Vijay Hazare Trophy 2022 : ಗುಂಪು ಹಂತದಲ್ಲಿ ಅಬ್ಬರಿಸಿ, ನಾಕ್ಔಟ್ ಹಂತದಲ್ಲಿ ಮುಗ್ಗರಿಸಿದ ತಮಿಳುನಾಡು

ಗುಂಪು ಹಂತದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನಿಡುವ ಮೂಲಕ ಅಜೇಯವಾಗಿದ್ದ ತಮಿಳುನಾಡು ತಂಡ ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದೆ. ಕ್ವಾರ್ಟರ್ ಫೈನಲ್ನಲ್ಲಿ ಸೌರಾಷ್ಟ್ರ ವಿರುದ್ಧ 44 ರನ್ಗಳಿಂದ ಸೋಲನುಭವಿಸುವ ಮೂಲಕ ವಿಜಯ್ ಹಜಾರೆ ಪಂದ್ಯಾವಳಿಯಿಂದಲೇ ಹೊರಬಿದ್ದಿದೆ.
ನಾಡಿಯಾದ್ನ ಜಿಎಸ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಮಿಳುನಾಡು ಬ್ಯಾಟಿಂಗ್ ವಿಭಾಗ ಕೈಕೊಟ್ಟಿತು. 294 ರನ್ಗಳ ಗುರಿಯನ್ನು ಬೆನ್ನತ್ತಿದ ತಮಿಳುನಾಡು, 48 ಓವರ್ ಗಳಲ್ಲಿ 249 ರನ್ಗಳಿಗೆ ಆಲೌಟ್ ಆಗುವ ಮೂಲಕ 44 ರನ್ಗಳ ಸೋಲೊಪ್ಪಿಕೊಂಡು ಸ್ಪರ್ಧೆಯಿಂದ ನಿರ್ಗಮಿಸಿದೆ.
ಲೀಗ್ ಹಂತದ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ 506 ರನ್ ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದ ತಮಿಳುನಾಡು, ಸೌರಾಷ್ಟ್ರ ಬೌಲಿಂಗ್ ಮುಂದೆ ರನ್ ಗಳಿಸಲು ಪರದಾಡಿತು. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸತತ ಐದು ಶತಕಗಳನ್ನು ಸಿಡಿಸುವ ದಾಖಲೆ ಬರೆದಿದ್ದ ತಮಿಳುನಾಡು ತಂಡದ ಎನ್ ಜಗದೀಸನ್ ಕ್ವಾರ್ಟರ್ ಫೈನಲ್ನಲ್ಲಿ ರನ್ ಗಳಿಸಲು ವಿಫಲರಾದರು. ಉತ್ತಮ ಆಲ್ರೌಂಡ್ ಆಟವಾಡಿದ ಸೌರಾಷ್ಟ್ರ ಬಲಿಷ್ಠ ತಮಿಳುನಾಡು ತಂಡವನ್ನು ಸೋಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್ನಲ್ಲಿ ಕರ್ನಾಟಕ ವಿರುದ್ಧ ಆಡಲಿದೆ.

ಸವಾಲಿನ ಮೊತ್ತ ಕಲೆಹಾಕಿದ ಸೌರಾಷ್ಟ್ರ
ಟಾಸ್ ಗೆದ್ದ ತಮಿಳುನಾಡು ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವುದರಿಂದ ಚೇಸ್ ಮಾಡುವ ಅದರ ನಿರ್ಧಾರ ಸರಿಯಾಗಿತ್ತು. ಆದರೆ ಸೌರಾಷ್ಟ್ರ ತಂಡ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿತು.
ಆರಂಭಿಕ ಆಟಗಾರ ಹಾರ್ವಿಕ್ ದೇಸಾಯಿ 91 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಜಯ್ ಗೊಹಿಲ್ (34), ಸಮರ್ಥ ವ್ಯಾಸ್ (27), ಪ್ರೇರಕ್ ಮಂಕಡ್ 35 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ವಸಾವಡ 49 ಎಸೆತಗಳಲ್ಲಿ 51 ರನ್ ಗಳಿಸುವ ಅರ್ಧಶತಕ ಗಳಿಸಿ ಔಟಾದರು. ನಂತರ ಬಂದ ಚಿರಾಗ್ ಜಾನಿ 31 ಎಸೆತಗಳಲ್ಲಿ ಅಜೇಯ 52 ರನ್ ಬಾರಿಸುವ ಮೂಲಕ ಸೌರಾಷ್ಟ್ರ ಸವಾಲಿನ ಮೊತ್ತ ಕಲೆ ಹಾಕಲು ಕಾರಣವಾದರು.
ಅಂತಿಮವಾಗಿ ಸೌರಾಷ್ಟ್ರ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 293 ರನ್ ಗಳಿಸಿತು. ತಮಿಳುನಾಡು ಪರವಾಗಿ ಸಾಯಿ ಕಿಶೋರ್ ಮತ್ತು ಎಂ ಮೊಹಮ್ಮದ್ ತಲಾ ಎರಡು ವಿಕೆಟ್ ಪಡೆದರು.

ತಮಿಳುನಾಡು ಬ್ಯಾಟಿಂಗ್ ವಿಫಲ
ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದ ತಮಿಳುನಾಡು ತಂಡ ಈ ಮೊತ್ತವನ್ನು ಸುಲಭವಾಗಿ ಬೆನ್ನತ್ತದೆ ಎಂದು ಭಾವಿಸಲಾಗಿತ್ತು. ಆದರೆ, ತಮಿಳುನಾಡು ತಂಡದ ಸ್ಟಾರ್ ಬ್ಯಾಟರ್ ಗಳನ್ನು ಆರಂಭದಲ್ಲೇ ಔಟ್ ಮಾಡುವ ಮೂಲಕ ಸೌರಾಷ್ಟ್ರ ಆಘಾತ ನೀಡಿತು.
ಸಾಯಿ ಸುದರ್ಶನ್ 24 ರನ್ ಗಳಿಸಿ ಔಟಾದರೆ, ಪ್ರಮುಖ ಬ್ಯಾಟರ್ ಎನ್ ಜಗದೀಶನ್ ಕೇವಲ 8 ರನ್ಗಳಿಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಬಂದ ಬಾಬಾ ಅಪರಜಿತ್ ಕೂಡ 4 ರನ್ಗಳಿಗೆ ಔಟಾದರು. ನಂತರ ಬಂದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕೂಡ 9 ರನ್ ಗಳಿಸಿ ಔಟಾದರು. ನಾಯಕ ಬಾಬಾ ಇಂದ್ರಜಿತ್ (53) ಮತ್ತು ಆರ್ ಸಾಯಿ ಕಿಶೋರ್ 74 ರನ್ ಗಳಿಸುವ ಮೂಲಕ ತಮಿಳುನಾಡಿಗೆ ಗೆಲುವಿನ ಭರವಸೆ ಮೂಡಿಸಿದ್ದರು. ಇವರಿಬ್ಬರೂ ಔಟಾದ ನಂತರ ಉಳಿದ ಬ್ಯಾಟರ್ ಗಳು ಕ್ರೀಸ್ನಲ್ಲಿ ಹೆಚ್ಚುಹೊತ್ತು ನಿಲ್ಲಲಿಲ್ಲ ಅಂತಿಮವಾಗಿ 249 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಸೌರಾಷ್ಟ್ರ ಪರವಾಗಿ ಚಿರಾಗ್ ಜಾನಿ 4 ವಿಕೆಟ್ ಪಡೆದು ಮಿಂಚಿದರು. ಧರ್ಮೇಂದ್ರಸಿನ್ಹಾ ಜಡೇಜಾ ಮತ್ತು ಪಾರ್ಥ ಭುತ್ ತಲಾ 2 ವಿಕೆಟ್ ಪಡೆದು ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದರು.

ತಮಿಳುನಾಡು, ಸೌರಾಷ್ಟ್ರ ಪ್ಲೇಯಿಂಗ್ XI
ತಮಿಳುನಾಡು: ಸಾಯಿ ಸುದರ್ಶನ್, ಎನ್ ಜಗದೀಸನ್, ಬಾಬಾ ಅಪರಾಜಿತ್, ಬಾಬಾ ಇಂದ್ರಜಿತ್ (ನಾಯಕ), ದಿನೇಶ್ ಕಾರ್ತಿಕ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಎಂ ಮೊಹಮ್ಮದ್, ಸೋನು ಯಾದವ್, ಮಣಿಮಾರನ್ ಸಿದ್ಧಾರ್ಥ್, ಸಂಜಯ್ ಯಾದವ್, ಸಂದೀಪ್ ವಾರಿಯರ್
ಸೌರಾಷ್ಟ್ರ: ಹಾರ್ವಿಕ್ ದೇಸಾಯಿ, ಶೆಲ್ಡನ್ ಜಾಕ್ಸನ್, ಸಮರ್ಥ ವ್ಯಾಸ್, ಅರ್ಪಿತ್ ವಾಸವಾದ, ಜಯ್ ಗೋಹಿಲ್, ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಧರ್ಮೇಂದ್ರಸಿನ್ಹ್ ಜಡೇಜಾ, ಜಯದೇವ್ ಉನದ್ಕತ್ (ನಾಯಕ), ಪಾರ್ಥ್ ಭುತ್, ಚೇತನ್ ಸಕರಿಯಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications