
ನವದೆಹಲಿ, ಸೆಪ್ಟೆಂಬರ್ 17: ದೇಶಿ ಕ್ರಿಕೆಟ್ ನ ಪ್ರತಿಷ್ಠಿತ ಏಕದಿನ ಕ್ರಿಕೆಟ್ ಟೂರ್ನಮೆಂಟ್ ವಿಜಯ್ ಹಜಾರೆ ಟ್ರೋಫಿಗಾಗಿ 15 ಮಂದಿ ಸದಸ್ಯರ ದೆಹಲಿ ತಂಡವನ್ನು ದೆಲ್ಲಿ ಅಂಡ್ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಪ್ರಕಟಿಸಿದೆ. ದೆಹಲಿ ತಂಡಕ್ಕೆ ಗೌತಮ್ ಗಂಭೀರ್ ನಾಯಕರಾಗಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತರ ಭಾರತಕ್ಕೆ ಮರಳಿರುವ ರಿಷಬ್ ಪಂತ್ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ.
ಕಳೆದ ಬಾರಿ ವಿಜಯ್ ಹಜಾರೆ ಟ್ರೋಫಿಯಲ್ಲಿ 6 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು ಕ್ವಾರ್ಟರ್ ಫೈನಲ್ ಹಂತ ತಲುಪಿದ್ದ ದೆಹಲಿ, ಆಂಧ್ರಪ್ರದೇಶ ವಿರುದ್ಧ 6 ವಿಕೆಟ್ ಗಳ ಸೋಲು ಕಂಡಿತ್ತು.
ಈ ಬಾರಿ ಬಿ ಗುಂಪಿನಲ್ಲಿರುವ ದೆಹಲಿ ಜತೆಗೆ ಮಧ್ಯಪ್ರದೇಶ, ಒಡಿಶಾ, ಹೈದರಾಬಾದ್, ಉತ್ತರಪ್ರದೇಶ, ಕೇರಳ, ಸೌರಾಷ್ಟ್ರ, ಆಂಧ್ರಪ್ರದೇಶ ಹಾಗೂ ಛತ್ತೀಸ್ ಗಢ ಕೂಡಾ ಸ್ಪರ್ಧೆಯಲ್ಲಿವೆ. ಸೆಪ್ಟೆಂಬರ್ 20ರಂದು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸೌರಾಷ್ಟ್ರ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.
ಗಂಭೀರ್ ನಾಯಕ: 36 ವರ್ಷ ವಯಸ್ಸಿನ ಗಂಭೀರ್ ಅವರು ನಾಯಕರಾಗಿದ್ದಾರೆ. ತಂಡದ ಕೋಚ್ ಆಗಿ ಮನೋಜ್ ಪ್ರಭಾಕರ್ ರನ್ನು ನೇಮಿಸುವ ವಿಷಯದಲ್ಲಿ ಡಿಡಿಸಿಎ ಸೆಹ್ವಾಗ್ ನಡುವೆ ಮನಸ್ತಾಪವಾಗಿದೆ ಎಂಬ ಸುದ್ದಿ ಹರಡಿರುವ ಬೆನ್ನಲ್ಲೇ ಸೆಹ್ವಾಗ್ ಅವರು ಇಂದು ರಾಜೀನಾಮೆ ಘೋಷಿಸಿದ್ದಾರೆ.
ದೆಹಲಿ ತಂಡ : ಗೌತಮ್ ಗಂಭೀರ್ (ನಾಯಕ), ಉನ್ಮುಕ್ತ್ ಚಂದ್, ರಿಷಬ್ ಪಂತ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಹಿಮ್ಮತ್ ಸಿಂಗ್, ಹಿತೆನ್ ದಲಾಲ್, ಮನನ್ ಶರ್ಮ, ಪವನ್ ನೇಗಿ, ನವದೀಪ್ ಸೈನಿ, ಕುಲ್ವಂತ್ ಖೆಜ್ರೋಲಿಯಾ, ಗೌರವ್ ಕುಮಾರ್, ಸಿನ್ರಂಜೀತ್ ಸಿಂಗ್, ಪ್ರಶ್ನು ವಿಜ್ರಾನ್.
ಸ್ಟ್ಯಾಂಡ್ ಬೈ ಆಟಗಾರರು: ಮಿಲಿಂದ್ ಕುಮಾರ್, ಪ್ರಶಾಂತ್ ಭಂಡಾರಿ, ಸಾರ್ಥಕ್ ರಂಜನ್, ವರುಣ್ ಸೂದ್.