
ವಿಜಯ್ ಹಜಾರೆ ಟ್ರೋಫಿಯಲ್ಲಿ ಇಂದು ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿದ್ದು ಕರ್ನಾಟಕ ತಂಡಕ್ಕೆ ಪಂಜಾಬ್ ಎದುರಾಳಿಯಾಗಿದೆ. ಎರಡು ತಂಡಗಳು ಕೂಡ ಸಾಕಷ್ಟು ಅದ್ಭುತ ಆಟಗಾರರ ಪಡೆಯನ್ನು ಹೊಂದಿದ್ದು ಬಲಿಷ್ಠ ತಂಡಗಳ ನಡುವಿನ ಹೋರಾಟ ಜಿದ್ದಾಜಿದ್ದಿನಿಂದ ಕೂಡಿದೆ. ಈ ಪಂದ್ಯದಲ್ಲಿಯೂ ಕರ್ನಾಟಕದ ಬೌಲಿಂಗ್ ವಿಭಾಗ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಈ ಪಂದ್ಯದಲ್ಲಿ 235 ರನ್ಗಳಿಗೆ ಆಲೌಟ್ ಆಗಿದ್ದು ಕರ್ನಾಟಕದ ಗೆಲುವಿಗೆ 236 ರನ್ಗಳ ಗುರಿ ನಿಗದಿಪಡಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಉತ್ತಮ ಪ್ರದರ್ಶನ ನೀಡಿತು. ಆದರೆ ಪಂಜಾಬ್ ತಂಡದ ಓರ್ವ ದಾಂಡಿಗ ಮಾತ್ವೇ ಕರ್ನಾಟಕ ಆಟಗಾರರಿಗೆ ಬಹಳ ಕಾಡಿದ್ದಾರೆ. ಆರಂಬಿಕ ಆಟಗಾರ ಅಭಿಶೇಕ್ ಶರ್ಮಾ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನಿಡಿದ್ದು ಭರ್ಜರಿ ಶತಕ ಸಿಡಿಸಿದ್ದಾರೆ. ಕರ್ನಾಟಕದ ಶಿಸ್ತಿನ ಬೌಲಿಂಗ್ ದಾಳಿಯ ವಿರುದ್ಧ ಶರ್ಮಾ ಏಕಾಂಗಿ ಹೋರಾಟವನ್ನು ನಡೆಸಿದರು. ಇದರ ಪರಿಣಾಮವಾಗಿ ಪಂಜಾಬ್ ಈ ಪಂದ್ಯದಲ್ಲಿ ಗೌರವದ ಮೊತ್ತ ಗಳಿಸಲು ಸಾಧ್ಯವಾಗಿದೆ.
ಪಂಜಾಬ್ ತಂಡದ ಪರವಾಗಿ ಆರಂಬಿಕ ಆಟಗಾರ ಅಭಿಶೇಕ್ ಶರ್ಮಾ 123 ಎಸೆತಗಳಲ್ಲಿ 109 ರನ್ಗಳನ್ನು ಸಿಡಿಸಿ ವಿಕೆಟ್ ಕಳೆದುಕೊಂಡರು. ಈ ಪ್ರದರ್ಶನ ಪಂಜಾಬ್ ತಂಡಕ್ಕೆ ಆಸರೆಯಾಗಿದೆ. ಉಳಿದಂತೆ ಮಧ್ಯಮ ಕ್ರಮಾಂಕದ ಸನ್ವೀರ್ ಸಿಂಗ್ ಅವರ 39 ರನ್ ಪಂಜಾಬ್ ಪರ ದಾಖಲಾದ ಅತೀ ಹೆಚ್ಚಿನ ಮೊತ್ತವಾಗಿದೆ.
ಇನ್ನು ಈ ಪಂದ್ಯದಲ್ಲಿ ಕರ್ನಾಟಕ ಪರವಾಗಿ ವಿದ್ವತ್ ಕಾವೇರಪ್ಪ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ರೋನಿತ್ ಮೋರೆ ಎರಡು ವಿಕೆಟ್ ಪಡೆದರೆ ವಾಸುಕಿ ಕೌಶಿಕ್, ಮನೋಜ್ ಭಾಂಡಗೆ ಹಾಗೂ ಕೆ ಗೌತಮ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಪಂಜಾಬ್ ನೀಡಿರುವ ಈ ಗುರಿಯನ್ನು ಕರ್ನಾಟಕ ಹೇಗೆ ಬೆನ್ನಟ್ಟಿಲಿದೆ ಎಂಬುದು ಈಗ ಕುತೂಹಲವಾಗಿದೆ.
ಪಂಜಾಬ್ ಆಡುವ ಬಳಗ: ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್, ಅನ್ಮೋಲ್ಪ್ರೀತ್ ಸಿಂಗ್, ಮಂದೀಪ್ ಸಿಂಗ್ (ನಾಯಕ), ಅನ್ಮೋಲ್ ಮಲ್ಹೋತ್ರಾ (ವಿಕೆಟ್ ಕೀಪರ್), ಹರ್ಪ್ರೀತ್ ಬ್ರಾರ್, ಸನ್ವಿರ್ ಸಿಂಗ್, ರಮಣದೀಪ್ ಸಿಂಗ್, ಮಯಾಂಕ್ ಮಾರ್ಕಂಡೆ, ಬಲ್ತೇಜ್ ಸಿಂಗ್, ಸಿದ್ದಾರ್ಥ್ ಕೌಲ್
ಬೆಂಚ್: ಗೌರವ್ ಚೌಧರಿ, ಅಶ್ವನಿ ಕುಮಾರ್, ವಿನಯ್ ಚೌಧರಿ, ಪುಖ್ರಾಜ್ ಮಾನ್
ಕರ್ನಾಟಕ ಆಡುವ ಬಳಗ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್, ಶರತ್ ಬಿಆರ್ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿಧ್ವತ್ ಕಾವೇರಪ್ಪ, ವಾಸುಕಿ ಕೌಶಿಕ್
ಬೆಂಚ್: ಮುರಳೀಧರ ವೆಂಕಟೇಶ್, ಜಗದೀಶ ಸುಚಿತ್, ಅಭಿನವ್ ಮನೋಹರ್, ನಿಹಾಲ್ ಉಳ್ಳಾಲ್