ನಾಗ್ಪುರದಲ್ಲಿ ಕೇರಳ ಮತ್ತು ವಿದರ್ಭ ತಂಡಗಳ ನಡುವೆ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯಿತು. ಈ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಕೇರಳ ತಂಡವನ್ನು ವಿದರ್ಭ ಸೋಲಿಸಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ವಿದರ್ಭ ತಂಡ ಮೂರನೇ ಬಾರಿಗೆ ರಣಜಿ ಟ್ರೋಫಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಏಕೆಂದರೆ ಐದನೇ ಮತ್ತು ಕೊನೆಯ ದಿನವಾದ ಭಾನುವಾರ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
ವಿದರ್ಭ ತಂಡವು ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 9 ವಿಕೆಟ್ಗಳಿಗೆ 375 ರನ್ ಗಳಿಸಿತು. ಇದಾದ ನಂತರ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತು. ಕೇರಳ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 342 ರನ್ಗಳಿಗೆ ವಿದರ್ಭ ಆಲೌಟ್ ಮಾಡಿತ್ತು. ಇದಕ್ಕೆ ಉತ್ತರವಾಗಿ ವಿದರ್ಭ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 379 ರನ್ ಗಳಿಸಿ 37 ರನ್ಗಳ ಮುನ್ನಡೆ ಸಾಧಿಸಿತ್ತು.

ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಡ್ಯಾನಿಶ್ ಮಾಲೆವಾರ್ (153) ಅವರ ಅದ್ಭುತ ಶತಕಗಳು ಮತ್ತು ಕರುಣ್ ನಾಯರ್ (86) ಅವರ ಅಮೋಘ ಇನ್ನಿಂಗ್ಸ್ನ ನೆರವಿನಿಂದ ವಿದರ್ಭ ತಂಡ 379 ರನ್ಗಳ ಸವಾಲಿನ ಮೊತ್ತವನ್ನು ಗಳಿಸಿತು. ಕೇರಳದ ಬೌಲರ್ಗಳು ಹೆಚ್ಚು ಪರಿಣಾಮಕಾರಿ ಕಾಣಿಸಿಕೊಳ್ಳಲಿಲ್ಲ. ಆದರೆ ಬ್ಯಾಟಿಂಗ್ ಅದ್ಭುತ ಇನ್ನಿಂಗ್ಸ್ ಆಡಿದ ಕೇರಳ ಬ್ಯಾಟರ್ಗಳು 342 ರನ್ಗಳನ್ನು ಕಲೆ ಹಾಕುವಲ್ಲಿ ಶಕ್ತರಾದರು. ಇದರೊಂದಿಗೆ ಮೊದಲ ಇನ್ನಿಂಗ್ಸ್ನಲ್ಲಿ ವಿದರ್ಭ 37 ರನ್ಗಳ ಮುನ್ನಡೆ ಪಡೆಯಿತು. ಇದು ಅಂತಿಮವಾಗಿ ನಿರ್ಣಾಯಕವೆಂದು ಸಾಬೀತಾಯಿತು . ಮೊದಲ ಇನ್ನಿಂಗ್ಸ್ನಲ್ಲಿ ಕೇರಳ ತಂಡ ನಾಯಕ ಸಚಿನ್ ಬೇಬಿ (98) ಅದ್ಭುತ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು.
ಎರಡನೇ ಇನ್ನಿಂಗ್ಸ್ನಲ್ಲಿಯೂ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಮಾಲೆವಾರ್ (73) ಮತ್ತು ಕರುಣ್ ನಾಯರ್ (135) ಜೋಡಿ ಮತ್ತೊಂದು ಅಮೋಘ ಜೊತೆಯಾಟವಾಡಿದರು. ಈ ಮೂಲಕ ವಿದರ್ಭ ತಂಡ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಯಿತು. ಕರುಣ್ ನಾಯರ್ ಕೂಡ ಈ ದೇಶೀಯ ಋತುವಿನ 9ನೇ ಶತಕವನ್ನು ಗಳಿಸಿ ಮಿಂಚಿದರು. ನಾಯರ್ ಔಟಾದ ನಂತರ, ವಿದರ್ಭ ತಂಡವು ಬೇಗನೆ ಕೆಲವು ವಿಕೆಟ್ಗಳನ್ನು ಕಳೆದುಕೊಂಡಿತು. ಆದರೆ ಕೆಳ ಕ್ರಮಾಂಕದ ಬ್ಯಾಟರ್ಗಳು ಕ್ರೀಸ್ನಲ್ಲಿ ದೃಢವಾಗಿ ನಿಂತು ರನ್ ಗಳಿಸಿದರು. ಪರಿಣಾಮ ವಿದರ್ಭ ತಂಡ 400 ರನ್ಗಳನ್ನು ದಾಟಿ ಮುನ್ನಡೆ ಸಾಧಿಸಿತು.
ಕೇರಳ ತಂಡಕ್ಕೆ ಗುರಿಯನ್ನು ಬೆನ್ನಟ್ಟುವ ಬಗ್ಗೆ ಯೋಚಿಸಲು ಸಹ ಅವಕಾಶವಿರಲಿಲ್ಲ. ಏಕೆಂದರೆ ಕೇವಲ ಒಂದು ಸೆಷನ್ ಮಾತ್ರ ಉಳಿದಿತ್ತು. ಇಲ್ಲೇ ವಿದರ್ಭ ಚಾಂಪಿಯನ್ ಎಂಬುದು ಗೊತ್ತಾಯಿತು. ಒಟ್ಟಾರೆಯಾಗಿ, ವಿದರ್ಭ ತಂಡವು ಫೈನಲ್ನಲ್ಲಿ ಮಾತ್ರವಲ್ಲದೆ ಋತುವಿನ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿತು. ವಿದರ್ಭ ತಂಡಕ್ಕೆ ಇದು ಮೂರನೇ ರಣಜಿ ಟ್ರೋಫಿ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು ವಿದರ್ಭ 2017-18 ಮತ್ತು 2018-19ರಲ್ಲಿ ಪ್ರಶಸ್ತಿ ಗೆದ್ದಿತ್ತು. ಈಗ ವಿದರ್ಭ 2024-25ರ ಪ್ರಶಸ್ತಿಯನ್ನು ಗೆದ್ದಿದೆ.