ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಮೊದಲ ಸೋಲನ್ನು ಕಂಡಿದೆ. ಅಹಮದಾಬಾದ್ ನಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಮಯಾಂಕ್ ಅಗರ್ ವಾಲ್ ಪಡೆ ಹರಿಯಾಣ ವಿರುದ್ಧ 5 ವಿಕೆಟ್ ಸೋಲು ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ 43.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 143 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹರಿಯಾಣ ತಂಡ 31.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಕರ್ನಾಟಕ ಮಣಿಸಿದ ಹರಿಯಾಣ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಉಭಯ ತಂಡಗಳು ಟೂರ್ನಿಯಲ್ಲಿ ಅಜೇಯ ಓಟವನ್ನು ನಡೆಸಿದ್ದವು. ಆದರೆ ಕರ್ನಾಟಕದ ಗೆಲುವಿನ ಓಟಕ್ಕೆ ಹರಿಯಾಣ ಬ್ರೇಕ್ ಹಾಕಿದೆ.
ಹರಿಯಾಣ ಆಡಿದ ಆರು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದು 24 ಅಂಕಗಳೊಂದಿಗೆ ಸಿ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಕರ್ನಾಟಕ ಇಷ್ಟೇ ಪಂದ್ಯಗಳಲ್ಲಿ 5 ಗೆಲುವು, 1 ಸೋಲು ಕಂಡಿದ್ದು, 20 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಕರ್ನಾಟಕದ ಆರಂಭಿಕರಾದ ಆರ್.ಸಮರ್ಥ್ (1), ಮಯಾಂಕ್ ಅಗರ್ ವಾಲ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ನಿಕ್ಕಿನ್ ಜೋಸ್, ಭರವಸೆಯ ಆಟಗಾರ ಅಭಿನವ್ ಮನಹೋರ್, ಮನೋಜ್ ಭಂಡಾರೆ, ಆಲ್ ರೌಂಡರ್ ಕೆ.ಗೌತಮ್ ರನ್ ಬರ ಅನುಭವಿಸಿದರು.
ವಿಜಯಕುಮಾರ್ ವೈಶಾಕ್ 61 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿ ಮಿಂಚಿದರು. ಉಳಿದಂತೆ ರಾಜ್ಯದ ಪರ ಬಿಆರ್ ಶರತ್ 15, ಮನೀಷ್ ಪಾಂಡೆ 24, ಜೆ.ಸುಚಿತ್ 12 ಮಾತ್ರ ಎರಡಂಕಿ ದಾಟಿದರು.
ಹರಿಯಾಣ ಪರ ಸುಮಿತ್ ಕುಮಾರ್ ಮೂರು, ಅಂಶುಲ್ ಕಾಂಬೋಜ್, ನಿಶಾಂತ್ ಸಿಂಧು, ಯುಜುವೇಂದ್ರ ಚಾಹಲ್ ತಲಾ ಎರಡು ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಹರಿಯಾದ ಆರಂಭವೂ ಕಳಪೆಯಾಗಿತ್ತು. 35 ರನ್ ಸೇರಿಸುವಷ್ಟರಲ್ಲಿ ತಂಡ ಮೂರು ವಿಕೆಟ್ ಕಳೆದುಕೊಂಡಿತು. ನಾಲ್ಕನೇ ವಿಕೆಟ್ ಗೆ ನಿಶಾಂತ್ ಸಿಂಧು ಹಾಗೂ ರೋಹಿತ್ ಶರ್ಮಾ 99 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು.
ನಿಶಾಂತ್ 43 ರನ್ ಬಾರಿಸಿದರೆ, ರೋಹಿತ್ ಶರ್ಮಾ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 63 ರನ್ ಸಿಡಿಸಿ ಜಯದಲ್ಲಿ ಮಿಂಚಿದರು.