
ಗಾಂಧಿನಗರ್, ಅಕ್ಟೋಬರ್ 3: ಯುವ ಆಟಗಾರರಾದ ಹನುಮ ವಿಹಾರಿ, ಪೃಥ್ವಿ ಶಾ ಅಥವಾ ಮಯಾಂಕ್ ಅಗರ್ವಾಲ್ ವಿಂಡೀಸ್ ಟೆಸ್ಟ್ ನಲ್ಲಿ ಉತ್ತಮವಾಗಿ ಆಡಬೇಕು. ಆ ಮೂಲಕ ಮೂವರೂ ತಂಡದಲ್ಲಿ ಹೆಚ್ಚು ಕಾಲ ನಿಲ್ಲುವಂತಾಗಬೇಕು ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. (ಚಿತ್ರ ಕೃಪೆ: ಎಎನ್ಐ)
ಗುಜರಾತ್ ನ ರಾಜ್ ಕೋಟ್ ನಲ್ಲಿ ಅಕ್ಟೋಬರ್ 4ರ ಗುರುವಾರದಿಂದ ಆರಂಭಗೊಳ್ಳಲಿರುವ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಬುಧವಾರ (ಅಕ್ಟೋಬರ್ 3) ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿಹಾರಿ, ಪೃಥ್ವಿ, ಮಯಾಂಕ್ ಅವರನ್ನು ಹೆಸರಿಸಿದರು.
ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗಾಗಿ ಭಾರತ ತಂಡದಲ್ಲಿ ಗದೆ ಹನುಮ ವಿಹಾರಿ, ಪೃಥ್ವಿ ಶಾ ಮತ್ತು ಮಯಾಂಕ್ ಅಗರ್ವಾಲ್ ಗೆ ಅವಕಾಶ ನೀಡಲಾಗಿದೆ. ಅದರಲ್ಲೂ ಪೃಥ್ವಿ ಮತ್ತು ಮಯಾಂಕ್ ಈ ಸರಣಿ ಮೂಲಕವೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವುದರಲ್ಲಿದ್ದಾರೆ.
'ದೇಸಿ ಕ್ರಿಕೆಟ್ ನಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದಕ್ಕಾಗಿ ಈ ಮೂರೂ ಆಟಗಾರರೂ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದು ತಮಗೆ ಸಿಕ್ಕ ಅಪೂರ್ವ ಅವಕಾಶವೆಂದು ಮೂವರೂ ಭಾವಿಸಬೇಕೇ ಹೊರತು ಇದನ್ನು ಒತ್ತಡವಾಗಿ ಸ್ವೀಕರಿಸಬಾರದು. ಜೊತೆಗೆ ಉತ್ತಮ ಆಟ ಪ್ರದರ್ಶಿಸುವ ಮೂಲಕ ಪ್ರತಿಭಾನ್ವಿತರು ಹೆಚ್ಚು ಕಾಲ ತಂಡದಲ್ಲಿ ನಿಲ್ಲುವಂತಾಗಬೇಕು' ಎಂದು ಕೊಹ್ಲಿ ಹೇಳಿದರು.