ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕರ್ನಾಟಕ ವಿಜಯ್ ಹಜಾರೆ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಈ ಮೂಲಕ ಐದನೇ ಬಾರಿ ಟೂರ್ನಿಯ ಫೈನಲ್ಗೆ ಅರ್ಹತೆ ಪಡೆದು ಬೀಗಿದೆ. ಸೆಮಿಫೈನಲ್ ಪಂದ್ಯದಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದ ದೇವದತ್ ಪಡಿಕ್ಕಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಮಯಾಂಕ್ ಪಡೆ ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ಹರಿಯಾಣ 50 ಓವರ್ಗಳಲ್ಲಿ 9 ವಿಕೆಟ್ಗೆ 237 ರನ್ ಕಲೆಹಾಕಿತು. ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಕರ್ನಾಟಕ 47.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 238 ರನ್ ಸೇರಿಸಿ ಫೈನಲ್ ಪ್ರವೇಶಿಸಿತು.

ಟೂರ್ನಿಯುದ್ದಕ್ಕೂ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದ ನಾಯಕ ಮಯಾಂಕ್ ಅಗರ್ವಾಲ್ ಹರಿಯಾಣ ವಿರುದ್ಧ ನಿರಾಸೆ ಅನುಭವಿಸಿದರು. 238 ರನ್ಗಳ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ಪರ ಇನಿಂಗ್ಸ್ ಆರಂಭಿಸಿದ ಮಯಾಂಕ್ ತಾವು ಎದುರಿಸಿದ ಮೂರನೇ ಎಸೆತದಲ್ಲೇ ಔಟ್ ಆಗಿ ಪೆವಿಲಿಯನ್ ಸೇರಿದರು.
4 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅನುಭವಿ ಬ್ಯಾಟರ್ ದೇವದತ್ ಪಡಿಕ್ಕಲ್ ಹಾಗೂ ಕೆವಿ ಅನೀಶ್ ಆಧಾರವಾದರು. ಈ ಜೋಡಿ ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿತು. ಪವರ್ ಪ್ಲೇನಲ್ಲಿ ಮತ್ತೆ ವಿಕೆಟ್ ಬೀಳದಂತೆ ನೋಡಿಕೊಂಡ ಜೋಡಿ ಆರ್ಭಟಿಸಿತು. ತಂಡಕ್ಕೆ ಬೇಕಿದ್ದ ಅಗತ್ಯ ರನ್ಗಳನ್ನು ಕಲೆ ಹಾಕಿದ ಜೋಡಿ, ಸುಮಾರು 15 ಓವರ್ ಬ್ಯಾಟಿಂಗ್ ಮಾಡಿ 62 ರನ್ ಸೇರಿಸಿತು. ಅನೀಶ್ 22 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಮೂರನೇ ವಿಕೆಟ್ಗೆ ಆರಂಭಿಕ ದೇವದತ್ ಪಡಿಕ್ಕಲ್ ಅವರನ್ನು ಸೇರಿಕೊಂಡ ಆರ್ ಸ್ಮರಣ್ ಉತ್ತಮ ಆಟದ ಪ್ರದರ್ಶನ ನೀಡಿತು. ಮಿಡ್ಲ್ ಓವರ್ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ನೆಲಕಚ್ಚಿ ಬ್ಯಾಟ್ ಮಾಡಿದ ಜೋಡಿ ತಂಡದ ಮುಖದಲ್ಲಿ ಮಂದಹಾಸ ಮೂಡಿಸಿತು. ಸುಮಾರು 24 ಓವರ್ಗಳ ವರೆಗೆ ವಿಕೆಟ್ ಕಾಯ್ದುಕೊಂಡ ಆಡಿದ ಜೋಡಿ, ಹರಿಯಾಣ ಬೌಲರ್ಗಳ ಸವಾಲನ್ನು ಮೆಟ್ಟಿನಿಲ್ಲುತ್ತಾ ಸಾಗಿತು. ಅಲ್ಲದೆ 122 ರನ್ಗಳ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಸೊಗಸಾಗಿ ಆಡುತ್ತಿದ್ದ ದೇವದತ್ ಪಡಿಕ್ಕಲ್ 113 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 86 ರನ್ ಸಿಡಿಸಿ ಔಟ್ ಆದರು.
ಮಧ್ಯಮ ಕ್ರಮಾಂಕದ ಆರ್ ಸ್ಮರಣ್ 94 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 76 ರನ್ ಬಾರಿಸಿ ಔಟ್ ಆದರು. ಶ್ರೇಯಸ್ ಗೋಪಾಲ್ ಅಜೇಯ 23, ಅಭಿವನ್ ಮನೋಹರ್ ಅಜೇಯ 2 ರನ್ ಸಿಡಿಸಿ ಜಯದಲ್ಲಿ ಮಿಂಚಿದರು.
ಹರಿಯಾಣ ಪರ ನಿಶಾಂತ್ ಸಿಂಧು 2 ವಿಕೆಟ್ ಪಡೆದು ಅಬ್ಬರಿಸಿದರು.
ಮೊದಲು ಬ್ಯಾಟ್ ಮಾಡಿದ ಹರಿಯಾಣದ ಯಾವೊಬ್ಬ ಬ್ಯಾಟರ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಎರಡನೇ ವಿಕೆಟ್ಗೆ ಹಿಮಾಂಶು ರಾಣಾ, ನಾಯಕ ಅಂಕಿತ್ ಕುಮಾರ್ ಜೋಡಿ 70 ರನ್ ಜೊತೆಯಾಟ ನೀಡಿತು. ಆದರೆ ಯಾರು ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಹಿಮಾಂಶು ರಾಣಾ 44, ಅಂಕಿ ತ್ ಕುಮಾರ್ 48, ರಾಹುಲ್ ತೆವಾಟಿಯಾ 22, ಅನುಜ್ ಠಾಕೂರ್ 23, ಸುಮಿತ್ ಕುಮಾರ್ 21 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು.
ಕರ್ನಾಟಕದ ಪರ ಅಭಿಲಾಷ್ ಶೆಟ್ಟಿ 4, ಶ್ರೇಯಸ್ ಗೋಪಾಲ್ ಹಾಗೂ ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಪಡೆದರು.