
ಬೆಂಗಳೂರು, ಸೆಪ್ಟೆಂಬರ್ 20: ವಿಜಯ್ ಹಜಾರೆ ಟೂರ್ನಿಯ ಭಾಗವಾಗಿ ಬೆಂಗಳೂರಿನಲ್ಲಿ ನಡೆದ ಮಹಾರಾಷ್ಟ್ರ-ಬೆಂಗಳೂರು ಮುಖಾಮುಖಿಯಲ್ಲಿ ಅಂಕಿತ್ ಬಾವ್ನೆ ರನ್ ಬಲದೊಂದಿಗೆ ಮಹಾರಾಷ್ಟ್ರ ತಂಡ ಕರ್ನಾಟಕಕ್ಕೆ 57 ರನ್ (ವಿಜೆಡಿ ವಿಧಾನದಿಂದ) ಸೋಲುಣಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮಹಾರಾಷ್ಟ್ರಕ್ಕೆ ಅಂಕಿತ್ ಬಾವ್ನೆ ಶತಕದ (104) ಬೆಂಬಲವಿತ್ತರು. ನಾಯಕ ರಾಹುಲ್ ತ್ರಿಪಾಠಿ ಕೂಡ ಅರ್ಧ ಶತಕ (70 ರನ್) ಸೇರಿಸಿದರು. ಹೀಗಾಗಿ ಮಹಾರಾಷ್ಟ್ರ 50 ಓವರ್ ಗೆ 8 ವಿಕೆಟ್ ಕಳೆದು 245 ರನ್ ಪೇರಿಸಿತ್ತು.
ಕರ್ನಾಟಕ ಇನ್ನಿಂಗ್ಸ್ ವೇಳೆ ಮಳೆ ಸುರಿದಿದ್ದರಿಂದ ವಿಜೆಡಿ (ಜಯದೇವನ್ ನಿಯಮ) ವಿಧಾನದ ಪ್ರಕಾರ 22.4 ಓವರ್ ಗೆ 165 ರನ್ ಗುರಿ ನೀಡಲಾಯಿತು. ಗುರಿ ಬೆನ್ನಟ್ಟಿದ ಕರ್ನಾಟಕಕ್ಕೆ ಬ್ಯಾಟ್ಸ್ಮನ್ ಗಳ ಬೆಂಬಲ ದೊರೆಯದಾಯಿತು. ಚಿದಂಬರಮ್ ಗೌತಮ್ 29, ಪವನ್ ದೇಶಪಾಂಡೆ 31 ರನ್ ನೀಡಿದ್ದೇ ಹೆಚ್ಚೆನಿಸಿತು.
ಹೀಗಾಗಿ ಕರ್ನಾಟಕ 22.4 ಓವರ್ ಗೆ 6 ವಿಕೆಟ್ ಕಳೆದು 107 ಪೇರಿಸುವುದರೊಂದಿಗೆ 57 ರನ್ ಗಳಿಂದ ಮಹಾರಾಷ್ಟ್ರದೆದುರು ಸೋಲೊಪ್ಪಿಕೊಂಡಿತು. ಮಳೆಯಿಂದ ಆಟಕ್ಕೆ ಅಡಚಣೆಯಾಯಿತೆಂದರೂ ರಾಜ್ಯ ತಂಡದಿಂದ ಮೂವರು ಬಿಟ್ಟರೆ (ರವಿಕುಮಾರ್ ಸಮರ್ಥ್ 17 ರನ್) ಉಳಿದವರು 15ಕ್ಕೂ ಕಡಿಮೆ ರನ್ ಗೆ ವಿಕೆಟ್ ಒಪ್ಪಿಸಿದ್ದು, ಸೋಲಿಗೆ ಕಾರಣವಾಯಿತು.