ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಆಡಿರುವ ರಾಹುಲ್ ತೆವಾಟಿಯಾ ತಂಡ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಯಾವುದೇ ಹಂತದಿಂದಲೂ ಪಂದ್ಯದ ಗತಿ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ತೆವಾಟಿಯಾ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ವಿಶ್ವಾಸವನ್ನು ಹೊಂದಿದ್ದರು. ಆದರೆ ಐರ್ಲೆಂಡ್ ವಿರುದ್ಧದ ಸರಣಿಗೂ ಆಯ್ಕೆಯಾಗದ ಕಾರಣ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಸರವನ್ನು ಹೊರ ಹಾಕಿದ್ದರು. ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರೇಮ್ ಸ್ಮಿತ್ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ ಎಂದಿದ್ದಾರೆ.
ಸ್ಟಾರ್ ಸ್ಪೋಟ್ಸ್ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಗ್ರೇಮ್ ಸ್ಮಿತ್ ರಾಹುಲ್ ತೆವಾಟಿಯಾಗೆ ಈ ಸಲಹೆಯನ್ನು ನೀಡಿದ್ದಾರೆ. ಭಾರತದಲ್ಲಿ ಬಹಳಷ್ಟು ಪ್ರತಿಭಾವಂತ ಆಟಗಾರರು ಇರುವುದರಿಂದಾಗಿ ತಂಡದಲ್ಲಿ ಸ್ಥಾನ ಪಡೆಯುವುದು ಬಹಳ ಕಷ್ಟ. ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಬೇಕಿದೆ. ನಾನು ಟ್ವಿಟ್ಟರ್ ಬದಲಿಗೆ ಆಟದ ಮೇಲೆ ಹೆಚ್ಚಿನ ಗಮನ ನೀಡಿ ಮುಂದಿನ ಬಾರಿ ನಿಮ್ಮ ಸಮಯ ಬಂದಾಗ ಯಾರೂ ನಿಮ್ಮನ್ನು ತಂಡದಿಂದ ಕೈಬಿಡುವುದಕ್ಕೆ ಸಾಧ್ಯವಾಗುವುದಿಲ್ಲ" ಎಂದಿದ್ದಾರೆ ಗ್ರೇಮ್ ಸ್ಮಿತ್.
ಮುಂಬರುವ ಟಿ20 ವಿಶ್ವಕಪ್ನಲ್ಲಿ ರಿಷಭ್ ಪಂತ್ಗೆ ಅವಕಾಶ ಸಿಗುತ್ತಾ? ರಾಹುಲ್ ದ್ರಾವಿಡ್ ಉತ್ತರ
ಐರ್ಲೆಂಡ್ ವಿರುದ್ಧದ ಸರಣಿಗೆ ತಂಡವನ್ನು ಘೋಷಣೆ ಮಾಡಿದಾಗ ಆ ಪಟ್ಟಿಯಲ್ಲಿ ತೆವಾಟಿಯಾ ಹೆಸರು ಇರಲಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿಯೂ ತೆವಾಟಿಯಾ ಆಯ್ಕೆಯಾಗದ ಕಾರಣ ಅಭಿಮಾನಿಗಳಿಗೆ ಇದು ಅನಿರೀಕ್ಷಿತವಾಗಿರಲಿಲ್ಲ. ಆದರೆ ತೆವಾಟಿಯಾ ಈ ಐರ್ಲೆಂಡ್ ವಿರುದ್ಧದ ಸರಣಿಯ ಮೇಲೆ ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡಿದ್ದರು. ಈ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಟ್ವಿಟರ್ ಬದಲಿಗೆ ತಮ್ಮ ಆಟದ ಮೇಲೆ ಹೆಚ್ಚು ಗಮನ ಹರಿಸುವಂತೆ ರಾಹುಲ್ ತೆವಾಟಿಯಾಗೆ ಸಲಹೆ ನೀಡಿದ್ದಾರೆ.
ಕಳೆದ ವರ್ಷ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ T20 ಸರಣಿಗೆ ರಾಹುಲ್ ತೆವಾಟಿಯಾ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣದಿಂದಾಗಿ ಆಡುವ ಬಳಗದಲ್ಲಿ ಅವರು ಸ್ಥಾನ ಪಡೆದಿರಲಿಲ್ಲ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ಗುಜರಾತ್ ಟೈಟಾನ್ಸ್ಗೆ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದರು. ಅದಕ್ಕೆ ಪೂರಕವಾಗಿ ತೆವಾಟಿಯಾ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು 16 ಪಂದ್ಯಗಳಲ್ಲಿ 147.61 ಸ್ಟ್ರೈಕ್ ರೇಟ್ನಲ್ಲಿ 217 ರನ್ಗಳನ್ನು ಗಳಿಸಿ ತಂಡದ ಯಶಸ್ಸಿಗೆ ಕಾರಣವಾಗಿದ್ದರು.
ಇನ್ನು ರಾಹುಲ್ ತೆವಾಟಿಯಾ ಅವರನ್ನು ಐರ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಬೇಕಾಗಿತ್ತು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಅಭಿಪ್ರಾಯಪಟ್ಟಿದ್ದಾರೆ. "ರಾಹುಲ್ ತೆವಾಟಿಯಾ ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗ ಬೇಕಾಗಿತ್ತು. ಅವರು ಭಾರತ ತಂಡದಲ್ಲಿ ಇರಬೇಕಿತ್ತು. ಐಪಿಎಲ್ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಟೂರ್ನಿಯುದ್ದಕ್ಕೂ ಅವರಿಂದ ಅಮೋಘ ಬ್ಯಾಟಿಂಗ್ ಪ್ರದರ್ಶನವಾಗಿದೆ. ಅವರ ಶ್ರಮವನ್ನಾದರೂ ಗುರುತಿಸಿ ಕನಿಷ್ಠ 16ನೇ ಆಟಗಾರನಾಗಿಯಾದರೂ ಆಯ್ಕೆ ಮಾಡಬಹುದಾಗಿತ್ತು" ಎಂದಿದ್ದಾರೆ ಸುನಿಲ್ ಗವಾಸ್ಕರ್.