ರಣಜಿ ಫೈನಲ್ ಪಂದ್ಯ ರೋಚಕತೆ ಹೆಚ್ಚಿಸಿದೆ. ಈ ಪಂದ್ಯದ ಮೂರನೇ ದಿನದಾಟದ ಗೌರವವನ್ನು ವಿದರ್ಭ ತನ್ನದಾಗಿಸಿಕೊಂಡಿದೆ. ಕೇರಳ ಪರ ಆದಿತ್ಯ ಸರ್ವಟೆ ಹಾಗೂ ಸಚಿನ್ ಬೇಬಿ ಅವರ ಜವಾಬ್ದಾರಿಯುತ ಆಟವೂ ತಂಡಕ್ಕೆ ಇನಿಂಗ್ಸ್ ಮುನ್ನಡೆ ಸಾಧಿಸಲು ಸಾಕಾಗಲಿಲ್ಲ. ಪರಿಣಾಮ ಕೇರಳ 342 ರನ್ಗಳಿಗೆ ಆಲೌಟ್ ಆಗಿದೆ.
ಮೂರನೇ ದಿನದಾಟವನ್ನು ಕೇರಳ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ಗೆ 131 ರನ್ಗಳಿಂದ ಮುಂದುವರಿಸಿ ದಿನದಾಟದಂತ್ಯಕ್ಕೆ 324 ರನ್ ಕಲೆ ಆಲೌಟ್ ಆಗಿದೆ. ಇನ್ನು ವಿದರ್ಭ ಈ ಪಂದ್ಯದಲ್ಲಿ 37 ರನ್ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಇನ್ನು ವಿದರ್ಭ ಮೊದಲ ಇನಿಂಗ್ಸ್ನಲ್ಲಿ 379 ರನ್ಗಳಿಗೆ ಆಲೌಟ್ ಆಗಿತ್ತು.

ಶುಕ್ರವಾರ ಬ್ಯಾಟಿಂಗ್ ಆರಂಭಿಸಿದ ಕೇರಳ ತಂಡದ ಆದಿತ್ಯ ಸರ್ವಟೆ ಹಾಗೂ ನಾಯಕ ಸಚಿನ್ ಬೇಬಿ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಸುಮಾರು 24 ಓವರ್ಗಳ ವರೆಗೆ ವಿಕೆಟ್ ಬೀಳದಂತೆ ನೋಡಿಕೊಂಡು ಬ್ಯಾಟಿಂಗ್ ನಡೆಸಿತು. ಅಮೋಘ ಬ್ಯಾಟಿಂಗ್ ನಡೆಸಿದ ಆದಿತ್ಯ ಸರ್ವಟೆ 185 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 79 ರನ್ ಸಿಡಿಸಿ ಔಟ್ ಆದರು. ಇನ್ನು ಐದನೇ ವಿಕೆಟ್ಗೆ ಸಚಿನ್ ಬೇಬಿ ಹಾಗೂ ಸಲ್ಮಾನ್ ನಿಜಾರ್ (21) ಜೋಡಿ ಅಹ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಈ ಜೋಡಿ 49 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು.
ಆರನೇ ವಿಕೆಟ್ಗೆ ಮೊಹಮ್ಮದ್ ಅಜರುದ್ಧಿನ್ ಹಾಗೂ ಸಚಿನ್ ಬೇಬಿ ವಿದರ್ಭ ಬೌಲರ್ಗಳನ್ನು ಕಾಡಿದರು. ಈ ಜೋಡಿ ಕೇರಳ ಮ್ಯಾನೆಜ್ಮೆಂಟ್ ಮುಖದಲ್ಲಿ ಮಂದಹಾಸ ಮೂಡಿಸುವ ಕಾರ್ಯ ನಡೆಸಿತು. ಈ ಜೊಡಿ 144 ಎಸೆತಗಳಲ್ಲಿ 59 ರನ್ ಸೇರಿಸಿತು. ಮೊಹಮ್ಮದ್ ಅಜರುದ್ಧಿನ್ 3 ಬೌಂಡರಿ ನೆರವಿನಿಂದ 34 ರನ್ ಸಿಡಿಸಿ ಔಟ್ ಆದರು.

ತಮ್ಮ ಅನುಭವದ ಸಂಪೂರ್ಣ ಲಾಭ ಮಾಡಿದ ಸಚಿನ್ ಬೇಬಿ ತಂಡಕ್ಕೆ ಆಧಾರವಾಗಿದೆ. ಇವರು 235 ಎಸೆತಗಳಲ್ಲಿ 10 ಬೌಂಡರಿ ನೆರನಿಂದ 98 ರನ್ ಬಾರಿಸಿ ಶತಕ ವಂಚಿತರಾದರು. ಕೆಳ ಕ್ರಮಾಂಕದಲ್ಲಿ ಜಲಜ್ ಸಕ್ಸೇನಾ 28 ರನ್ ಸಿಡಿಸಿ ಔಟ್ ಆದರು.
ವಿದರ್ಭ ಪರ ಬೌಲರ್ಗಳು ಸ್ಥಿರ ಪ್ರದರ್ಶನ ನೀಡಿದ್ದಾರೆ. ದರ್ಶನ್ ನಾಳಕಂದೆ, ಹರ್ಷಾ ದುಬೆ, ಪಾರ್ಥ್ ರೇಖಾಡೆ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದ್ದಾರೆ.