ಐಕಾನಿಕ್ ಚಿನ್ನಸ್ವಾಮಿ ಸ್ಟೇಡಿಯಂನ ಗತ ವೈಭವವನ್ನು ಮತ್ತೆ ಮರಳಿ ತರಲಾಗುವುದು ಎಂದು ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಚುನಾವಣೆ ಇದೇ ಅಕ್ಟೋಬರ್ ಅಥವಾನ ನವೆಂಬರ್ನಲ್ಲಿ ನಡೆಯುವ ಸಾಧ್ಯತೆ ಇದ್ದು, ವೆಂಕಟೇಶ್ ಈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆರ್ಸಿಬಿ ತಂಡದ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನ ಸಾವನ್ನಪ್ಪಿದ್ದರು.
ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿಂದ ರಾಜ್ಯ ಸರ್ಕಾರ ರಚಿಸಿದ್ದ ತನಿಖಾ ಸಮಿತಿ, ಚಿನ್ನಸ್ವಾಮಿ ಮೈದಾನ ದೊಡ್ಡ ಟೂರ್ನಿಗಳಿಗೆ ಆತಿಥ್ಯ ನೀಡಲು ಸುರಕ್ಷಿತವಲ್ಲ ಎಂದು ತಿಳಿಸಿದೆ. ಇದರ ಬೆನ್ನಲ್ಲೆ ವೆಂಕಟೇಶ್ ಪ್ರಸಾದ್ ತಾವು ಅಧಿಕಾರಕ್ಕೆ ಬಂದಲ್ಲಿ ಚಿನ್ನಸ್ವಾಮಿ ಮೈದಾನದ ಗತವೈಭವ ಮರಳಿ ತರಲು ಶ್ರಮಿಸುವುದಾಗಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಚುನಾವಣೆ ಜ್ವರ ಈಗ ಆರಂಭವಾಗಿದೆ. ಚುನಾವಣಾ ಕಣದಲ್ಲಿ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಸೇರಿದಂತೆ ವೆಂಕಟೇಶ್ ಪ್ರಸಾದ್, ವಿನಯ್ ಮೃತ್ಯುಂಜಯ್ ಇದ್ದಾರೆ. ಈ ವೇಳೆ ಇವರು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಸರ್ಕಾರದ ತನಿಖಾ ಸಮಿತಿ ಚಿನ್ನಸ್ವಾಮಿ ಕ್ರೀಡಾಂಗಣ ದೊಡ್ಡ ಟೂರ್ನಿಗಳಿಗೆ ಸೂಕ್ತ ಅಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ, ಇಲ್ಲಿ ನಡೆಯಬೇಕಿದ್ದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಹಾಗೂ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ಬೇರೆ ಕಡೆಗೆ ಶಿಫ್ಟ್ ಆಗಿವೆ. ಕಾಲ್ತುಳಿತ ಪ್ರಕರಣದ ಬಳಿಕ ಕೆಎಸ್ಸಿಎ ಕಾರ್ಯದರ್ಶಿ ಎ ಶಂಕರ್, ಖಜಾಂಚಿ ಜೈರಾಮ್ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಿದ್ದರು.
ಕಾಲ್ತುಳಿತ ಪ್ರಕರಣ ಆಗಬಾರದಿತ್ತು ಅದು ಆಗಿ ಬಿಟ್ಟಿದೆ. ಸರ್ಕಾರದ ಜೊತೆ ನಾವು ಚರ್ಚೆ ನಡೆಸಲಿದ್ದೇವೆ. ಅಲ್ಲದೆ ಈ ಮೈದಾನದಲ್ಲಿ ಪಂದ್ಯಗಳು ನಡೆಯಲು ಬೇಕಾದ ಕಾರ್ಯಗಳನ್ನು ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಟೀಮ್ ಇಂಡಿಯಾ ಮಾಜಿ ವೇಗಿ ತಿಳಿಸಿದ್ದಾರೆ.
ಇನ್ನು ಚುನಾವಣೆಯಲ್ಲಿ ತಾವು ಗೆದ್ದಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಪ್ರೇಕ್ಷಕರ ಗ್ಯಾಲರಿಯನ್ನು ದೊಡ್ಡದಾಗಿ ಮಾಡಲು ನಾವು ಶ್ರಮಿಸಲಿದ್ದೇವೆ. ಇನ್ನು ನಾವು ಇದನ್ನು 80 ಸಾವಿರ ಆಸನಗಳಿಗೆ ಏರಿಸಲಿದ್ದೇವೆ ಎಂದು ನಾವು ಏನು ಹೇಳುವುದಿಲ್ಲ. ಆದರೆ 15 ಸಾವಿರ ಆಸನಗಳ ಸಂಖ್ಯೆಯನ್ನು ಏರಿಸಲು ಬೇಕಾದ ಯೋಜನೆಗಳನ್ನು ನಾವು ಹಮ್ಮಿಕೊಳ್ಳಲಿದ್ದೇವೆ. ಚಿನ್ನಸ್ವಾಮಿ ಮೈದಾನದಲ್ಲಿ ಕಳೆದ 50 ವರ್ಷಗಳಲ್ಲಿ ಹಲವು ಐತಿಹಾಸಿಕ ಪಂದ್ಯಗಳು ನಡೆದಿವೆ. ಆದರೆ ಈ ಮೈದಾನದಿಂದ ಅಂತಾರಾಷ್ಟ್ರೀಯ ಪಂದ್ಯಗಳು ಬೇರೆ ಕಡೆ ಶಿಫ್ಟ್ ಆಗಿದ್ದು ಬೇಸರದ ಸಂಗತಿ ಎಂದು ವೆಂಕಿ ತಿಳಿಸಿದ್ದಾರೆ.
ವಿನಯ್ ಮೃತ್ಯುಂಜಯ ಹಾಗೂ ಸಂತೋಶ್ ಅವರು ನನ್ನ ಭೇಟಿ ಮಾಡಿ ಚುನಾವಣೆ ನಿಲ್ಲುವ ಬಗ್ಗೆ ಮಾತನಾಡಿದರು ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಈ ಹಿಂದೆಯೂ ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ಅಧಿಕಾರ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.