ವಿಜಯ್ ಹಜಾರೆ ಟ್ರೋಫಿ 2024ರ ಟೂರ್ನಿಯಲ್ಲಿ ಕರ್ನಾಟಕ ತಂಡ ಹ್ಯಾಟ್ರಿಕ್ ಗೆಲುವು ಕಂಡಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಮೈದಾನದಲ್ಲಿ ನಡೆದ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಕರ್ನಾಟಕ ತಂಡವು ಒಂದು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಕರ್ನಾಟಕ ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ನಾಯಕ ಮಾಯಾಂಕ್ ಅರ್ಗವಾಲ್ ಅವರ ಭರ್ಜರಿ ಶತಕದ ಬಲದಿಂದ ಕರ್ನಾಟಕ ಗೆದ್ದಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಪಂಜಾಬ್ 49.2 ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ 247 ರನ್ಗಳ ಗುರಿಯನ್ನು ಕರ್ನಾಟಕ ತಂಡಕ್ಕೆ ನೀಡಿತ್ತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 47.3 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು ಪಂದ್ಯವನ್ನು ಗೆದ್ದು ಬೀಗಿತು.

ಕನಾರ್ಟಕ ತಂಡದ ನಾಯಕ ಮಯಾಂಕ್ ಅರ್ಗವಾಲ್ ಅವರು ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕನ ನಿರೀಕ್ಷೆ ತಕ್ಕಂತೆ ಕರ್ನಾಟಕ ಬೌಲರ್ ಅದ್ಭುತ ಬೌಲಿಂಗ್ ದಾಳಿ ನಡೆಸಿದರು. ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಪಂಜಾಬ್ ತಂಡ ಕರ್ನಾಟಕ ಎದುರು ಬಾಲ ಬಿಚ್ಚಲಿಲ್ಲ. ಪಂಜಾಬ್ ಪರ ಅನ್ಮೋಲ್ ಪ್ರೀತ್ ಸಿಂಗ್ (51) ಅರ್ಧಶತಕ ಬಾರಿಸಿದರೆ, ಅನ್ಮೋಲ್ ಮಲ್ಹೋತ್ರಾ (42) , ನೇಹಲ್ ವಧೇರಾ (37) ಮತ್ತು ಸನ್ವೀರ್ ಸಿಂಗ್ (35) ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಆದರೆ ಈ ಬ್ಯಾಟರ್ಗಳು ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ಎಡುವಿದರು.
ಕನಾರ್ಟಕ ಪರ ಸಂಘಟಿತ ಬೌಲಿಂಗ್ ದಾಳಿ ಕಂಡು ಬಂತು. ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಆಡಿದ ಎಡಗೈ ವೇಗದ ಬೌಲರ್ ಅಭಿಲಾಶ್ ಶೆಟ್ಟಿ 5 ವಿಕೆಟ್ ಕಬಳಿಸಿ ಮಿಂಚಿದರು. ಉಳಿದಂತೆ ಕೆ ಕೌಶಿಕ್ ಮತ್ತು ನಿಕಿನ್ ಜೋಸ್ ತಲಾ ಎರಡು ಪಡೆದರೆ, ಶ್ರೇಯಸ್ ಗೋಪಾಲ್ ಒಂದು ವಿಕೆಟ್ ಉರುಳಿಸಿದರು.
ಪಂಜಾಬ್ ನೀಡಿದ 248 ರನ್ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ತಂಡಕ್ಕೆ ನಾಯಕ ಮಯಾಂಕ್ ಅರ್ಗವಾಲ್ ಆಸರೆಯಾಗಿ ನಿಂತು ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಆದರೆ ನಾಯಕನಿಗೆ ಉಳಿದ್ಯಾವ ಬ್ಯಾಟರ್ಗಳಿಂದ ಸಾಥ್ ಸಿಗಲಿಲ್ಲ. ಆದರೂ ಕ್ರೀಸ್ಗೆ ಕಚ್ಚಿ ನಿಂತು ಬಿರುಸಿನ ಬ್ಯಾಟಿಂಗ್ ಮಾಡಿದ ಮಯಾಂಕ್ ಶತಕ ಸಿಡಿಸಿದರು. ಮಯಾಂಕ್ 127 ಎಸೆತಗಳಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 139 ರನ್ ಕಲೆ ಹಾಕುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು.
ಪಂಜಾಬ್ ಪರ ಕೂಡ ಬೌಲರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಕರ್ನಾಟಕ ತಂಡದ ಬ್ಯಾಟರ್ಗಳನ್ನು ಪಂಜಾಬ್ ಬೌಲರ್ಗಳು ಕಾಡಿದರು. ಪಂಜಾಬ್ ನಾಯಕ ಅಭಿಷೇಕ್ ಶರ್ಮಾ ನಾಲ್ಕು ಉರುಳಿಸಿದರೆ, ಆರ್ಶದೀಪ್ ಸಿಂಗ್ ಮತ್ತು ಸನ್ವೀರ್ ಸಿಂಗ್ ತಲಾ ಎರಡು ವಿಕೆಟ್ ಪಡೆದರು.