ದೇಶಿಯ ಏಕದಿನ ಟೂರ್ನಿ ವಿಜಯ್ ಹಜಾರೆ ಸರಣಿಯಲ್ಲಿ ಕರ್ನಾಟಕ ತನ್ನ ಅಮೋಘ ಆಟವನ್ನು ಮುಂದುವರೆಸಿದೆ. ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ಕರ್ನಾಟಕ 7 ವಿಕೆಟ್ಗಳಿಂದ ವಿದರ್ಭ ತಂಡವನ್ನು ಮಣಿಸಿ, ಮತ್ತೊಮ್ಮೆ ಟೂರ್ನಿಯ ಸೆಮಿಫೈನಲ್ಗೆ ಪ್ರವೇಶ ಪಡೆದಿದೆ.
ಮೊದಲು ಬ್ಯಾಟ್ ಮಾಡಿದ ವಿದರ್ಭ 44.5 ಓವರ್ಗಳಲ್ಲಿ 173 ರನ್ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕರ್ನಾಟಕ 40.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್ ಸೇರಿಸಿ ಸೆಮಿಫೈನಲ್ ಪ್ರವೇಶಿಸಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿದರ್ಭ ಆರಂಭ ಕಳಪೆಯಾಗಿತ್ತು. ತಂಡದ ಸ್ಟಾರ್ ಆರಂಭಿಕರು ಉತ್ತಮ ಜೊತೆಯಾಟದ ಕಾಣಿಕೆ ನೀಡುವಲ್ಲಿ ವಿಫಲರಾದರು. 39 ರನ್ ಆಗುವಷ್ಟರಲ್ಲಿ ವಿದರ್ಭ ತಂಡದ ನಾಲ್ವರು ಬ್ಯಾಟರ್ಗಳು ಪೆವಿಲಿಯನ್ ಸೇರಿದರು.
ತಾಳ್ಮೆಯಿಂದ ಬ್ಯಾಟ್ ಮಾಡುತ್ತಿದ್ದ ಆರಂಭಿಕ ಅಕ್ಷಯ್ ವಾಡ್ಕರ್ 41 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 32 ರನ್ ಬಾರಿಸಿ ಔಟ್ ಆದರು. ಉಳಿದಂತೆ ಯಶ್ ಠಾಕುರ್ (38), ಶುಭಮ್ ದುಬೆ (41) ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರುಗಳ ಉತ್ತಮ ಆಟದ ಪರಿಣಾಮ ವಿದರ್ಭ ಸಾಧಾರಣ ಮೊತ್ತವನ್ನು ಕಲೆ ಹಾಕಿತು.
ಕರ್ನಾಟಕದ ಪರ ವಿಜಯಕುಮಾರ್ ವೈಶಾಖ್ 8.5 ಓವರ್ಗಳಲ್ಲಿ 44 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಉಳಿದಂತೆ ಮನೋಜ್ ಭಂಡಾರೆ, ಜೆ.ಸುಚಿತ್ ತಲಾ ಎರಡು ವಿಕೆಟ್ ಕಬಳಿಸಿದರು.
ಗುರಿಯನ್ನು ಹಿಂಬಾಲಿಸಿದ ಕರ್ನಾಟಕದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಆರ್.ಸಮರ್ಥ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ ಗೆ 82 ರನ್ಗಳ ಉತ್ತಮ ಜೊತೆಯಾಟದ ಕಾಣೀಕೆ ನೀಡಿದರು. ನಾಯಕ ಮಯಾಂಕ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 51 ರನ್ ಸಿಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ನಿಕಿನ್ ಜೋಸ್ 31, ಕೃಷ್ಣಾ ಶ್ರೀಜಿತ್ 15 ರನ್ ಸಿಡಿಸಿದರು.

ವಿದರ್ಭ 44.5 ಓವರ್ಗಳಲ್ಲಿ 173
ಕರ್ನಾಟಕ 40.3 ಓವರ್ಗಳಲ್ಲಿ 3 ವಿಕೆಟ್ಗೆ 177