು ಭಾರತದ ಮಾಜಿ ಸ್ಪಿನ್ನರ್ಗಳಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಬೆಂಬಲಿಸಿದ್ದರು. ಇವರು 749 ಮತಗಳನ್ನು ಪಡೆದು ಅಧ್ಯಕ್ಷರಾಗಿದ್ದಾರೆ. ಇವರ ಎದುರಾಳಿ ಕೆಎನ್ ಶಾಂತ್ ಕುಮಾರ್ 588 ಮತಗಳನ್ನು ಗಳಿಸಿದ್ದಾರೆ. 12 ವರ್ಷದ ಬಳಿಕ ಮಾಜಿ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಕೆಎಸ್ಸಿಗೆ ಮತ್ತೆ ಎಂಟ್ರಿ ನೀಡಿದ್ದಾರೆ.
ವೆಂಕಟೇಶ್ ಪ್ರಸಾದ್ ಬಣದಿಂದ ಉಪಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಜಿ ಟೀಮ್ ಇಂಡಿಯಾ ಆಟಗಾರ ಸುಜಿತ್ ಸೋಮಸುಂದರ್ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಇವರು 719 ಮತಗಳನ್ನು ಪಡೆದಿದ್ದಾರೆ. ಸುಜಿತ್, ವಿನೋದ್ ಶಿವಪ್ಪಾ ಅವರನ್ನು ಮಣಿಸಿದರು. ವಿನೋದ್ ಶಿವಪ್ಪ 588 ಮತಗಳನ್ನು ಪಡೆದರು. ಈ ಹಿಂದೆಯೂ ಕಾರ್ಯದರ್ಶಿಯಾಗಿದ್ದ ಸಂತೋಷ್ ಮೆನನ್ ಅವರು 719 ಮತಗಳನ್ನು ಪಡೆದು ಬೀಗಿದ್ದಾರೆ. ಇವರು ಇಎಸ್ ಜಯರಾಮ್ (632 ಮತ) ಅವರನ್ನು ಸೋಲಿಸಿದರು.
ಈಗಾಗಲೇ ಕೆಎಸ್ಸಿಎ ಖಜಾಂಚಿಯಾಗಿದ್ದ ಎಂ.ಎಸ್ ವಿನಯ್ ಅವರಿಗೆ ನಿರಾಸೆ ಆಗಿದೆ. ಇವರು 571 ಮತಗಳನ್ನು ಪಡೆದರೆ, ಬಿಎನ್ ಮಧುಕರ್ 736 ಮತಗಳನ್ನು ಪಡೆದು ಖಜಾಂಚಿಯಾದರು. ವ್ಯವಸ್ಥಾಪಕ ಸಮಿತಿಯ ಎರಡು ಆಜೀವ ಸದಸ್ಯರ ಸ್ಥಾನಕ್ಕೆ, ವಿ.ಎಂ. ಮಂಜುನಾಥ್ (690 ಮತ) ಮತ್ತು ಶೈಲೇಶ್ ಎನ್. ಪೋಲ್ (618 ಮತ) ಆಯ್ಕೆಯಾದರು. ಬೆಂಗಳೂರು ವಲಯದಿಂದ ಮೂರು ಸ್ಥಾನಗಳಿಗೆ, ಮಾಜಿ ಕ್ರಿಕೆಟ ಆಟಗಾರ್ತಿ ಕಲ್ಪನಾ ವೆಂಕಟಾಚಾರ್ (764 ಮತಗಳು), ಅವಿನಾಶ್ ವೈದ್ಯ (691 ಮತಗಳು) ಮತ್ತು ಆಶಿಶ್ ಅಮರಲಾಲ್ (703 ಮತಗಳು) ಆಯ್ಕೆಯಾದರು.
ನವೆಂಬರ್ 24 ರಂದು ಶಾಂತ ಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ವೆಂಕಟೇಶ್ ಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಕೊನೆ ಕ್ಷಣದಲ್ಲಿ ಶಾಂತ ಕುಮಾರ್ ಕೋರ್ಟ್ ಮೊರೆ ಹೋದರು. ಕೋರ್ಟ್ ನಾಮಪತ್ರ ಸಿಂಧುಗೊಳಿಸಿ ಚುನಾವಣೆ ನಡೆಸುವಂತೆ ಆದೇಶಿಸಿತು.