ವಿಜಯ್ ಹಜಾರೆ ಟ್ರೋಫಿಯ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರವನ್ನು ಎದುರಿಸಲಿದೆ. ಕ್ವಾರ್ಟರ್ ಫೈನಲ್ನಲ್ಲಿ ಬಲಿಷ್ಠ ತಮಿಳುನಾಡು ತಂಡವನ್ನೇ 44 ರನ್ಗಳಿಂದ ಸೋಲಿಸುವ ಮೂಲಕ ಸೌರಾಷ್ಟ್ರ ಸೆಮಿಫೈನಲ್ ತಲುಪಿದ್ದು, ಕರ್ನಾಟಕ ಪಂಜಾಬ್ ವಿರುದ್ಧ ನಾಲ್ಕು ವಿಕೆಟ್ಗಳ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಉಭಯ ತಂಡಗಳೂ ಕೂಡ ಉತ್ತಮ ಪ್ರದರ್ಶನ ನೀಡಿವೆ. ಆದರೆ, ಸೆಮಿಫೈನಲ್ನಲ್ಲಿ ಯಾವ ತಂಡವನ್ನು ಉತ್ತಮವಾಗಿ ನಿಭಾಯಿಸುತ್ತದೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ.
ವಿಜಯ್ ಹಜಾರೆ 2022 ರ ಪಂದ್ಯಾವಳಿಯಲ್ಲಿ ಕರ್ನಾಟಕದ ಬೌಲರ್ಗಳು ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿದ್ವತ್ ಕಾವೇರಪ್ಪ ಏಳು ಪಂದ್ಯಗಳಲ್ಲಿ 16 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ. ಅವರು ಪಂಜಾಬ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು.
ಸದ್ಯ ಉತ್ತಮ ಫಾರ್ಮ್ನಲ್ಲಿರುವ ಅವರು ಸೆಮಿಫೈನಲ್ನಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ಕೌಶಿಕ್ ಮತ್ತು ಕೃಷ್ಣಪ್ಪ ಗೌತಮ್ ಬೌಲಿಂಗ್ನಲ್ಲಿ ಅವರಿಗೆ ಉತ್ತಮ ಬೆಂಬಲ ನೀಡಿದ್ದಾರೆ. ಈ ಮೂವರು ಬೌಲರ್ ಗಳು ಈಗ ಸೌರಾಷ್ಟ್ರದ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ.
ಸೌರಾಷ್ಟ್ರ ಬೌಲಿಂಗ್ ಕೂಡ ಉತ್ತಮವಾಗಿದೆ
ಜಯದೇವ್ ಉನದ್ಕಟ್ ನೇತೃತ್ವದ ಸಮರ್ಥ್ ವ್ಯಾಸ್, ಹಾರ್ವಿಕ್ ದೇಸಾಯಿ ಮತ್ತು ವಾಸವಾದ ಅವರ ಬೌಲಿಂಗ್ ವಿಭಾಗ ಬಲಿಷ್ಠ ತಮಿಳುನಾಡು ತಂಡವನ್ನೇ ಮಣಿಸಿದ್ದಾರೆ. ಸೌರಾಷ್ಟ್ರ ಬೌಲಿಂಗ್ ಬಗ್ಗೆ ಕರ್ನಾಟಕದ ಬ್ಯಾಟಿಂಗ್ ವಿಭಾಗ ಎಚ್ಚರಿಕೆಯಿಂದ ಇರಬೇಕಿದೆ.
ಸೌರಾಷ್ಟ್ರ ಬ್ಯಾಟಿಂಗ್ ವಿಭಾಗ ಕೂಡ ಉತ್ತಮವಾಗಿದೆ. 8 ಪಂದ್ಯಗಳಲ್ಲಿ 398 ರನ್ ಗಳಿಸಿರುವ ವ್ಯಾಸ್ ಸೌರಾಷ್ಟ್ರ ಪರವಾಗಿ ಪ್ರಮುಖ ಬ್ಯಾಟರ್ ಆಗಿದ್ದಾರೆ. ಚಿರಾಗ್ ಜಾನಿ ಕೂಡ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದರು.
ಪಿಚ್ ವರದಿ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಿಚ್ ಸಮತಟ್ಟಾಗಿದ್ದು, ಬ್ಯಾಟರ್ ಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ ಇಲ್ಲಿ ಸರಾಸರಿ 260 ರನ್ ಗಳಿಸಿದೆ.
ಉಭಯ ತಂಡಗಳ ಸಂಭಾವ್ಯ ಬಳಗ
ಕರ್ನಾಟಕ : ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್, ನಿಕಿನ್ ಜೋಸ್, ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್, ಶರತ್ ಬಿಆರ್, ಮನೋಜ್ ಭಾಂಡಗೆ, ಗೌತಮ್, ರೋನಿತ್ ಮೋರೆ, ವಿದ್ವತ್ ಕಾವೇರಪ್ಪ, ಕೌಶಿಕ್
ಸೌರಾಷ್ಟ್ರ: ಹಾರ್ವಿಕ್ ದೇಸಾಯಿ, ಜಾಕ್ಸನ್, ಜೇ ಗೋಹಿಲ್, ಸಮರ್ಥ್ ವ್ಯಾಸ್, ವಾಸವಾದ, ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಡಿಎ ಜಡೇಜಾ, ಉನಾದ್ಕತ್, ಪಾರ್ಥ್ ಭುತ್, ಚೇತನ್ ಸಕರಿಯಾ