Vijay Hazare Trophy 2023: ಕರ್ನಾಟಕ ಮಾರಕ ಬೌಲಿಂಗ್ಗೆ ತತ್ತರಿಸಿದ ದೆಹಲಿ; ಮಯಾಂಕ್ ಬಳಗಕ್ಕೆ ಸತತ 3ನೇ ಜಯ
ಸೋಮವಾರ, ನವೆಂಬರ್ 27ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಗ್ರೌಂಡ್ ಬಿ ನಲ್ಲಿ ನಡೆದ ಸಿ ಗುಂಪಿನ 2023ರ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಸಿ ಗುಂಪಿನ ಪಂದ್ಯದಲ್ಲಿ ದೆಹಲಿ ವಿರುದ್ಧ ಕರ್ನಾಟಕ ತಂಡವು 6 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿದೆ.
ಕರ್ನಾಟಕ ತಂಡದ ವೇಗಿಗಳಾದ ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ ಮತ್ತು ವೈಶಾಕ್ ವಿಜಯ್ಕುಮಾರ್ ಮೋಡ ಕವಿದ ವಾತಾವರಣದಲ್ಲಿ ದೆಹಲಿ ವಿರುದ್ಧ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು.

ಮಳೆಯಿಂದ ಒದ್ದೆಯಾದ ಔಟ್ಫೀಲ್ಡ್ನಿಂದಾಗಿ 38 ಓವರ್ಗಳಿಗೆ ಮೊಟಕುಗೊಳಿಸಿದ ಪಂದ್ಯದಲ್ಲಿ, ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡ ಆಯುಷ್ ಬದೋನಿ ಅಮೂಲ್ಯ ಶತಕದ ಸಾಹಸದಿಂದ 36.3 ಓವರ್ಗಳಲ್ಲಿ 143 ರನ್ಗಳಿಗೆ ಆಲೌಟ್ ಆಯಿತು.

144 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ದೇವದತ್ ಪಡಿಕ್ಕಲ್ ಅಮೋಘ ಅರ್ಧಶತಕದ ನೆರವಿನಿಂದ 27.3 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.
ದೆಹಲಿ ತಂಡದ ಪರ ಆರಂಭಿಕರಾದ ಪ್ರಿಯಾಂಶ್ ಆರ್ಯ 15 ರನ್, ಅನುಜ್ ರಾವತ್ 1 ರನ್, ಯಶ್ ಧುಲ್ 11 ರನ್, ಹಿಮ್ಮತ್ ಸಿಂಗ್ 1 ರನ್ ಗಳಿಸಿ ವಿಫಲರಾದರೆ, ಆಯುಷ್ ಬದೋನಿ 106 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 4 ಸಿಕ್ಸರ್ ಸಮೇತ 100 ರನ್ ಗಳಿಸಿ ತಮ್ಮ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಉಳಿದಂತೆ ಯಾವ ಬ್ಯಾಟರ್ಗಳು ಎರಡಂಕಿ ಮೊತ್ತ ದಾಟಲಿಲ್ಲ.
ಇನ್ನು ಬೌಲಿಂಗ್ನಲ್ಲಿ ಕರ್ನಾಟಕ ತಂಡದ ಪರ ವಿಧ್ವತ್ ಕಾವೇರಪ್ಪ 7.3 ಓವರ್ಗಳಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದರೆ, ವಾಸುಕಿ ಕೌಶಿಕ್ 7 ಓವರ್ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ವಿಜಯ್ಕುಮಾರ್ ವೈಶಾಕ್ ಮತ್ತು ಕೃಷ್ಣಪ್ಪ ಗೌತಮ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಆ ಬಳಿಕ ಕರ್ನಾಟಕ ತಂಡದ ಇನ್ನಿಂಗ್ಸ್ ಆರಂಭಿಸಿದ ರವಿಕುಮಾರ್ ಸಮರ್ಥ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡುವಲ್ಲಿ ಸಫಲರಾಗಲಿಲ್ಲ. ಆರ್ ಸಮರ್ಥ್ 2 ರನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಕೇವಲ 12 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ದೇವದತ್ ಪಡಿಕ್ಕಲ್ 69 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ಗಳ ಮೂಲಕ 70 ರನ್ ಬಾರಿಸಿದರೆ, ನಿಕಿನ್ ಜೋಸ್ 13 ರನ್, ಮನೀಶ್ ಪಾಂಡೆ ಅಜೇಯ 28 ರನ್ ಮತ್ತು ಶರತ್ ಬಿಆರ್ ಅಜೇಯ 7 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.
ದೆಹಲಿ ತಂಡದ ಪರ ಬೌಲಿಂಗ್ನಲ್ಲಿ ಹರ್ಷಿತ್ ರಾಣಾ, ಮಯಾಂಕ್ ಯಾದವ್, ಸುಯಶ್ ಶರ್ಮಾ ಮತ್ತು ಲಲಿತ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications