ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್ ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ 2024ರ ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಕರ್ನಾಟಕ ಮಣಿಸಿದೆ. ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಚಾಂಪಿಯನ್ ಆಗಿರುವ ಮುಂಬೈ ತಂಡಕ್ಕೆ ಈ ಸೋಲಿಂದ ಹಿನ್ನಡೆಯಾಗಿದೆ. ಕರ್ನಾಟಕದ ವಿಕೆಟ್ಕೀಪರ್ ಮತ್ತು ಬ್ಯಾಟರ್ ಕೃಷ್ಣನ್ ಶ್ರೀಜಿತ್ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೃಷ್ಣನ್ ಶ್ರೀಜಿತ್ 150 ರನ್ಗಳನ್ನು ಬಾರಿಸುವ ಮೂಲಕ ಕರ್ನಾಟಕಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಮುಂಬೈ ನೀಡಿದ 383 ರನ್ಗಳ ಗುರಿಯನ್ನು ಕರ್ನಾಟಕ ಕೇವಲ 46.2 ಓವರ್ಗಳಲ್ಲಿ ತಲುಪಿದೆ.
ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಇನ್ನಿಂಗ್ಸ್ ತೆರೆದ ಮುಂಬೈ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆದರೆ, ಆಯುಷ್ ಮ್ಹಾತ್ರೆ ಮತ್ತು ಹಾರ್ದಿಕ್ ತಮೋರ್ ನಡುವಿನ 139 ರನ್ಗಳ ಶತಕದ ಜೊತೆಯಾಟ ಹಾಗು ನಾಯಕ ಶ್ರೇಯಸ್ ಅಯ್ಯರ್ 114 ರನ್ ಕಲೆ ಹಾಕಿ ಮುಂಬೈ ತಂಡಕ್ಕೆ ನೆರವಾದರು. ಹೀಗಾಗಿ ಮುಂಬೈ ನಿಗದಿತ 50 ಓವರ್ಗಳಲ್ಲಿ 382 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು.

ಮುಂಬೈನಿಂದ 383 ರನ್ಗಳ ಟಾರ್ಗೆಟ್ ಪಡೆದ ಕರ್ನಾಟಕ ಉತ್ತಮ ಆರಂಭ ಪಡೆಯಿತು. ಕರ್ನಾಟಕದ ಟಾಪ್ ಆರ್ಡರ್ ಬ್ಯಾಟರ್ಗಳು ಜವಾಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ 46.2 ಓವರ್ಗಳಲೇ ಮುಂಬೈ ವಿರುದ್ಧ ಗೆಲುವು ತಂದುಕೊಟ್ಟರು.
ಕರ್ನಾಟಕ ಪರ ಮಯಾಂಕ್ ಅಗರ್ವಾಲ್ ಮತ್ತು ಕೆವಿ ಅನೀಶ್ ಉತ್ತಮ ಜೊತೆಯಾಟವಾಡಿದರು. ಮಯಾಂಕ್ ಅಗರ್ವಾಲ್ 48 ಎಸೆತಗಳಲ್ಲಿ 7 ಬೌಂಡರಿ ಹಾಗು 1 ಸಿಕ್ಸರ್ ನೆರವಿನಿಂದ 47 ರನ್ಗಳಿಸಿದರು. ಮತ್ತೊಂದೆಡೆ ನಾಯಕನಿಗೆ ಸಾಥ್ ನೀಡಿದ ಅನೀಶ್ ಕೂಡ 66 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 82 ರನ್ ಕೊಡುಗೆ ನೀಡಿದರು. ಇದಾದ ನಂತರ ಒಂದಾದ ಕೃಷ್ಣನ್ ಶ್ರೀಜಿತ್ ಮತ್ತು ಪ್ರವೀಣ್ ದುಬೆ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪ್ರವೀಣ್ ದುಬೆ 50 ಎಸೆತಗಳಲ್ಲಿ 5 ಬೌಂಡರಿ ಹಾಗು 1 ಸಿಕ್ಸರ್ನಿಂದ ಅಜೇಯ 65 ರನ್ ಬಾರಿಸಿದರೆ, ಕೃಷ್ಣನ್ ಶ್ರೀಜಿತ್ 101 ಎಸೆತಗಳಲ್ಲಿ ಬರೋಬ್ಬರಿ 20 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 150 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಶ್ರೀಜಿತ್ ಬಿರುಸಿನ ಬ್ಯಾಟಿಂಗ್ನಿಂದಾಗಿ ಕರ್ನಾಟಕ ಸುಲಭವಾಗಿ ಗೆಲುವು ಸಾಧಿಸಿತು. ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೀಜಿತ್ ಅವರನ್ನು ಮುಂಬೈ ಫ್ರಾಂಚೈಸಿ ಮೂಲ ಬೆಲೆ 30 ಲಕ್ಷಕ್ಕೆ ಖರೀದಿಸಿದೆ.