
ಬೆಂಗಳೂರು, ಅಕ್ಟೋಬರ್ 20: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬೈ ತಂಡ 4 ವಿಕೆಟ್ ಜಯ ದಾಖಲಿಸಿದೆ. ಆದಿತ್ಯ ತಾರೆ ಮತ್ತು ಸಿದ್ದೇಶ್ ಲಾಡ್, ಮುಂಬೈ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಡೆಲ್ಲಿ ತಂಡ, 45.4 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 177 ರನ್ ಪೇರಿಸಿ, ಬಲಿಷ್ಟ ಮುಂಬೈಗೆ 178 ರನ್ ಗುರಿ ನೀಡಿತ್ತು. ಡೆಲ್ಲಿ ಪರ ಧೃವ್ ಶೆರೋಯ್ 31, ಹಿಮ್ಮತ್ ಸಿಂಗ್ 41, ಪವನ್ ನೇಗಿ 21, ಸುಬೋತ್ ಭಾಟಿ 25 ರನ್ ಸೇರಿಸಿದ್ದರು.
ಚೇಸಿಂಗ್ ಗೆ ಇಳಿದ ಶ್ರೇಯಸ್ ಐಯ್ಯರ್ ಬಳಗ 35 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದು 180 ರನ್ ಪೇರಿಸುವುದರೊಂದಿಗೆ 3ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಕ್ಕಿತು. ಆರಂಭಿಕ ಆಟಗಾರರಾದ ಪೃಥ್ವಿ ಶಾ (8 ರನ್) ಮತ್ತು ಅಜಿಂಕ್ಯ ರಹಾನೆ (10 ರನ್) ಬೇಗನೆ ಔಟಾದರಾದರೂ ಸಿದ್ದೇಶ್, ಆದಿತ್ಯ ತಂಡಕ್ಕೆ ಬಲ ತುಂಬಿದರು.
ಕ್ರೀಸ್ ಗೆ ಅಂಟಿ ನಿಂತ ಸಿದ್ದೇಶ್ 68 ಎಸೆತಗಳಿಗೆ 48 ರನ್, ಆದಿತ್ಯ ತಾರೆ 89 ಎಸೆತಗಳಿಗೆ 71 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಆದಿತ್ಯ ತಾರೆ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.