ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024ರ ಟೂರ್ನಿಯಲ್ಲಿ ಇತ್ತೀಚೆಗೆ ಮುಂಬೈ ತಂಡ ಚಾಂಪಿಯನ್ ಆಗಿತ್ತು. ಇದರ ಬೆನ್ನಲ್ಲೇ ವಿಜಯ್ ಹಜಾರೆ ಟ್ರೋಫಿ ಟೂರ್ನಿ ಯ ಮೊದಲ ಮೂರು ಪಂದ್ಯಗಳಲ್ಲಿ ಅಚ್ಚರಿಯ ಮುಂಬೈ ತಂಡವನ್ನು ಪ್ರಕಟಿಸಲಾಗಿದೆ. ಮುಂಬೈ ತಂಡವನ್ನು ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಸೇರಿದಂತೆ ಯುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇದಕ್ಕೆ ಪೃಥ್ವಿ ಶಾ ಬೇಸರ ವ್ಯಕ್ತಪಡಿಸಿದ್ದಾರೆ.
ಪೃಥ್ವಿ ಶಾ ಅವರಿಗೆ ಈ ವರ್ಷ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ರಣಜಿ ಟ್ರೋಫಿ ಟೂರ್ನಿಯಲ್ಲಿ ಶಿಸ್ತು ಉಲ್ಲಂಘನೆ ಕಾರಣಕ್ಕೆ ಕೆಲವು ಪಂದ್ಯಗಳಿಂದ ಅವರನ್ನು ಹೊರಗಿಡಲಾಗಿತ್ತು. ಐಪಿಎಲ್ 2024ರ ಮೆಗಾ ಹರಾಜಿನಲ್ಲಿಯೂ ಅವರಿಗೆ ಯಾವುದೇ ಫ್ರಾಂಚೈಸಿಗಳು ಮಣೆ ಹಾಕಿರಲಿಲ್ಲ. ಇದಾದ ನಂತರ ಆರಂಭವಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡದ ಭಾಗವಾಗಿದ್ದರು. ಆದರೆ ಅವರಿಂದ ಬಿಗ್ ಇನ್ನಿಂಗ್ಸ್ ಮೂಡಿ ಬರಲಿಲ್ಲ. ಆದರೆ, 30, 40 ರನ್ಗಳ ಎರಡು ಇನ್ನಿಂಗ್ಸ್ಗಳನ್ನು ಆಡಿದ್ದರು. ಇದೀಗ ಡಿಸೆಂಬರ್ 21 ರಿಂದ ಪ್ರಾರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಯಿಂದ ಪೃಥ್ವಿ ಶಾ ಅವರನ್ನು ಕೈಬಿಡಲಾಗಿದೆ. ಇದರ ಬೆನ್ನಲ್ಲೇ ತುಟಿ ಬಿಚ್ಚಿರುವ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹತಾಶೆಯ ನುಡಿಗಳನ್ನು ಬರೆದುಕೊಂಡಿದ್ದಾರೆ.

ದೇವರೇ ಹೇಳು, ನಾನು ಇನ್ನು ಏನೇನು ನೋಡಬೇಕು. 65 ಇನ್ನಿಂಗ್ಸ್ಗಳಲ್ಲಿ 55.7 ಸರಾಸರಿಯಲ್ಲಿ 3399 ರನ್ಗಳನ್ನು ಗಳಸಿರುವೆ. ವಿಜಯ್ ಹಜಾರ ಟೂರ್ನಿಯಲ್ಲಿ 126ರ ಸ್ಟ್ರೈಕ್ರೇಟ್ ಹೊಂದಿದ್ದೇನೆ. ಇಷ್ಟಾದರೂ ನಾನು ಉತ್ತಮನಲ್ಲ. ಆದರೂ ನಾನು ನಂಬಿಕೆಯನ್ನು ಕಳೆದುಕೊಂಡಿಲ್ಲ. ಕೆಲವರಾದರೂ ನನ್ನ ಮೇಲೆ ನಂಬಿಕೆ ಇಟ್ಟಿರುವ ಬಗ್ಗೆ ನನಗೆ ವಿಶ್ವಾಸವಿದೆ. ನಾನು ಮರಳಿ ಬರುವುದು ಖಚಿತ. ಓಂ ಸಾಯಿ ರಾಮ್' ಎಂದು ಬರೆಯುವ ಮೂಲಕ ಪೃಥ್ವಿ ಶಾ ಅವರು ಇನ್ಸ್ಟಾಗ್ರಾಮ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ (ನಾಯಕ), ಆಯುಷ್ ಮ್ಹಾತ್ರೆ, ಅಂಗ್ಕ್ರಿಶ್ ರಘುವಂಶಿ, ಜೈ ಬಿಸ್ತಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ಸಿದ್ಧೇಶ್ ಲಾಡ್, ಹಾರ್ದಿಕ್ ತಮೋರ್, ಪ್ರಸಾದ್ ಪವಾರ್, ಅಥರ್ವ ಅಂಕೋಲೇಕರ್, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ಜುನಾಯ್ಟನ್ ಖಾನ ಡೈಸ್, ವಿನಾಯಕ್ ಭೋರ್.