
ಬೆಂಗಳೂರು, ಸೆಪ್ಟೆಂಬರ್ 21: ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾರೆ ಎಲೈಟ್ ಗ್ರೂಪ್ ಎಯ ಕರ್ನಾಟಕ-ಮುಂಬೈ ಮುಖಾಮುಖಿಯಲ್ಲಿ ಕರ್ನಾಟಕ 88 ರನ್ ಸೋಲನುಭವಿಸಿದೆ. ಮುಂಬೈ ನಾಯಕ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಐಯ್ಯರ್ ಆಕರ್ಷಕ ಶತಕ ನೆರವಿನಿಂದ ಮುಂಬೈ ಸುಲಭ ಗೆಲುವನ್ನಾಚರಿಸಿತು.
ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಮುಂಬೈಗೆ ಬ್ಯಾಟ್ಸ್ಮನ್ ಗಳ ಭರ್ಜರಿ ಬೆಂಬಲ ದೊರೆಯಿತು. ಆರಂಭಿಕ ಆಟಗಾರರಾದ ಪೃಥ್ವಿ ಶಾ 60, ರಹಾನೆ 148, ಶ್ರೇಯಸ್ ಐಯ್ಯರ್ 110 ರನ್ ಸೇರಿಸಿದ್ದು ತಂಡ ಎದುರಾಳಿಗೆ ಗರಿಷ್ಠ ರನ್ ಗುರಿ ನೀಡಲು ನೆರವಾಯಿತು.
ಹೀಗಾಗಿ ರಹಾನೆ ಬಳಗ 50 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದು 362 ರನ್ ಪೇರಿಸಿ ಆತಿಥೇಯ ಕರ್ನಾಟಕಕ್ಕೆ ಭರ್ಜರಿ 363 ರನ್ ಗುರಿ ನೀಡಿತು. ಗುರಿ ಬೆನ್ನತ್ತಿದ್ದ ಕರ್ನಾಟಕ ಮಯಾಂಕ್ ಅಗರ್ವಾಲ್ ಅರ್ಧ ಶತಕದ ಹೊರತಾಗಿಯೂ 45 ಓವರ್ ಗೆ ಎಲ್ಲಾ ವಿಕೆಟ್ ಕಳೆದು 274 ರನ್ ಪೇರಿಸಿ ಶರಣಾಯಿತು.
ಕರ್ನಾಟಕ ಇನ್ನಿಂಗ್ಸ್ ವೇಳೆ ಮುಂಬೈಯ ಶ್ಯಾಮ್ಸ್ ಮುಲಾನಿ ಅವರು 71 ರನ್ನಿಗೆ 4 ವಿಕೆಟ್ ಕೆಡವಿ ಗಮನ ಸೆಳೆದರು. ಒಟ್ಟಿನಲ್ಲಿ ಸರಿಯಾದ ಬ್ಯಾಟಿಂಗ್ ಬೆಂಬಲವಿಲ್ಲದ್ದೇ ವಿನಯ್ ಕುಮಾರ್ ಬಳಗದ ಹಿನ್ನೆಡೆಗೆ ಕಾರಣವಾಯ್ತು. ಸೆಪ್ಟೆಂಬರ್ 20ರಂದು ನಡೆದಿದ್ದ ಪಂದ್ಯದಲ್ಲೂ ಮಹಾರಾಷ್ಟ್ರ ಎದುರು ಕರ್ನಾಟಕ 57 ರನ್ ಸೋಲನುಭವಿಸಿತ್ತು.