ಭಾರತ ತಂಡದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲೇ ಬಿರುಸಿನ ಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಮುಂಬೈ ನಾಯಕ ಶ್ರೇಯಸ್ ಅಯ್ಯರ್ 51 ಎಸೆತಗಳಲ್ಲಿ ಶತಕ ಸಿಡಿಸಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಅಯ್ಯರ್ 55 ಎಸೆತಗಳಲ್ಲಿ ಅಜೇಯ 114 ರನ್ ಗಳಿಸಿದರು. ಅಯ್ಯರ್ ಅವರ ಈ ಬಿರುಸಿನ ಇನ್ನಿಂಗ್ಸ್ನಿಂದಾಗಿ ಮುಂಬೈ ತಂಡವು 50 ಓವರ್ಗಳಲ್ಲಿ 382 ರನ್ಗಳ ಬೃಹತ್ ಸ್ಕೋರ್ ಕಲೆ ಹಾಕಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್ ನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯ ಕರ್ನಾಟಕ ಮತ್ತು ಮುಂಬೈ ತಂಡಗಳ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಕರ್ನಾಟಕ ವಿರುದ್ಧದ ಮುಂಬೈ ಬ್ಯಾಟರ್ಗಳು ರನ್ ಹೊಳೆ ಹರಿಸಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್ ಶುರು ಮಾಡಿದ ಮುಂಬೈ ತಂಡ ಕೇವಲ 6 ರನ್ ಗಳಿಸಿದ ಆಂಗ್ಕ್ರಿಶ್ ರಘುವಂಶಿ ವಿಕೆಟ್ ಕಳೆದುಕೊಂಡು ಉತ್ತಮ ಆರಂಭ ಪಡೆಯಲಿಲ್ಲ. ಆದಾಗ್ಯೂ, ಆರಂಭಿಕ ಆಯುಷ್ ಮ್ಹಾತ್ರೆ (78 ರನ್) ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾರ್ದಿಕ್ ತಮೋರ್ (84 ರನ್) ನಡುವೆ ಎರಡನೇ ವಿಕೆಟ್ಗೆ 139 ರನ್ಗಳ ಶತಕದ ಜೊತೆಯಾಟ ಆಡಿದರು. ಆಯುಷ್ 6 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರೆ, ಹಾರ್ದಿಕ್ 7 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿ ಮುಂಬೈ ತಂಡಕ್ಕೆ ನೆರವಾದರು.
ನಾಲ್ಕನೇ ಕ್ರಮಾಂಕದಲ್ಲಿ ಬಂದ ಕ್ಯಾಪ್ಟನ್ ಅಯ್ಯರ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಕೊನೆಯವರೆಗೂ ಕ್ರೀಸ್ನಲ್ಲಿ ಕಚ್ಚಿ ನಿಂತ ಅಯ್ಯರ್ ಕರ್ನಾಟಕ ಬೌಲರ್ಗಳನ್ನು ಕಾಡಿದರು. ಶ್ರೇಯಸ್ ಅಯ್ಯರ್ 207.27 ರ ಮಾರಕ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದರು. ಪರಿಣಾಮ ಅವರು 55 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ 114 ರನ್ ಗಳಿಸಿದರು. ಮತ್ತೊಂದೆಡೆ ಆಲ್ರೌಂಡರ್ ಶಿವಂ ದುಬೆ ಕೂಡ 36 ಎಸೆತಗಳಲ್ಲಿ ತಲಾ 5 ಸಿಕ್ಸರ್ಗಳು ಮತ್ತು ಬೌಂಡರಿಗಳ ನೆರವಿನಿಂದ 63 ರನ್ ಗಳಿಸಿ ಅಜೇಯರಾಗುಳಿದರು.
ಈ ವರ್ಷ ಶ್ರೇಯಸ್ ಅಯ್ಯರ್ ಅದ್ಭುತ ಫಾರ್ಮ್ನಲ್ಲಿದ್ದು, ಅತ್ಯಂತ ಸ್ಮರಣೀಯವಾಗಿದೆ. ಅವರ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2024ರ ಚಾಂಪಿಯನ್ ಆಗಿತ್ತು. ಇತ್ತೀಚೆಗೆ, ಅಯ್ಯರ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಮುಂಬೈ ಐದು ವಿಕೆಟ್ಗಳಿಂದ ಸೋಲಿಸಿತು. ಅಯ್ಯರ್ ಅವರ ಕೊಡುಗೆ ಕೇವಲ ನಾಯಕತ್ವಕ್ಕೆ ಸೀಮಿತವಾಗಿರಲಿಲ್ಲ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ 345 ರನ್ ಗಳಿಸಿದ್ದರು. ರಣಜಿ ಟ್ರೋಫಿಯಲ್ಲೂ ಅಯ್ಯರ್ 452 ರನ್ ಗಳಿಸಿದ್ದರು.